Monthly Archives: ಫೆಬ್ರವರಿ 2011

ಕನ್ನಡ ಅಂಕಿಗಳನ್ನೇ ಬಳಸಿ ೦ ೧ ೨ ೩ ೪ ೫ ೬ ೭ ೮ ೯

ಕರ್ನಾಟಕದಲ್ಲಿ ಹಲವೆಡೆ ದೊರೆತಿರುವ ಕ್ರಿಪೂ ೩ನೇ ಶತಮಾನದ ಪ್ರಾಕೃತ ಭಾಷೆ, ಬ್ರಾಹ್ಮೀಯ ಲಿಪಿಯ ಅಶೋಕನ ಶಾಸನಗಳಲ್ಲಿ ಮೊದಲಿಗೆ ಅಂಕಿಗಳು ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦, ೫೦, ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ. ದಕ್ಷಿಣ ಬ್ರಾಹ್ಮೀ ಲಿಪಿಯಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಅಂಕಿಗಳೂ ಇವೆ.

ಕ್ರಿ.ಶ. ೮ನೆಯ ಶತಮಾನದಿಂದಲೇ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ.

ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದಾರೆ. ರಾಜ್ಯದ ಹಲವು ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿವೆ. ಬೆಂಗಳೂರಿನ ಕರ್ಮವೀರ, ಕಸ್ತೂರಿ ಹಾಗೂ ಹೊಸತು, ಸಂವಾದ ಮತ್ತು ಸಂಯುಕ್ತ ಕರ್ನಾಟಕ, ಹೊಸ ದಿಗಂತಗಳ ಪುರವಣಿಗಳಲ್ಲಿ ಕನ್ನಡ ಅಂಕಿಗಳಿವೆ. ಕನ್ನಡ ಪ್ರಭದ ಅಂತರಜಾಲ ಆವೃತ್ತಿಯಲ್ಲಿ ಕನ್ನಡ ಅಂಕಿಗಳಿವೆ. ದೇಶಕಾಲದ ಸಹಯೋಗದಲ್ಲಿ ಪ್ರಜಾವಾಣಿ ಆರಂಭಿಸಿರುವ ಸಾಹಿತ್ಯ ಪುರವಣಿಯಲ್ಲಿ ಕನ್ನಡ ಅಂಕಿಗಳಿರುವುದು ಮೆಚ್ಚುವಂಥದು. ಕನ್ನಡ ಪತ್ರಿಕೆಗಳಲ್ಲಿ ಎಲ್ಲ ಕಡೆ ಕನ್ನಡ ಅಂಕಿಗಳೇ ಬಳಕೆಯಾಗಲಿ.

ರಾಜ್ಯಮಟ್ಟದ ಕನ್ನಡ ಪತ್ರಿಕೆಗಳು ಜಿಲ್ಲಾ ಆವೃತ್ತಿಗಳನ್ನು ಮುದ್ರಿಸಿ ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳಿಗೆ ಅಸಮಾನತೆಯ ಸ್ಪರ್ಧೆಯನ್ನು ಒಡ್ಡಿರುವುದು ಆತಂಕದ ಸಂಗತಿ. ಇವು ಸುದ್ದಿಗಳಿಗೆ ಜಿಲ್ಲೆಯ ಬೇಲಿಯನ್ನು ಹಾಕಿರುವುದಲ್ಲದೆ ರಾಜಧಾನಿಯ ಭಾಷಾವಿಕಾರಗಳನ್ನು ರಾಜ್ಯಾದ್ಯಂತ ಹರಡುತ್ತಿವೆ. ಆರೋಗ್ಯಕರವೂ ಜೀವಂತವೂ ಆದ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಉಳಿಸಿ ಬೆಳಸುತ್ತಿರುವ ಜಿಲ್ಲಾಮಟ್ಟದ ಹಲವು ಪತ್ರಿಕೆಗಳು ಈ ಅಸಮಾನ ಸ್ಪರ್ಧೆಯಿಂದ ಪ್ರಕಟಣೆಯನ್ನು ನಿಲ್ಲಿಸುವ ಹಂತ ತಲುಪಿವೆ. ರಾಜಧಾನಿಯ ಮಾಧ್ಯಮಗಳ ಕನ್ನಡವು ಪ್ರತಿರೋಧ ಸಾಮರ್ಥ್ಯವನ್ನು ಕಳೆದುಕೊಂಡ ಏಡ್ಸ್ ರೋಗಿಯಂತಾಗಿದ್ದು ಅದಕ್ಕೆ ತುರ್ತಾಗಿ ಕರ್ನಾಟಕದ ವಿವಿಧ ಪ್ರದೇಶಗಳಿಂದ ಆರೋಗ್ಯಕರ ರಕ್ತದಾನವಾಗಬೇಕಿದೆ. ಇದಕ್ಕೆ ವಿರುದ್ಧವಾಗಿ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತು ಹಲವು ಜಿಲ್ಲೆಗಳ ಸಣ್ಣ ಪತ್ರಿಕೆಗಳು ತಮ್ಮ ಜಿಲ್ಲ್ಲಾ ಆವೃತ್ತಿಗಳ ಬೇಲಿಯನ್ನು ತೆಗೆದುಹಾಕಿ ಸಮಗ್ರ ಆವೃತ್ತಿಗಳನ್ನು ಪ್ರಾರಂಭಿಸಿರುವುದು ಸ್ವಾಗತಾರ್ಹ. ಕನ್ನಡ ಅಂಕಿಗಳನ್ನೇ ಬಳಸುತ್ತಿರುವ ಮೈಸೂರಿನ ಆಂದೋಲನ, ಮೈಸೂರು ಮಿತ್ರ ಅಂಥ ಸಮಗ್ರ ಪತ್ರಿಕೆಗಳಾಗಿರುವುದು ಅಭಿಮಾನದ ಸಂಗತಿ. ಆದರೆ ಸರಕಾರದ ಮಾಸಪತ್ರಿಕೆ ಜನಪದ ಇಂಗ್ಲಿಷ್ ಅಂಕಿಗಳನ್ನೇ ಬಳಸುತ್ತಿರುವುದು ಖಂಡನೀಯ.

ಕನ್ನಡ ಭಾಷೆಯ ಸೂಕ್ಷ್ಮಗಳನ್ನು ಓದುಗರಿಗೆ ಪರಿಚಯಿಸಬೇಕಾದ ಕನ್ನಡ ಪತ್ರಿಕೆಗಳು ಕನ್ನಡದಲ್ಲಿ ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬಳಸುತ್ತಿರುವುದು ಆತಂಕದ ಸಂಗತಿ. ನಿರ್ದಿಷ್ಟ ವ್ಯಕ್ತಿಗಳ ಎದುರು ನೇರವಾಗಿ ಮಾತನಾಡುವಾಗ ಅವರ ಭಾಷಿಕ ಸಾಮರ್ಥ್ಯದ ಅರಿವು ನಮಗಿರುತ್ತದೆ. ಅವರಿಗೆ ಅರ್ಥವಾಗುವ ಎಷ್ಟು ಭಾಷೆಗಳಲ್ಲಿಯೂ ನಾವು ಮಾತನಾಡಬಹುದು. ಆದರೆ ನಮ್ಮ ಎದುರು ಇಲ್ಲದವರನ್ನು ಉದ್ದೇಶಿಸಿ ಮಾತನಾಡುವಾಗ, ಬರೆಯುವಾಗ ಸಾಮಾನ್ಯ ಕನ್ನಡವನ್ನೇ ಬಳಸಬೇಕು. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ ‘ತಾEA ದೇವರು!’ ಎಂದು ಬರೆಯುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಇಂಗ್ಲಿಷ್ ಆದ್ಯಕ್ಷರಗಳಾದ ವಿ ಮತ್ತು ಕೆ ಗಳನ್ನು ಕನ್ನಡ ಪದ `ಲವಲವಿಕೆ’ಯಲ್ಲಿರುವ ‘ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು ‘ಲವಲ’ ಎಂದು ಅರ್ಥಹೀನವಾಗಿಸಿ ಅಂಗವಿಕಲ(‘ವಿಕಲಚೇತನ’?)ಗೊಳಿಸಿರುವುದು ಹಾಸ್ಯಾಸ್ಪದ. ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ಕನ್ನಡ ಪತ್ರಿಕೆಯ ಹೆಸರಿನಲ್ಲಿಯೇ ವಿಜಯ Next(ನೆಕ್ಸ್ಟ್) ಎಂದು ಕಲಬೆರಕೆ ಮಾಡಿ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳನ್ನು ಬಳಸಲಾಗುತ್ತಿದೆ. ಕೆಲವು ಕನ್ನಡ ಸಂಪಾದಕರು (`ಆಫ್ ಕೋರ್ಸ್’ ಇತ್ಯಾದಿ) ಇಂಗ್ಲಿಷ್ ಪದಗಳನ್ನು ಅನಗತ್ಯವಾಗಿ ಬೆರಸುವ ರೋಗದಿಂದ ನರಳುತ್ತಿರುವಂತಿದೆ. ಇಂಗ್ಲಿಷಿನಲ್ಲಿ ಮಾತನಾಡುವಾಗ, ಬರೆಯುವಾಗ ಒಂದು ಕನ್ನಡ ಪದವೂ ನುಸುಳದಂತೆ ಎಚ್ಚರವಹಿಸುವ ನಾವು ಕನ್ನಡದ ಬಗ್ಗೆಯೂ ಅಷ್ಟೇ ಪ್ರಬುದ್ಧರಾಗಿ ವರ್ತಿಸುವುದು ಯಾವಾಗ?

ಕನ್ನಡ ಅಂತರಜಾಲ ತಾಣಗಳಲ್ಲಿ ಹೆಚ್ಚಿನವು ಕನ್ನಡತನದ ತಾಣಗಳಲ್ಲದಿರುವುದು ವಿಷಾದದ ಸಂಗತಿ. ಇಲ್ಲಿ ಕನ್ನಡಿಗರ ಜೊತೆ ಕನ್ನಡದ ಬಗ್ಗೆ ಮಾತನಾಡುವಾಗ ಅನಗತ್ಯವಾಗಿ ಇಂಗ್ಲಿಷ್ ಬಳಸುವ ಪ್ರವೃತ್ತಿ ಹೆಚ್ಚಿದೆ. ಕೆಲವು ಜಾಲತಾಣಗಳು ತಮ್ಮ ಹೆಸರುಗಳನ್ನೇ ಇಂಗ್ಲಿಷಿನಲ್ಲಿ ಹೇಳಿಕೊಂಡು ಧನ್ಯತೆಯನ್ನು ಅನುಭವಿಸುತ್ತಿವೆ (‘ದಟ್ಸ್ ಕನ್ನಡ.ಕಾಂ’, ‘ಕನ್ನಡ ಬ್ಲಾಗರ್ಸ್!’). ಎಫ್ ಎಂ. ತಂತ್ರಜ್ಞಾನದ ಪರಿಣಾಮವಾಗಿ ಆಕಾಶವಾಣಿಯು ಕೇಳುಗರನ್ನು ಮತ್ತೆ ಆಕರ್ಷಿಸುತ್ತಿದೆ. ಇಲ್ಲಿಯವರೆಗೆ ಆಕಾಶವಾಣಿಯಲ್ಲಿ ಸ್ವಚ್ಛ ಕನ್ನಡ ಭಾಷಾರೂಪಗಳನ್ನು ಕೇಳಲು ಅವಕಾಶವಿತ್ತು. ಈಗ ಅನಗತ್ಯ ಇಂಗ್ಲಿಷ್ ಕಲಬೆರಕೆಯ ರೂಪಗಳು ಮೊಳಗುತ್ತಿವೆ. ಸರಕಾರಿ ಸ್ವಾಮ್ಯದ ಆಕಾಶವಾಣಿಯ ‘ರೇನ್ ಬೊ ಎಫ್ ಎಂ’ (ಕನ್ನಡ ಕಾಮನಬಿಲ್ಲು!) ಎಂಬ ವಾಹಿನಿಯಲ್ಲಿ ‘ಲಂಚ್ ಬಾಕ್ಸ್’. ‘ಡಿನ್ನರ್ ಟೈಮ್’ ಹೆಸರಿನ ಕನ್ನಡ ಕಾರ್ಯಕ್ರಮಗಳಲ್ಲದೆ ಇಂಗ್ಲಿಷ್ ಕಾರ್ಯಕ್ರಮಗಳೂ ಸಾಕಷ್ಟು ಇರುವುದು ಸಖೇದಾಶ್ಚರ್ಯದ ಸಂಗತಿ. ಖಾಸಗಿ ಎಫ್ಎಂ ವಾಹಿನಿಗಳ ಕನ್ನಡದ ಸ್ಥಿತಿಯಂತೂ ಶೋಚನೀಯ. ಕಾರ್ಯಕ್ರಮ ನಿರೂಪಕರು ಅನಗತ್ಯವಾಗಿ ಅರ್ಧವಾಕ್ಯ ಕನ್ನಡ, ಅರ್ಧವಾಕ್ಯ ಇಂಗ್ಲಿಷ್ ಬೆರೆಸಿ ಮಾತನಾಡುವುದರಿಂದ ಕೇಳಲು ಜುಗುಪ್ಸೆಯಾಗುತ್ತದೆ. ‘ಸಖತ್ ಹಾಟ್ ಮಗಾ!’, ‘ಕೇಳಿ ಕೇಳಿಸಿ ‘ಲೈಫ್’ ನಿಮ್ಮದಾಗಿಸಿ’ ಎಂದು ಉಲಿಯುವ ಈ ವಾಹಿನಿಗಳು ಕನ್ನಡತನದ ‘ಬದುಕ’ನ್ನು ನಮ್ಮದಾಗಿಸುವುದು ಯಾವಾಗ? ಇವುಗಳಿಗೆ ಕನ್ನಡತನದ ‘ಚುರುಕು’ ಮುಟ್ಟಿಸುವುದು ಹೇಗೆ?

ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು ‘ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ಇತ್ಯಾದಿ ಇಂಗ್ಲಿಷಿನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು.

ರಾಜಧಾನಿಯ ಮಾಧ್ಯಮಗಳು ಕನ್ನಡದಲ್ಲಿ ಅನಗತ್ಯವಾಗಿ ಇಂಗ್ಲಿಷನ್ನು ಬೆರೆಸಿ ಕನ್ನಡಿಗರಲ್ಲಿ ಗೊಂದಲ, ಕೀಳರಿಮೆ ಬೆಳೆಸುತ್ತಿವೆ. ಕನ್ನಡವನ್ನು ಚೆನ್ನಾಗಿ ಕಲಿಯಬೇಕು ಎನ್ನುವುದಕ್ಕಿಂತ ಇಂಗ್ಲಿಷ್ ಬೆರಸಿ ಮಾತನಾಡುವುದೇ ದೊಡ್ಡದು ಎಂಬ ತಪ್ಪು ಸಂದೇಶವನ್ನು ನೀಡುತ್ತಿವೆ. ಕನ್ನಡವನ್ನು ಚೆನ್ನಾಗಿ ಕಲಿಯದಿರುವುದರಿಂದ ಇಂಗ್ಲಿಷನ್ನೂ ಸಮರ್ಪಕವಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂಬ ಸತ್ಯವನ್ನು ಮರೆಮಾಚಲಾಗುತ್ತಿದೆ. ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವ ಮೂಲಕ ಭಾಷಾಕಲಿಕೆಯ ಕೌಶಲಗಳನ್ನು ಗಳಿಸಿಕೊಂಡರೆ ಅನಂತರ ಎಷ್ಟೂ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಎಂಬ ಶೈಕ್ಷಣಿಕ ಸತ್ಯವನ್ನು ಮರೆಮಾಚಿ ಒಂದನೆಯ ತರಗತಿಯಿಂದಲೇ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ.

ಗೋಕಾಕ್ ವರದಿಯ ಫಲವಾಗಿ ಒಂದನೆಯ ತರಗತಿಯಿಂದ ರಾಜ್ಯಭಾಷೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಸರಕಾರದ ಆದೇಶವನ್ನು ಭಾಷಾ ಅಲ್ಪಸಂಖ್ಯಾತರು ವಿರೋಧಿಸಿದರು. ಸಂವಿಧಾನ ನೀಡಿರುವ ರಕ್ಷಣೆಯಂತೆ ತಮ್ಮ ಮಕ್ಕಳಿಗೆ ಒಂದನೆಯ ತರಗತಿಯಲ್ಲಿ ಮಾತೃಭಾಷೆಯನ್ನು ಮಾತ್ರ ಕಲಿಸಬೇಕೆಂದೂ ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ, ಅಂದರೆ ಮೂರನೆಯ ತರಗತಿಯಿಂದ, ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಮಾತ್ರ ಕಡ್ಡಾಯವಾಗಿ ಕನ್ನಡವನ್ನು ಕಲಿಸಬಹುದೆಂದೂ ಉಚ್ಚ ನ್ಯಾಯಾಲಯದಿಂದ ರಕ್ಷಣೆ ಪಡೆದರು. ಆದರೆ ಆಂಗ್ಲೋ ಇಂಡಿಯನ್ನರನ್ನು ಬಿಟ್ಟು ಬೇರೆ ಯಾರ ಮಾತೃಭಾಷೆಯಲ್ಲದ, ಪರಿಸರದ ಭಾಷೆಯಾದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸಲು ಭಾಷಾ ಅಲ್ಪಸಂಖ್ಯಾತರ ಮತ್ತು ಕೆಲವು ಕನ್ನಡಿಗರ ಆಕ್ಷೇಪವಿಲ್ಲ! ಸರ್ವೋನ್ನತ ನ್ಯಾಯಾಲಯ ಎತ್ತಿ ಹಿಡಿದಿದ್ದ, ಪ್ರಾಥಮಿಕ ತರಗತಿಗಳಲ್ಲಿ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಅಧ್ಯಯನದ ವಿಷಯ ಮತ್ತು ಮಾಧ್ಯಮ ಎಂಬ ರಾಜ್ಯ ಸರಕಾರದ ಭಾಷಾನೀತಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಮಾತ್ರ ಮಿತಗೊಳಿಸಿ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಮಾಧ್ಯಮಕ್ಕೆ ಅವಕಾಶ ನೀಡಿ ‘ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ, ಇಲ್ಲದವರಿಗೆ ಕನ್ನಡ ಮಾಧ್ಯಮ’ ಎಂಬ ಶೈಕ್ಷಣಿಕವಲ್ಲದ, ಹೊಸ ಸಾಮಾಜಿಕ ಅಸಮಾನತೆಯನ್ನು ಪೋಷಿಸಿದೆ.

ಈ ತೀರ್ಪಿನ ವಿರುದ್ಧ ರಾಜ್ಯ ಸರಕಾರವು ಸಲ್ಲಿಸಿರುವ ಮೇಲ್ಮನವಿಯು ಸರ್ವೋನ್ನತ ನ್ಯಾಯಾಲಯದ ಮುಂದೆ ಇದ್ದು ಅದು ಬೇಗ ಇತ್ಯರ್ಥವಾಗಿ ಎಲ್ಲ ಬಗೆಯ ಶಾಲೆಗಳ ಪ್ರಾಥಮಿಕ ತರಗತಿಗಳಲ್ಲಿ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಲಿಕೆಯ ವಿಷಯ ಮತ್ತು ಮಾಧ್ಯಮವಾಗಬೇಕು. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ತರಗತಿಗಳಲ್ಲಿ ಮಗುವಿಗೆ ಪರಿಚಯವಿರುವ ಅದರ ಮಾತೃಭಾಷೆ/ ಪರಿಸರಭಾಷೆಯಾದ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡಬೇಕು. ಎರಡನೆಯ ಭಾಷೆಯನ್ನು(ಇಂಗ್ಲಿಷ್) ಕಲಿಯುವ ಹಂತದಲ್ಲಿ ಕೇಳುವ ಮಾತನಾಡುವ ಕೌಶಲಗಳನ್ನು ಮಾತ್ರ ಕಲಿಸಬೇಕು. ಐದನೆಯ ತರಗತಿಯಿಂದ ಓದುವ, ಬರೆಯುವ ಕೌಶಲಗಳನ್ನು ಕಲಿಸಬೇಕು ಎಂಬ ಶೈಕ್ಷಣಿಕ ನೀತಿಯ ಸ್ಪಷ್ಟ ಅನುಷ್ಠಾನವಾಗಬೇಕು.

ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-: ವೈವ : ೭೮ :೨೦೦೦-೦ ದಿನಾಂಕ ೩೧-೮-೨೦೦೧). ರಾಜ್ಯದಲ್ಲಿ ನೋಂದಣಿಯಾಗುವ ಎಲ್ಲ ಖಾಸಗೀ ವಾಹನಗಳೂ ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ನೋಂದಣಿ ಫಲಕಗಳನ್ನು ಪ್ರದರ್ಶಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗ ಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳೂ ಕನ್ನಡ ಅಂಕಿಗಳಲ್ಲಿರಬೇಕು.

ನಾವು ಸ್ವಾತಂತ್ರ್ಯಾನಂತರ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದ್ದೇವೆ. ಕನ್ನಡಿಗರೆಲ್ಲರ ‘ತಾಯಿ’ ಎಂಬ ಅಮೂರ್ತ ಕಲ್ಪನೆಯನ್ನು ಯಾವುದೇ ಖಾಸಗಿ ನಂಬಿಕೆಯ, ಮತಧರ್ಮದ ದೇವತೆಯಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ, ನಾಡದೇವಿ ಇತ್ಯಾದಿಯಾಗಿ ಪರಿಗಣಿಸಕೂಡದು. ಅಂಥ ದೇವತೆಯ ವಿಗ್ರಹ ಸ್ಥಾಪಿಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರವೇ ಆಗುತ್ತದೆ. ಕನ್ನಡವನ್ನು ವೈಚಾರಿಕವಾಗಿ, ವೈಜ್ಞಾನಿಕವಾಗಿ ಬಳಸುವ, ಬೆಳೆಸುವ ಹೊಣೆ ನಮ್ಮ ಮೇಲಿದೆ.

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ

ಮೈಸೂರು*
೨೪ ಫೆಬ್ರುವರಿ ೨೦೧೧
ರಾಷ್ಟ್ರೀಯ ಶಕ ೧೯೩೨ ವಸಂತ ಫಾಲ್ಗುಣ ೫
ಕೃಷ್ಣ ಸಪ್ತಮಿ ವಿಶಾಖ ಗುರುವಾರ

ಪ್ರೀತಿಯಿಂದ
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬
ದೂರವಾಣಿ ೯೪೪ ೮೪೮೧ ೪೦೨
ವಿ ಅಂಚೆ panditaradhya@yahoo.com
ಜಾಲಚರಿ panditaputa.wordpress.com

*೨೦೧೧ನೇ ಫೆಬ್ರುವರಿ ೧೫ರಿಂದ ೨೪ರವರೆಗೆ ನಡೆದ ಮಾನಸಗಂಗೋತ್ರಿಯ ಚಿನ್ನದ ಹಬ್ಬದ
‘ಸುವರ್ಣ ಮಾನಸ ೨೦೧೧ ಶೈಕ್ಷಣಿಕ ಪ್ರದರ್ಶನ’ದಲ್ಲಿ ವಿತರಿಸಿದೆ.

ಕನ್ನಡ ಅಂಕಿಗಳನ್ನೇ ಬಳಸಿ ೦ ೧ ೨ ೩ ೪ ೫ ೬ ೭ ೮ ೯

ಕನ್ನಡ ಅಂಕಿಗಳು ಕನ್ನಡ ಭಾಷೆಯ ಅವಿಭಾಜ್ಯ ಅಂಗ. ಕ್ರಿ.ಶ. ೮ನೆಯ ಶತಮಾನದಿಂದಲೇ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ.
ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದಾರೆ. ರಾಜ್ಯದ ಹಲವು ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿವೆ. ಬೆಂಗಳೂರಿನ ಕರ್ಮವೀರ, ಕಸ್ತೂರಿ ಹಾಗೂ ಹೊಸತು, ಸಂವಾದ ಮತ್ತು ಸಂಯುಕ್ತ ಕರ್ನಾಟಕ, ಹೊಸ ದಿಗಂತಗಳ ಪುರವಣಿಗಳಲ್ಲಿ ಮಾತ್ರ ಕನ್ನಡ ಅಂಕಿಗಳಿವೆ. ರಾಜ್ಯಮಟ್ಟದ ಪತ್ರಿಕೆಗಳು ಜಿಲ್ಲಾ ಕೇಂದ್ರಗಳಲ್ಲಿ ಮುದ್ರಣವಾಗಿ ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳ ಜೊತೆ ಸ್ಪರ್ಧಿಸುತ್ತಿವೆ. ಸುದ್ದಿಗಳಿಗೆ ಜಿಲ್ಲೆಯ ಬೇಲಿಯನ್ನು ಹಾಕಿ ರಾಜಧಾನಿಯ ಭಾಷಾ ವಿಕಾರಗಳನ್ನು ರಾಜ್ಯಾದ್ಯಂತ ಹರಡುತ್ತಿರುವುದು ಆತಂಕದ ಸಂಗತಿ. ಕನ್ನಡ ಅಂಕಿಗಳ ಜೊತೆ ಆರೋಗ್ಯಕರವೂ ಜೀವಂತವೂ ಆದ ಪ್ರಾದೇಶಿಕ ವೈಶಿಷ್ಟ್ಯಗಳನ್ನೂ ಉಳಿಸಿ ಬೆಳಸುತ್ತಿರುವ ಜಿಲ್ಲಾಮಟ್ಟದ ಹಲವು ಪತ್ರಿಕೆಗಳು ಈ ಅಸಮಾನ ಸ್ಪರ್ಧೆಯಿಂದ ಪ್ರಕಟಣೆಯನ್ನು ನಿಲ್ಲಿಸುವ ಹಂತ ತಲುಪಿವೆ. ರಾಜಧಾನಿಯ ಮಾಧ್ಯಮಗಳ ಕನ್ನಡವು ಪ್ರತಿರೋಧ ಸಾಮಥ್ರ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿರುವುದರಿಂದ ಕರ್ನಾಟಕದ ವಿವಿಧ ಪ್ರದೇಶಗಳಿಂದ ಆರೋಗ್ಯಕರ ರಕ್ತದಾನ ಪಡೆಯುವ ತುರ್ತು ಇದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತು ಹಲವು ಜಿಲ್ಲೆಗಳ ಸಣ್ಣ ಪತ್ರಿಕೆಗಳು ತಮ್ಮ ಜಿಲ್ಲ್ಲಾ ಆವೃತ್ತಿಗಳ ಬೇಲಿಯನ್ನು ತೆಗೆದುಹಾಕಿ ಅಖಂಡ ಆವೃತಿಗಳನ್ನು ಪ್ರಾರಂಭಿಸಿರುವುದು ಸ್ವಾಗತಾರ್ಹ. ಮೈಸೂರಿನ ಆಂದೋಲನ, ಮೈಸೂರು ಮಿತ್ರ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಮೆಚ್ಚುವಂಥದು. ಆದರೆ ಸರಕಾರದ ಪ್ರಕಟಣೆಯಾದ ‘ಜನಪದ’ ಪತ್ರಿಕೆ ಸರಕಾರದ ಭಾಷಾನೀತಿಯನ್ನು ಲೆಕ್ಕಕ್ಕೆ ಇಡದೆ ಇಂಗ್ಲಿಷ್ ಅಂಕಿಗಳನ್ನೇ ಬಳಸುತ್ತಿರುವುದು ಖಂಡನೀಯ.
ಕನ್ನಡ ಭಾಷೆಯ ಸೂಕ್ಷ್ಮಗಳನ್ನು ಓದುಗರಿಗೆ ಪರಿಚಯಿಸಬೇಕಾದ ಕನ್ನಡ ಪತ್ರಿಕೆಗಳು ಕನ್ನಡದಲ್ಲಿ ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬಳಸುತ್ತಿರುವುದು ಆತಂಕದ ಸಂಗತಿ. ನಿರ್ದಿಷ್ಟ ವ್ಯಕ್ತಿಗಳ ಜೊತೆ ನೇರವಾಗಿ ಮಾತನಾಡುವಾಗ ಅವರ ಭಾಷಿಕ ಸಾಮರ್ಥ್ರ ಬಗ್ಗೆ ನಮಗೆ ಅರಿವಿರುತ್ತದೆ. ಅವರಿಗೆ ಅರ್ಥವಾಗುವ ಎಷ್ಟು ಭಾಷೆಗಳಲ್ಲಿಯೂ ನಾವು ಮಾತನಾಡಬಹುದು. ಆದರೆ ನಮ್ಮ ಎದುರು ಇಲ್ಲದ ಓದುಗರಿಗಾಗಿ ಬರೆಯುವಾಗ ಸಾಮಾನ್ಯ ಕನ್ನಡವನ್ನು ಮಾತ್ರ ಬಳಸಬೇಕು. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ ‘ತಾEA ದೇವರು!’ ಎಂದು ಬರೆಯುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ದೊಡ್ಡ ಪತ್ರಿಕೆಯ ಹೆಸರಿನ ಪದಗಳನ್ನು ಇಂಗ್ಲಿಷಿನಲ್ಲಿ ಬರೆಯಲು ಬಳಸುವ ಇಂಗ್ಲಿಷ್ನ ವಿ ಮತ್ತು ಕೆ ಎಂಬ ಅಕ್ಷರಗಳ ಹೆಸರುಗಳನ್ನು ಕನ್ನಡ ಪದ ‘ಲವಲವಿಕೆ’ಯಲ್ಲಿರುವ ‘ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು ‘ಲವಲ’ ಎಂದು ಅರ್ಥಹೀನಗೊಳಿಸಿ ಅಂಗವಿಕಲ (‘ವಿಕಲ ಚೇತನ’?)ಗೊಳಿಸಲಾಗಿದೆ. ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ಕನ್ನಡ ಪತ್ರಿಕೆಯ ಹೆಸರಿನಲ್ಲಿಯೇ ಇಂಗ್ಲಿಷ್ ಪದವನ್ನು(ವಿಜಯ next) ಕಲಬೆರಕೆ ಮಾಡಿ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳನ್ನು ಬಳಸುತ್ತಿದೆ. ಕೆಲವು ಸಂಪಾದಕರಂತೂ(‘ಆಫ್ ಕೋರ್ಸ್’ ಇತ್ಯಾದಿ) ಇಂಗ್ಲಿಷ್ ಪದಗಳನ್ನು ಬೆರಸುವ ರೋಗದಿಂದ ನರಳುತ್ತಿರುವಂತಿದೆ. ಇಂಗ್ಲಿಷಿನಲ್ಲಿ ಮಾತನಾಡುವಾಗ, ಬರೆಯುವಾಗ ಒಂದು ಕನ್ನಡ ಪದವೂ ನುಸುಳದಂತೆ ಎಚ್ಚರವಹಿಸುವ ನಾವು ಕನ್ನಡದ ಬಗ್ಗೆಯೂ ಅಷ್ಟೇ ಎಚ್ಚರವಹಿಸುವ ಪ್ರಬುದ್ಧರಾಗುವುದು ಯಾವಾಗ?
ಕನ್ನಡ ಅಂತರಜಾಲ ತಾಣಗಳಲ್ಲಿ ಹೆಚ್ಚಿನವು ಕನ್ನಡತನದ ತಾಣಗಳಲ್ಲದಿರುವುದು ವಿಷಾದದ ಸಂಗತಿ. ಇಲ್ಲಿಯೂ ಕನ್ನಡಿಗರ ಜೊತೆ ಕನ್ನಡದ ಬಗ್ಗೆ ಮಾತನಾಡುವಾಗ ಅನಗತ್ಯವಾಗಿ ಇಂಗ್ಲಿಷ್ ಬಳಸುವ ಪ್ರವೃತ್ತಿ ಹೆಚ್ಚಿದೆ. ಕೆಲವು ಜಾಲತಾಣಗಳು ತಮ್ಮ ಹೆಸರುಗಳನ್ನೇ ಇಂಗ್ಲಿಷಿನಲ್ಲಿ ಹೇಳಿಕೊಂಡು ಧನ್ಯತೆಯನ್ನು ಅನುಭವಿಸುತ್ತಿವೆ (‘ದಟ್ಸ್ ಕನ್ನಡ.ಕಾಂ’, ‘ಕನ್ನಡ ಬ್ಲಾಗರ್ಸ್!’). ಆಕಾಶವಾಣಿಯು ಎಫ್.ಎಂ. ತಂತ್ರಜ್ಞಾನದ ಪರಿಣಾಮವಾಗಿ ಕೇಳುಗರನ್ನು ಆಕರ್ಷಷಿಸುತ್ತಿದೆ. ಇಲ್ಲಿಯವರೆಗೆ ಆಕಾಶವಾಣಿಯಲ್ಲಿ ಸ್ವಚ್ಛ ಕನ್ನಡ ಭಾಷಾರೂಪಗಳನ್ನು ಕೇಳಲು ಅವಕಾಶವಿತ್ತು. ಈಗ ಅನಗತ್ಯ ಇಂಗ್ಲಿಷ್ ಕಲಬೆರಕೆಯ ರೂಪಗಳು ಮೊಳಗುತ್ತಿವೆ. ಸರಕಾರಿ ಸ್ವಾಮ್ಯದ ಆಕಾಶವಾಣಿಯ ‘ರೇನ್ಬೊ ಎಫ್.ಎಂ’ (ಕನ್ನಡ ಕಾಮನಬಿಲ್ಲು!) ಎಂಬ ವಾಹಿನಿಯಲ್ಲಿ ‘ಲಂಚ್ ಬಾಕ್ಸ್’. ‘ಡಿನ್ನರ್ ಟೈಮ್’ ಹೆಸರಿನ ಕನ್ನಡ ಕಾರ್ಯಕ್ರಮಗಳಿವೆ! ಕಾರ್ಯಕ್ರಮ ನಿರೂಪಕರು ಅನಗತ್ಯವಾಗಿ ಅರ್ಧವಾಕ್ಯ ಕನ್ನಡ, ಅರ್ಧವಾಕ್ಯ ಇಂಗ್ಲಿಷ್ ಬೆರೆಸಿ ಮಾತನಾಡುವುದರಿಂದ ಕೇಳಲು ಜುಗುಪ್ಸೆಯಾಗುತ್ತದೆ. ಖಾಸಗಿ ಎಫ್.ಎಂ ವಾಹಿನಿಗಳ ಕನ್ನಡದ ಸ್ಥಿತಿಯಂತೂ ಶೋಚನೀಯ. ‘ಸಖತ್ ಹಾಟ್ ಮಗಾ!’, ‘ಕೇಳಿ ಕೇಳಿಸಿ ‘ಲೈಫ್’ ನಿಮ್ಮದಾಗಿಸಿ’ ಎಂದು ಉಲಿಯುವ ಈ ವಾಹಿನಿಗಳು ಕನ್ನಡತನದ ‘ಬದುಕ’ನ್ನು ನಮ್ಮದಾಗಿಸುವುದು ಯಾವಾಗ? ಇವುಗಳಿಗೆ ಕನ್ನಡತನದ ‘ಚುರುಕು’ ಮುಟ್ಟಿಸುವುದು ಹೇಗೆ?

ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳಿಗೆ ‘ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ಇತ್ಯಾದಿ ಇಂಗ್ಲಿಷ್ ಹೆಸರುಗಳಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು.

ರಾಜಧಾನಿಯ ಮಾಧ್ಯಮಗಳು ಕನ್ನಡದಲ್ಲಿ ಅನಗತ್ಯವಾಗಿ ಇಂಗ್ಲಿಷನ್ನು ಬೆರೆಸಿ ಕನ್ನಡಿಗರಲ್ಲಿ ಗೊಂದಲ, ಕೀಳರಿಮೆಗಳನ್ನು ಬೆಳೆಸುತ್ತಿವೆ. ಕನ್ನಡವನ್ನು ಚೆನ್ನಾಗಿ ಕಲಿಯಬೇಕು ಎನ್ನುವುದಕ್ಕಿಂತ ಇಂಗ್ಲಿಷ್ ಬೆರಸಿ ಮಾತನಾಡುವುದೇ ದೊಡ್ಡದು ಎಂಬ ತಪ್ಪು ಸಂದೇಶವನ್ನು ನೀಡುತ್ತಿವೆ. ಕನ್ನಡವನ್ನು ಚೆನ್ನಾಗಿ ಕಲಿಯದಿರುವುದರಿಂದ ಇಂಗ್ಲಿಷನ್ನೂ ಸಮರ್ಪಕವಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ ಎಂಬ ಸರಳ ಸತ್ಯವನ್ನು ಮರೆಮಾಚಲಾಗುತ್ತಿದೆ. ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವ ಮೂಲಕ ಭಾಷಾ ಕಲಿಕೆಯ ಕೌಶಲಗಳನ್ನು ಗಳಿಸಿಕೊಂಡರೆ ಅನಂತರ ಎಷ್ಟೂ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಎಂಬ ಸಾಮಾನ್ಯ ಶೈಕ್ಷಣಿಕ ಸತ್ಯವನ್ನು ಮರೆಮಾಚಿ ಒಂದನೆಯ ತರಗತಿಯಿಂದಲೇ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಭ್ರಮೆಯನ್ನು ಬೆಳೆಸಲಾಗುತ್ತಿದೆ. ಗೋಕಾಕ್ ವರದಿಯ ಫಲವಾಗಿ ಒಂದನೆಯ ತರಗತಿಯಿಂದ ರಾಜ್ಯಭಾಷೆ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ನಿರ್ಣಯವನ್ನು ಭಾಷಾ ಅಲ್ಪ ಸಂಖ್ಯಾತರು ವಿರೋಧಿಸಿ ಒಂದನೆಯ ತರಗತಿಯಲ್ಲಿ ಮಾತೃಭಾಷೆಯನ್ನು ಮಾತ್ರ ಕಲಿಸಬೇಕೆಂದೂ ಕನ್ನಡ ಮಾತೃಭಾಷೆಯ ಮಕ್ಕಳು ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ(ಮೂರನೆಯ ತರಗತಿಯಿಂದ) ರಾಜ್ಯಭಾಷೆಯಾದ ಕನ್ನಡವನ್ನು ಕಲಿಸಬಹುದೆಂದೂ ಉಚ್ಚ ನ್ಯಾಯಾಲಯದಿಂದ ರಕ್ಷಣೆ ಪಡೆದರು. ಆಂಗ್ಲೋ ಇಂಡಿಯನ್ನರನ್ನು ಬಿಟ್ಟು ಬೇರೆ ಯಾರ ಮಾತೃಭಾಷೆಯಲ್ಲದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಕಲಿಸಲು ಅವರ ಮತ್ತು ಕೆಲವು ಕನ್ನಡಿಗರ ಆಕ್ಷೇಪವಿಲ್ಲ! ಸರ್ವೋನ್ನತ ನ್ಯಾಯಾಲಯ ಎತ್ತಿ ಹಿಡಿದಿದ್ದ ರಾಜ್ಯ ಸರಕಾರದ ಭಾಷಾನೀತಿಗೆ ವಿರುದ್ಧವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧದ ಸಲ್ಲಿಸಿರುವ ಮೇಲ್ಮನವಿಯು ಸರ್ವೋನ್ನತ ನ್ಯಾಯಾಲಯದಲ್ಲಿ ಬೇಗ ಇತ್ಯರ್ಥವಾಗಿ ಎಲ್ಲ ಬಗೆಯ ಶಾಲೆಗಳ ಪ್ರಾಥಮಿಕ ತರಗತಿಗಳಲ್ಲಿ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಲಿಕೆಯ ವಿಷಯ ಮತ್ತು ಮಾಧ್ಯಮವಾಗಿ, ಆಂಗ್ಲೋ ಇಂಡಿಯನ್ನರನ್ನು ಬಿಟ್ಟು ಎಲ್ಲರಿಗೂ ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಇಂಗ್ಲಿಷ್ ಕಲಿಕೆ ಎಂಬ ಶೈಕ್ಷಣಿಕ ನೀತಿಯ ಪುನಃಸ್ಥಾಪನೆ ಆಗಬೇಕಿದೆ.
ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-೨: ವೈವ : ೭೮:೨೦೦೦-೦೧ ದಿನಾಂಕ ೩೧-೮-೨೦೦೧). ರಾಜ್ಯದಲ್ಲಿ ನೋಂದಣಿಯಾಗುವ ಎಲ್ಲ ಖಾಸಗೀ ವಾಹನಗಳೂ ನೋಂದಣಿ ಫಲಕಗಳನ್ನು ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ಪ್ರದರ್ಶಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಚೀಟಿಗಳಲ್ಲಿ, ಫಲಕಗಳಲ್ಲಿ ಮಾರ್ಗ ಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು.
ವಿಚಾರವಾದಿ ಎಚ್ ನರಸಿಂಹಯ್ಯನವರ ಕರ್ಮಭೂಮಿಯಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಕನ್ನಡವನ್ನು ವೈಚಾರಿಕವಾಗಿ, ವೈಜ್ಞಾನಿಕವಾಗಿ ಬೆಳೆಸುವ ಬಗ್ಗೆ ಯೋಚಿಸಬೇಕಾದ ಹೊಣೆ ಎಲ್ಲರ ಮೇಲಿದೆ. ಕನ್ನಡವನ್ನು ಕುರಿತ ಕಲ್ಪನೆ, ಚಿಂತನೆಗಳು ನಾವು ಒಪ್ಪಿಕೊಂಡಿರುವ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದ ಸಂವಿಧಾನಕ್ಕೆ ಅನುಗುಣವಾಗಿರಬೇಕು. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ, ‘ಗುಡಿ ಚರ್ಚು ಮಸಜೀದುಗಳನ್ನು ಬಿಟ್ಟು ಹೊರಬಂದು’ ಕನ್ನಡದ ಬಗ್ಗೆ ಯೋಚಿಸಬೇಕಿದೆ. ಮೊಗೇರಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಕನ್ನಡವೆಂದರೆ ತಾಯಿಯೆ? ದೇವಿಯೆ? ನಾನೂ ನೀನೂ ಅವರು’ ಎಂಬ ಜನಪರ ಮನೋಧರ್ಮ ನಮ್ಮದಾಗಬೇಕಿದೆ. ಕನ್ನಡವು ಕನ್ನಡಿಗರೆಲ್ಲರ ‘ತಾಯಿ’ ಎಂಬ ಅಮೂರ್ತ ಕಲ್ಪನೆಯನ್ನು ನಿರ್ದಿಷ್ಟ ಮತಧರ್ಮದ ನಂಬಿಕೆಯ ದೇವತೆ, ದೇವಿ ಎಂದು ಕರೆದು ಆ ದೇವತೆಯ ಪೂಜೆಯ ಪರಿಕರ, ವಿಧಿಗಳನ್ನು ಕನ್ನಡ ‘ತಾಯಿ’ಗೆ ಪ್ರಯೋಗಿಸುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳಿಗೆ ಸಲ್ಲದ ಪ್ರಾಶಸ್ತ್ಯ ನೀಡುವುದನ್ನು ಸಮ್ಮೇಳನಾಧ್ಯಕ್ಷರಾದ ಪ್ರೊ ಜಿ ವೆಂಕಟಸುಬ್ಬಯ್ಯನವರು ಸರಿಯಾಗಿಯೇ ಆಕ್ಷೇಪಿಸಿದ್ದಾರೆ. ಅದೇ ರೀತಿ ಧಾರ್ಮಿಕ ವ್ಯಕ್ತಿಗಳೂ ಎಲ್ಲರೊಂದಿಗೆ ಸಮಾನ ಗೌರವದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಬೇಕು. ಧಾರ್ಮಿಕ ವೇದಿಕೆಗಳಲ್ಲಿ ಅವರನ್ನು ಇತರರಿಗಿಂತ ಹೆಚ್ಚಿನವರೆಂದು ಭಾವಿಸುವಂತೆ ಪರಿಷತ್ತೂ ಅವರನ್ನು ‘ದಿವ್ಯ ಸಾನ್ನಿಧ್ಯ’ ಎಂದು ಕರೆಯುವುದು ಸರಿಯಲ್ಲ. ಅಸಮಾನತೆಯ ‘ದಿವ್ಯ ಸನ್ನಿಯು ಇಂದು ಇಲ್ಲಿಗು ಹಾಯಿತೆ?’ ಎಂದು ಆಗಬಾರದು.
ಇತ್ತೀಚೆಗೆ ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ಅಂಗಿಕರಿಸುವ ಪರಿಪಾಠ ಇಲ್ಲವಾಗಿದೆ. ಇದರಿಂದ ಕನ್ನಡದ ಗಂಭೀರ ಸಮಸ್ಯೆಗಳನ್ನು ಗುರುತಿಸುವ ಅವಕಾಶವೂ ಇಲ್ಲವಾಗಿದೆ. ಪರಿಷತ್ತು ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಇವನ್ನೇ ನಿರ್ಣಯಗಳಾಗಿ ಮಂಡಿಸಲು ಅವಕಾಶ ನೀಡಬೇಕು.

ಪ್ರೀತಿಯಿಂದ
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬

ಬೆಂಗಳೂರು*
೪ ಫಬ್ರುವರಿ ೨೦೧೧
ರಾಷ್ಟ್ರೀಯ ಶಕ ೧೯೩೨ ಶಿಶಿರ ಮಾಘ ೧೫
o ಪಾಡ್ಯ ಧನಿಷ್ಠ ಶುಕ್ರವಾರ

ದೂರವಾಣಿ ೯೪೪ ೮೪೮೧ ೪೦೨
ವಿ ಅಂಚೆ panditaradhya@gmail.com

*ಅಖಿಲ ಭಾರತ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಿದೆ.