Monthly Archives: ಜುಲೈ 2011

ಕನ್ನಡ ಮಾಧ್ಯಮದ ಅನಂತರ… ಒಂದು ಅನುಭವ

ಮಾಯಾ
ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು

ಕನ್ನಡ ಮಾಧ್ಯಮದಲ್ಲಿ ನಾನು ೧೦ನೇ ತರಗತಿ ಮುಗಿಸಿದ ೧೦ ವರ್ಷಗಳ ಬಳಿಕ, ಸರಕಾರವು ಪ್ರಾಥಮಿಕ ಶಿಕ್ಷಣ ಮಾಧ್ಯಮದ ಬಗ್ಗೆ ಚಿಂತಿಸುತ್ತಿರುವ ಸಂದರ್ಭದಲ್ಲಿ ಈ ೧೦ ವರ್ಷಗಳ ಅನುಭವವನ್ನು ಸಮಾಜದ ಮುಂದಿಡಲು ಬಯಸುತ್ತೇನೆ.

೧೦ ವರ್ಷಗಳ ಹಿಂದೆ ಶಿಕ್ಷಣ ಮಾಧ್ಯಮದ ಬಗ್ಗೆ ಅವಲೋಕಿಸುವ ಯೋಚನಾಶಕ್ತಿ ನನ್ನ ಒಳಗಿತ್ತೆಂದು ಹೇಳಲಾಗದು. ಪದವಿಪೂರ್ವ ಹಂತವನ್ನು ಪ್ರವೇಶಿಸುವಾಗ ಇದ್ದುದು ಛಲವೊಂದೇ. ಕನ್ನಡ ಮಾಧ್ಯಮ ತೊಡಕಾಗದೆಂಬ ಧೈರ್ಯವೊಂದೇ… ಆ ಧೈರ್ಯವು ಜಗತ್ತನ್ನು ನಡೆಸುವ ಶಕ್ತಿಯ ಧನಾತ್ಮಕ ಪ್ರತಿಕ್ರಿಯೆಯೊಂದಿಗೆ ನನ್ನನ್ನಿಂದು ಭಾರತದ ಪ್ರಮುಖ ವಿಜ್ಞಾನ ವಿದ್ಯಾಲಯವೊಂದರಲ್ಲಿ ನಿಲ್ಲಿಸಿದೆ. ಜೀವನದ ಗುರಿಯ ಬಗ್ಗೆ ಶಿಕ್ಷಣದ ಬಗ್ಗೆ ಚಿಂತಿಸುವ ಅವಕಾಶ ನೀಡಿದೆ. ಅಂದು ಪಡೆದ ಪ್ರಾಥಮಿಕ ಶಿಕ್ಷಣವನ್ನು ಅವಲೋಕಿಸಿದರೆ, ನಾವು ಕಲಿತ ಶಾಲೆಯಲ್ಲಿ ವಿಜ್ಞಾನ, ಗಣಿತಗಳನ್ನು ಅರ್ಥವಾಗುವಂತೆ ಹೇಳಿಕೊಡುವ ಶಿಕ್ಷಕಿಯರಿದ್ದರು. ಭಾಷೆಗಳನ್ನು ಅವುಗಳ ಸ್ವರೂಪ ತಿಳಿಯುವಂತೆ ಬೋಧಿಸುವ ಶಿಕ್ಷಕಿಯರೂ ಇದ್ದರು. ಅಂದು ನಮ್ಮ ಗುರಿ ಅಂಕಗಳಿಸುವುದೊಂದೇ ಆಗಿದ್ದರೂ ಅಲ್ಲಿ ಅರಿತ ಪ್ರಾಥಮಿಕ ಜ್ಞಾನವೂ(basics) ವಿಷಯವನ್ನು ತಿಳಿಯುವ, ಕಲಿಯುವ ಪ್ರವೃತ್ತಿಯೂ ಮುಂದಿನ ಹಂತಗಳಲ್ಲಿ ಸಹಕಾರಿಯಾಗಿತ್ತು. ಅದರಿಂದ ಪದವಿಪೂರ್ವಕ್ಕೆ ಕಾಲಿಟ್ಟಾಗ ಮಾಧ್ಯಮ ತೊಡಕೆನಿಸಲಿಲ್ಲ.

ಮುಂದಿನ ಹತ್ತು ವರ್ಷಗಳ ಜೀವನದ ಅವಲೋಕನ, ವೀಕ್ಷಣೆಗಳಿಂದ ಹೀಗೆ ಅನ್ನಿಸುತ್ತಿದೆ. ಪದವಿಪೂರ್ವಕ್ಕೆ ಕಾಲಿಡುವ ವಯಸ್ಸಿನಲ್ಲಿ, ವಿಷಯಾನೇಕಗಳನ್ನು ತಿಳಿದು ಬೆಳೆಯುವ ದಿನಗಳಲ್ಲಿ ಕೇವಲ ಭಾಷಾಮಾಧ್ಯಮದ ಬದಲಾವಣೆ ಅಷ್ಟೊಂದು ದೊಡ್ಡ ಅಡ್ಡಿಯಾಗಿ ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸಬಹುದೆಂಬ ವಾದ ಸರಿಯಲ್ಲ. ಪದವಿಪೂರ್ವ ಮತ್ತು ಮುಂದಿನ ಶಿಕ್ಷಣ ಹಂತಗಳಲ್ಲಿ ಅನೇಕರು ಕಷ್ಟಪಡುವುದು ಸರಿ. ಅದಕ್ಕೆ ಕಾರಣಗಳು ಹಲವಾರು. ವಿಜ್ಞಾನ ವಿದ್ಯಾರ್ಥಿನಿಯಾದ ನನಗೆ ಅನ್ನಿಸುವಂತೆ ಈ ಕಾರಣಗಳು ಮಾಧ್ಯಮದ ಬದಲಾವಣೆಗಳನ್ನು ಮೀರಿದವು. ನಮ್ಮ ಶಾಲಾ ದಿನಗಳಲ್ಲಿ ೧೦ನೆಯ ತರಗತಿಯವರೆಗೆ ಇದ್ದ ವಿಷಯಗಳ ಪ್ರಮಾಣ ಮತ್ತು ಆಳ ಪದವಿಪೂರ್ವದ ವಿಜ್ಞಾನಕ್ಕೆ ಹೋಲಿಸಿದರೆ ತುಂಬ ಕಡಿಮೆಯಾಗಿತ್ತು. ಪ್ರೌಢಶಾಲೆಯಲ್ಲಿ ಪಠ್ಯವೊಂದನ್ನೇ ಉರುಹೊಡೆದು ಅಂಕಗಳಿಸಲು ಸಾಧ್ಯವಿದ್ದರೆ ೧೨ನೇ ತರಗತಿಯಲ್ಲಿ, ಅದೂ ಪ್ರವೇಶ ಪರೀಕ್ಷೆಗಳಲ್ಲಿ, ಅರ್ಥೈಸದೆ ಬಾಯಿಪಾಠಮಾಡುವ, ಅಪೂರ್ಣವಾಗಿ ವಿಷಯಗಳನ್ನು ತಿಳಿಯುವ ಪ್ರವೃತ್ತಿ ಗೆಲುವನ್ನು ತರಲಾರದಾಗಿತ್ತು. ಅರ್ಥೈಸುವಿಕೆ (understanding) ಮತ್ತು ಸಮಸ್ಯೆಗಳಿಗೆ ವಿಷಯಗಳನ್ನು ಅನ್ವಯಿಸುವ ಕೌಶಲ(application to the problem) ಈ ಪರೀಕ್ಷೆಗಳನ್ನು ಎದುರಿಸಲು ಅನಿವಾರ್ಯವಾಗಿದ್ದವು. ಈ ಪ್ರವೃತ್ತಿಗಳು ಸ್ವಂತವಾಗಿ ಕಲಿಯುವುದು, ತಿಳಿದುಕೊಳ್ಳುವ ಹಂಬಲಗಳೊಂದಿಗೆ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಗೂ ಅನಿವಾರ್ಯ. ಶಿಕ್ಷಣ ನನಗೆಂದೂ ಹೊರೆಯಾಗದಿರಲು ಕಾರಣ ನನಗೆ ಅಂದಿನಿಂದಿಂದಿನವರೆಗೆ ಕಲಿಸಿದ ಶಿಕ್ಷಕರ ಉತ್ತಮ ಬೋಧನಾ ವಿಧಾನ. ನನಗನ್ನಿಸುವಂತೆ ನಮಗಿಂದು ಬೇಕಾಗಿರುವುದು ಶಿಕ್ಷಣ ಕ್ರಮದ ಬದಲಾವಣೆಯಲ್ಲದೆ ಮಾಧ್ಯಮದ ಬದಲಾವಣೆಯಲ್ಲ. ಆಂಗ್ಲಭಾಷೆಗೆ, ಇತರ ವಿಷಯಗಳಿಗೆ ಉತ್ತಮ ಶಿಕ್ಷಕರನ್ನು ಅಣಿಗೊಳಿಸುವ ಬದಲು ಕನ್ನಡ ಮಾಧ್ಯಮದ ಮೂಲೋತ್ಪಾಟನೆ ಹೇಗೆ ಸಹಕಾರಿಯಾದೀತೊ ತಿಳಿಯುತ್ತಿಲ್ಲ. ವಿಷಯಗಳನ್ನು ಕನ್ನಡದಲ್ಲಿ ಸರಿಯಾಗಿ ಅರ್ಥೈಸಿದಲ್ಲಿ ಆಂಗ್ಲಭಾಷೆಯನ್ನು ಪ್ರೌಢಶಾಲಾ ಹಂತದಲ್ಲಿ ಸರಿಯಾಗಿ ತಿಳಿದಲ್ಲಿ ವಿದ್ಯಾರ್ಥಿಗಳನ್ನು ಮಾಧ್ಯಮ ಬದಲಾವಣೆಯೊಂದೇ ಹೇಗೆ ಕಷ್ಟಪಡಿಸೀತು? ಕನ್ನಡದಲ್ಲೇ ಅರ್ಥವಾಗದ ಪ್ರಾಥಮಿಕ ಜ್ಞಾನವನ್ನು ಆಂಗ್ಲ ಭಾಷೆಯ ಸಂಪರ್ಕವೇ ಇಲ್ಲದ ಹಳ್ಳಿಗಳಲ್ಲಿ ಬೋಧಿಸತೊಡಗಿದರೆ, ಈ ಹಂತದಲ್ಲೇ ವಿದ್ಯಾರ್ಥಿಗಳಿಗೆ ಅರ್ಥವಾಗದಿದ್ದರೆ, ಅವರು ಮುಂದುವರೆಯುವುದಾದರೂ ಹೇಗೆ?

ಆಂಗ್ಲಮಾಧ್ಯಮದಲ್ಲಿ ಕಲಿತವರೆಲ್ಲ ಉತ್ತಮ ಹುದ್ದೆಗಳಿಗೇರುವರೆಂಬ ವಾದವೂ ಸರಿಯಲ್ಲ. ಈ ಉತ್ತಮ ಹುದ್ದೆಗಳೇ ದೇಶದ ಅಭಿವೃದ್ಧಿಗೆ ಕಾರಣವೆನ್ನುವ ವಾದವೂ ಸರಿಯಲ್ಲ. ಯಾವುದಾದರೊಂದು ಕಂಪನಿ ಸೇರಿ ಧನ, ಕೀರ್ತಿ ಗಳಿಸುವ ಹುಚ್ಚಿನಲ್ಲಿ ಉತ್ತಮ ವಿದ್ಯಾರ್ಥಿಗಳೆಲ್ಲರೂ ಶಿಕ್ಷಣ, ವೈದ್ಯಕೀಯಗಳಂಥ ಸೇವಾಧಾರಿತ ಕ್ಷೇತ್ರಗಳನ್ನು ಪ್ರವೇಶಿಸದಿರುವುದೂ ಶಿಕ್ಷಣ ಮೌಲ್ಯಗಳ ಅವನತಿಗೆ ಕಾರಣವಾಗಬಲ್ಲುದು. ಇಂದಿನ ಶೀಕ್ಷಣ ಕ್ಷೇತ್ರದ ಅನೇಕ ಘಟನೆಗಳನ್ನು ಕಂಡರೆ ಶಿಕ್ಷಣದ ಗುರಿ ಕೇವಲ ಗಳಿಕೆಯೇ, ಪರಸ್ಪರ ಸಹಕಾರ, ಸಮಾಜಕ್ಕೆ ಸೇವೆ, ದೇಶದ ಋಣ ತೀರಿಸುವ ಮನೋಭಾವಗಳೇ ಬೇಕಿಲ್ಲವೆ ಅನ್ನಿಸುವುದು. ಕೋಟ್ಯಂತರ ರೂಪಾಯಿಗಳನ್ನು ಪಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳೂ, ಆರ್ಥಿಕ ಬೆಳವಣಿಗೆ ತಮ್ಮದೇ ಸೊತ್ತೆನ್ನುವ ಕಂಪನಿಗಳೂ ತಮ್ಮ ವಿದ್ಯಾರ್ಥಿ/ಉದ್ಯೋಗಿಗಳನ್ನು ಪ್ರಾಥಮಿಕ ಶಿಕ್ಷಣದ ಉನ್ನತಿಗೆ ಸ್ವಲ್ಪವಾದರೂ ಬಳಸಿದರೆ(ಗಳಿಕೆಯನ್ನು ಮಾತ್ರವಲ್ಲ, ಸೇವೆಯನ್ನೂ) ಆರ್ಥಿಕತೆಯೊಂದಿಗೆ ಶಿಕ್ಷಣದ ಉದ್ದೇಶವೂ ಬೆಳೆಯುವುದು. ಇಂತಹ ಬದಲಾವಣೆಗಳಿಗೆ ಸರಕಾರದ ಪ್ರಯತ್ನ ಸಾಕೆ? ಜನಸಾಮಾನ್ಯರ, ಅದರಲ್ಲೂ ಆರ್ಥಿಕವಾಗಿ ಸಬಲರ ಸಹಕಾರ ಅಗತ್ಯವಲ್ಲವೆ?

ಮತ್ತೆ, ಇಂದಿನ ಸಮಾಜದ ಸ್ಥಿತಿಯ ಬಗ್ಗೆ ಕೆಲವು ಮಾತುಗಳು. ಇಲ್ಲದವರಿಗೆ ಕನ್ನಡ ಮಾಧ್ಯಮವೆಂಬ ಮಿಥ್ಯಾಪವಾದವು ಯಾರಿಂದ ಸೃಷ್ಟಿಯಾಯಿತು ಮತ್ತು ಯಾಕಾಗಿ? ಇಲ್ಲವದರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವುದು ಅಸಾಧ್ಯವಾದಲ್ಲಿ ಉಳ್ಳವರಿಗೆ ಕನ್ನಡದಲ್ಲಿ ಕಲಿಯಲು ಏಕೆ ಸಾಧ್ಯವಾಗದು? ಕನ್ನಡ ಮಾಧ್ಯಮಕ್ಕೆ ಕಳುಹಿಸದಿದ್ದರೆ ಬೇಡ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುವುದನ್ನಾದರೂ ನಿಲ್ಲಿಸಲಿ. ನಾನು ಶಾಲೆಯಲ್ಲಿದ್ದ ವರ್ಷಗಳಲ್ಲಿ ನನ್ನೂರಿನಲ್ಲಿ ಬಹುತೇಕ ಕಾಲೇಜು ಶಿಕ್ಷಕರ ಮಕ್ಕಳು ಕನಿಷ್ಠ ಐದು ವರ್ಷವಾದರೂ ಕನ್ನಡದಲ್ಲಿ ಓದುತ್ತಿದ್ದರು. ನಾನು ಕಲಿತ ಶಾಲೆ ಕಾನ್ವೆಂಟ್ ಶಾಲೆಯಾಗಿದ್ದರೂ ಅಲ್ಲಿನ ಯಾವ ಶಿಕ್ಷಕಿಯರೂ, ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿಯರೂ ಕನ್ನಡ ಮಾಧ್ಯಮದವರೆಂದು ನಮ್ಮನ್ನು ಹೀನೈಸಿದುದು ನೆನಪಿಲ್ಲ. ನಾನು ಕಲಿತ ಪದವಿಪೂರ್ವ ಕಾಲೇಜಿನಶಿಕ್ಷಕರಿಗೂ ಇದು ಅನ್ವಯಿಸುತ್ತದೆ. ಕನಿಷ್ಠ ಈ ಮನೋಭಾವವನ್ನಾದರೂ ಬೆಳಸಿಕೊಳ್ಳಲಿ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೂ, ಅವರ ಹೆತ್ತವರೂ, ಇಂದು ಆಂಗ್ಲ ಮಾಧ್ಯಮದ ದುಬಾರಿ ಶಾಲೆಗಳಿಗೆ ಕಳುಹಿಸಲು ಸಂಪತ್ತಿನ ತೋರಿಕೆ, ಮುಂದೆ ಕಷ್ಟವಾಗುವುದೆನ್ನುವುದು ಮಾತ್ರ ಕಾರಣಗಳಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸವಲತ್ತು, ಉತ್ತಮ ಶಿಕ್ಷಣ ಕ್ರಮಗಳಿಲ್ಲದಿರುವುದೂ ಕಾರಣವೆಂಬುದು ನನಗೆ ಇತ್ತೀಚೆಗೆ ಕೇಳಿಸಿದ ಅಭಿಪ್ರಾಯ. ಈ ವಿಷಯದ ಬಗ್ಗೆ ಇದರ ಪರಿಹಾರದ ಬಗ್ಗೆ ಚಿಂತಿಸುವುದು ಇಂದು ಅಗತ್ಯವೆನ್ನುವುದು ನನ್ನ ಭಾವನೆ.

ಮಾನವ ಜೀವನಕ್ಕೆ ಅನೇಕ ಪರಿಕರಗಳನ್ನು ತಂತ್ರಜ್ಞಾನಗಳನ್ನು (ಐಟಿಯೊಂದೇ ಅಲ್ಲ) ಒದಗಿಸುವ, ನಮಗಿಂತ ಬಹಳ ಮುಂದುವರೆದಿರುವ ಫ್ರಾನ್ಸ್, ಜರ್ಮನಿ ಮತ್ತಿತರ ಯೂರೋಪಿಯನ್ ಸಮುದಾಯದ ದೇಶಗಳಲ್ಲಿ ಸ್ನಾತಕೋತ್ತರ ಹಂತಗಳಲ್ಲೂ ವಿಜ್ಞಾನವನ್ನು ಅವರವರ ಭಾಷೆಗಳಲ್ಲಿ ಕಲಿಯುವರು. ಬಹುತೇಕ ಜನರು ಆಂಗ್ಲ ಭಾಷೆಯನ್ನು ಕೇವಲ ಭಾಷೆಯಾಗಿ ಮಾತ್ರ ಚೊಕ್ಕವಾಗಿ ಕಲಿಯುವ ಜಪಾನ್, ಯೂರೋಪಿಯನ್ ರಾಷ್ಟ್ರಗಳು ಮುಂದುವರಿದಿಲ್ಲವೆ? ಇಂದು ಯೋರೋಪಿಗೆ ತೆರಳುವ ಅನೇಕ ಭಾರತೀಯ ವಿದ್ಯಾರ್ಥಿಗಳು ಎದುರಿಸುವ ಪ್ರಶ್ನೆಯೆಂದರೆ ಇಪ್ಪತ್ತಕ್ಕೂ ಮೀರಿದ ರಾಷ್ಟ್ರೀಯ ಭಾಷೆಗಳಿರುವ ನೀವು ಪರಸ್ಪರ ಸಂಭಾಷಿಸಲು ಇಂಗ್ಲಿಷನ್ನು ಏಕೆ ಬಳಸುತ್ತೀರಿ? ಈ ಪ್ರಶ್ನೆ ನನ್ನಲ್ಲಿನ ಇತರ ಎಲ್ಲ ಪ್ರಶ್ನೆಗಳ ಸ್ಥಾನವನ್ನಾಕ್ರಮಿಸಿ ನಮ್ಮಲ್ಲಿ ಸ್ವಾಭಿಮಾನ ಇನ್ನೂ ಬೆಳದಿಲ್ಲವೆ ಎಂಬ ದುಃಖದ ಛಾಯೆಯನ್ನು ಮೂಡಿಸುತ್ತದೆ.

ಕೊನೆಯದಾಗಿ, ಕಳೆದ ದಶಮಾನದಲ್ಲಿ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯವರೆಗೆ ಓದಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯಗಳಲ್ಲಿ (ಬಹುರಾಷ್ಟ್ರೀಯ ಕಂಪನಿಗಳನ್ನೂ ಸೇರಿಸಿ) ಸೇವೆ ಸಲ್ಲಿಸಿ ಸಂತೃಪ್ತರಾಗಿರುವ ಅನೇಕರನ್ನು ನಾನು ಬಲ್ಲೆ. ನನ್ನ ಪ್ರಾಚಾರ್ಯರು (ಅವರು ಸಂಶೋಧನಾ ಕ್ಷೇತ್ರದಲ್ಲಿ ಇಲ್ಲೂ, ವಿದೇಶಗಳಲ್ಲೂ ಅನುಭವವಿರುವವರು) ಇಂದು ನನಗಂದ ಮಾತು, Your technical English is good as compared to many other students. ಈ many other students ಗಳಲ್ಲಿ ಆಂಗ್ಲ ಮಾಧ್ಯದಲ್ಲಿ CBSE ಯಂತಹ ಪಠ್ಯಕ್ರಮದಲ್ಲಿ ಓದಿದವರೂ ಇರುವರೆಂದು ಬೇರೆ ಹೇಳಬೇಕಾಗಿಲ್ಲ. ಹತ್ತು ವರ್ಷಗಳ ಹಿಂದೆ ಕಷ್ಟವಾದೀತು ಎಂದು ಕನಿಕರ ತೋರಿದ ಅನೇಕರು ಇಂದು ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾಗಿದ್ದೆನೆಂಬುದನ್ನು ಮರೆತಿರುವರು(?)! ಪದವಿಪೂರ್ವ ಮತ್ತು ಅನಂತರದ ಹಂತಗಳಲ್ಲಿ ದುಬಾರಿ ಕೋಚಿಂಗ್ ಗಳನ್ನು ಪಡೆದೂ ಅವರಲ್ಲಿ ಅನೇಕರು ತಮಗೆ ಬೇಕಿದ್ದಲ್ಲಿಗೆ ತಲುಪಲು ಸಫಲರಾಗಿಲ್ಲ. ಈ ಎಲ್ಲ ಉದಾಹರಣೆಗಳಿಂದ ಮಾಧ್ಯಮ ಮುಖ್ಯವಲ್ಲ ಉತ್ತಮ ಶಿಕ್ಷಣಕ್ರಮ ಮುಖ್ಯ ಎನ್ನುವುದು ನನಗಂತೂ ಸ್ಪಷ್ಟವಾಗಿದೆ. ಅದೇನೇ ಇರಲಿ, ಈ ಹತ್ತು ವರ್ಷಗಳ ಅನುಭವಗಳು ನನಗೆ ಬಹಳ ಧೈರ್ಯವನ್ನು ನೀಡಿವೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೆ ಸುಲಭದಲ್ಲಿ ಮುಗಿಯುತ್ತಿತ್ತು. ಹೆಚ್ಚು ತಿಳಿಯುತ್ತಿತ್ತು. ಐಟಿ ಕಂಪನಿ ಏಕೆ ಸೇರಲಿಲ್ಲ, ಮುಂದೆ ನಿನ್ನ ಊರಿನಲ್ಲಿ ನೆಲಸಿ ಶಿಕ್ಷಕಿಯಾದರೆ ಬಹಳ ಉತ್ತಮ ಅವಕಾಶಗಳು ತಪ್ಪಿಹೋಗುವುವು ಎಂಬೆಲ್ಲ ವಾದಗಳು ಇಂದು ನನ್ನ ಮನಸನ್ನೇ ನಾಟಲಾರವು!

ಏಕೆಂದರೆ ಇದೇ ರೀತಿಯ ಜನಗಳು ಅಂದಿದ್ದರು ಹತ್ತು ವರ್ಷಗಳ ಹಿಂದೆ-
ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕಷ್ಟವಾಗುವುದು ಮುಂದೆ!!

ಸೌಜನ್ಯ ಉದಯವಾಣಿ ಮಣಿಪಾಲ ೩೦-೭-೨೦೧೧

ಕಬ್ಬಿಣದ ಕಡಲೆಕಾಯಿಯಾದ ಇಂಗ್ಲಿಷ್ ಮಾಧ್ಯಮ: ವಿದ್ಯಾರ್ಥಿ ಆತ್ಮಹತ್ಯೆ

ಬಂಟ್ವಾಳ, ಜು ೨೦- ವಿದ್ಯಾಭ್ಯಾಸ ಕಠಿಣವಾಗುತ್ತಿದ್ದರಿಂದ ನೊಂದುಕೊಂಡ ಹದಿಹರಯದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬಿ. ಮೂಡ ಗ್ರಾಮದ ಪಣೋಳಿಬೈಲು ಸಮೀಪದ ಬೊಳ್ಳಾಯಿ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ.

ಬೊಳ್ಳಾಯಿ ನಿವಾಸಿ ಕೃಷ್ಣಪ್ಪ ಕುಲಾಲ-ಹರಿಣಾಕ್ಷಿ ದಂಪತಿಗಳ ಪುತ್ರ ದೇವಿಪ್ರಸಾದ್(೧೪ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ. ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ದೇವಿಪ್ರಸಾದ್ ನನ್ನು ಪ್ರೌಢಶಾಲಾ ಶಿಕ್ಷಣಕ್ಕಾಗಿ ಆತನ ಹೆತ್ತವರು ಕುಕ್ಕಾಜೆಯ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು. ಅವರ ಉದ್ದೇಶ ಒಳ್ಳೆಯದೇ ಇತ್ತಾದರೂ ಕನ್ನಡ ಮಾಧ್ಯಮದಿಂದ ದಿಢೀರ್ ಆಗಿ ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಗೊಂಡಿದ್ದರಿಂದ ದೇವಿಪ್ರಸಾದ್ ಗೆ ಶಾಲೆಯಲ್ಲಿ ಕಲಿಸಿದ್ದು ತಲೆಗೆ ಹೋಗುತ್ತಿರಲಿಲ್ಲ. ಹೀಗಾಗಿ ತಾನು ಶಾಲೆಗೆ ಹೋಗುವುದಿಲ್ಲ ಎಂದು ಆಗಾಗ್ಗೆ ಹೇಳುತ್ತಿದ್ದ ಎನ್ನಲಾಗಿದೆ.

ನಿನ್ನೆ ಸಂಜೆ ೫.೩೦ರ ಸುಮಾರಿಗೆ ಶಾಲೆಯಿಂದ ಮರಳಿ ಬಂದಿದ್ದು, ಹರಿಣಾಕ್ಷಿ ಆತನಿಗೆ ಚಹಾ ನೀಡಿ ಸಮೀಪದಲ್ಲೇ ಇರುವ ತಮ್ಮ ಅಂಗಡಿಗೆ ತೆರಳಿದ್ದರು. ಕೃಷ್ಣಪ್ಪ ಕುಲಾಲ್ ಸಾಮಾನುಗಳನ್ನು ತರಲು ಪಾಣೆಮಂಗಳೂರಿಗೆ ಹೋಗಿದ್ದರು. ದೇವಿಪ್ರಸಾದ್ ನ ತಂಗಿ ಅಂಗಳದಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭ ಸಾಧಿಸಿದ ದೇವಿಪ್ರಸಾದ್ ಕಿಟಕಿಯ ಸರಳಿಗೆ ತಂದೆಯ ಲುಂಗಿಯಿಂದ
ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಜೆ ೬.೩೦ರ ಸುಮಾರಿಗೆ ಹರಿಣಾಕ್ಷಿ ಮರಳಿ ಬಂದಾಗ ಈ ದುರಂತ ಬೆಳಕಿಗೆ ಬಂದಿದೆ.

ಈ ಬಗ್ಗೆ ಕೃಷ್ಣಪ್ಪ ಕುಲಾಲ ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ
ಬಂಟ್ವಾಳ ನಗರ ಠಾಣಾ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಜೆವಾಣಿ ಮಂಗಳೂರು ೨೦-೭-೨೦೧೧

ಪ್ರಿಯರೆ,
ಶಿಕ್ಷಣ ಮಾಧ್ಯಮವನ್ನು ಕುರಿತ ಮೇಲ್ಮನವಿ ಸರ್ವೋನ್ನತ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಬೇಕಿರುವಾಗಲೇ ಕರ್ನಾಟಕದ ಪ್ರಾಥಮಿಕ ಶಿಕ್ಷಣ ಸಚಿ ಶ್ರೀ ವಿಶ್ವೇಶ್ವರ ಕಾಗೇರಿಯವರು ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುವ ಆತುರದಲ್ಲಿರುವುದು ಆತಂಕದ ಸಂಗತಿ.

ಚೆನ್ನಾಗಿ ಕಲಿಯದ ಭಾಷೆಯನ್ನು ಮಾಧ್ಯಮವಾಗಿ ಬಳಸುವುದರ ಪರಿಣಾಮಕ್ಕೆ ಇತ್ತೀಚಿನ ನಿದರ್ಶನ ಮಂಗಳೂರು ಸಮೀಪದ ಬೊಳ್ಳಾಯಿಯಲ್ಲಿ ನಡೆದಿದೆ. ಮನೆ, ಶಾಲೆ ಎಲ್ಲಿಯೂ ಪರಿಸರದ ಭಾಷೆಯಲ್ಲದ ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿ ಒತ್ತಾಯಿಸಿದರೆ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಕ್ಕೆ ದೇವಿಪ್ರಸಾದ್ ಬಲಿಯಾಗಿದ್ದಾನೆ. ಎಲ್ಲ ಮಕ್ಕಳೂ ದೇವಿ ಪ್ರಸಾದನಂತೆ ಆತ್ಮಹತ್ಯೆ ಮಾಡಿಕೊಳ್ಳದಿರಬಹುದು. ಆದರೆ ಅವರಲ್ಲಿ ಹಲವರು ಮಧ್ಯದಲ್ಲಿಯೇ ಶಾಲೆ ತೊರೆಯುವ ಸಾಧ್ಯತೆ ಹೆಚ್ಚಿದೆ.

ಇಂಗ್ಲಿಷನ್ನು ಕಲಿಯುವುದಕ್ಕೂ ಅದನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವುದಕ್ಕೂ ತುಂಬ ವ್ಯತ್ಯಾಸವಿದೆ. ಮಕ್ಕಳನ್ನು ಇಂಗ್ಲಿಷಿನಲ್ಲಿ ಮಾತನಾಡಿಸಿ ಅವರು ಅದನ್ನು ಅರ್ಥಮಾಡಿಕೊಂಡು ಇಂಗ್ಲಿಷಿನಲ್ಲಿಯೇ ಉತ್ತರಿಸುವಂತೆ ಒಂದು ಭಾಷೆಯಾಗಿ ಇಂಗ್ಲಿಷನ್ನು ಚೆನ್ನಾಗಿ ಕಲಿಸಬೇಕು. ಅನಂತರ ಮಾತ್ರವೇ ಇಂಗ್ಲಿಷಿನಲ್ಲಿ ಓದು, ಬರವಣಿಗೆಗಳನ್ನು ಕಲಿಸುವುದು ಉಪಯುಕ್ತವಾಗುತ್ತದೆ. ಅಲ್ಲಿಯವರೆಗೆ ಮಕ್ಕಳು ಎಲ್ಲ ವಿಷಯಗಳನ್ನು ತಮ್ಮ ಮಾತೃಭಾಷೆ, ಪರಿಸರ ಭಾಷೆಯಲ್ಲಿ ಕಲಿತು ನಿಜವಾದ ಅರ್ಥದ ವಿದ್ಯಾವಂತರಾಗಲು ಸಾಧ್ಯವಾಗುತ್ತದೆ.

ಮಕ್ಕಳ ವಿದ್ಯೆ ಹಕ್ಕಿನ ರಕ್ಷಕನಾಗಿ ಪಾತ್ರವಹಿಸಬೇಕಾದ ಸರಕಾರವೇ ಮಕ್ಕಳು ಅಸಹಾಯಕರಾಗಿ ಸಾವಿಗೆ ಶರಣಾಗಲು ಕಾರಣವಾಗಿರುವುದು ಅತ್ಯಂತ ಆತಂಕದ ಸಂಗತಿ. ಮಕ್ಕಳ ಹಕ್ಕನ್ನು ಸರಕಾರವಾಗಲಿ, ತಂದೆತಾಯಿಗಳಾಗಲಿ , ಶಾಲಾವರ್ತಕರಾಗಲಿ ಕಸಿದುಕೊಳ್ಳದಂತೆ ಎಲ್ಲ ಪ್ರಜ್ಞಾವಂತರೂ ದನಿ ಎತ್ತಬೇಕಿದೆ. ಬಾಳಿ ಬದುಕಬೇಕಾದ ಬಾಲಕ ದೇವಿಪ್ರಸಾದ್ ನ ದುರಂತವೇ ಈ ನಿಟ್ಟಿನಲ್ಲಿ ಕೊನೆಯದಾಗಲಿ.

ನಿಮ್ಮ ಕ್ರಿಯಾತ್ಮಕ ಪ್ರತಿಕ್ರಿಯೆಗೆ ಸ್ವಾಗತವಿದೆ.

ಪ್ರೀತಿಯಿಂದ
ಪಂಡಿತಾರಾಧ್ಯ

ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ

ಮಾನ್ಯರೆ,

ನಮಸ್ಕಾರ. ಕುಮಾರವ್ಯಾಸ ಭಾರತದ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ.

ಇದರ ಬೆಲೆ ರೂ ೮೦೦. ಕೋರಿಯರ್ ವೆಚ್ಚ ರೂ ೫೦ (ಒಟ್ಟು ರೂ ೮೫೦) ಈ ಮೊಬಲಗನ್ನು ಕನ್ನಡ
ಗಣಕ ಪರಿಷತ್ತಿಗೆ ಮನಿ ಆರ್ಡರ್, ಚೆಕ್, ಡಿಡಿ ಮೂಲಕ (ಕನ್ನಡ ಗಣಕ ಪರಿಷತ್ತು
ಬೆಂಗಳೂರು ಈ ಹೆಸರಲ್ಲಿ ತೆಗೆಯಬೇಕು) ಕಳುಹಿಸಿದರೆ. ಕೋರಿಯರ್ ಮೂಲಕ
ಕಳುಹಿಸಲಾಗುವುದು.

ಬ್ಯಾಂಕ್ ನಿಂದ ನೇರ ವರ್ಗಾಯಿಸುವವರಿಗೆ ಮಾಹಿತಿ: ಕನ್ನಡ ಗಣಕ ಪರಿಷತ್ತು, ಭಾರತೀಯ
ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ೧೦೩೦೯೧೧೨೭೦೨ ಐಎಫ್ ಎಸ್ ಕೋಡ್ ಎಸ್ ಬಿ ಐ
ಎನ್ ೭೪೮೪ ಇಲ್ಲಿಗೆ ವರ್ಗಾಯಿಸಿ, kagapa@gmail.com ಇಲ್ಲಿಗೆ ವಿಳಾಸ ಕಳುಹಿಸಿದರೆ
ಅಡಕಮುದ್ರಿಕೆಯನ್ನು ಕೋರಿಯರ್ ಮೂಲಕ ಕಳುಹಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಕೆ ಎಸ್ ನವೀನ್ ೯೪೪೮೯-೦೫೨೧೪ ಸಂಪರ್ಕಿಸಬಹುದು.

ದಯಮಾಡಿ ಮೇಲ್ಕಂಡ ಮಾಹಿತಿಯನ್ನೂ ಸಹ ತಮ್ಮ ಬ್ಲಾಗ್ ನಲ್ಲಿ ಹಾಕಿರಿ. ಕಗಪವನ್ನು
ಬೆಂಬಲಿಸುವ ಗೆಳೆಯರಿಗೂ ಹೇಳಿ ಇದು ಪರಿಷತ್ತಿನ ವಿನಂತಿ ಎಂದು ಹೇಳಿರಿ.

ಆದರಗಳೊಂದಿಗೆ

ಕೆ ಎಸ್ ನವೀನ್
ಕನ್ನಡ ಗಣಕ ಪರಿಷತ್ತು

ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ

೬ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಾಲೆ ದುಡುಕುವುದು ಬೇಡ

ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು, ನ್ಯಾಯಾಲಯಗಳ ಅಭಿಪ್ರಾಯಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರ ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ ಶಿಕ್ಷಣ ಮಾಧ್ಯಮ. ಒಂದು ಮತ್ತು ಎರಡನೆಯ ತರಗತಿಗಳಲ್ಲಿ ಮಾತೃಭಾಷೆ ಅಥವಾ ಪರಿಸರಭಾಷೆ/ರಾಜ್ಯಭಾಷೆಗಳಲ್ಲಿ ಒಂದು ಭಾಷೆ ಮಾತ್ರ ಕಲಿಕೆಯ ವಿಷಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ.

ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋಚ್ಚ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿದೆ(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ(೨೦೧೧). ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಫರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿ ‘ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆ; ಇಲ್ಲದವರಿಗೆ ಮಾತೃಭಾಷಾ ಮಾಧ್ಯಮ ಸರಕಾರಿ ಶಾಲೆ’ ಎಂಬ ಸಾಮಾಜಿಕ ಭೇದಕ್ಕೆ ಬಲಿಯಾಗುವಂತಾಗಿದೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ಅನಂತರ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋಚ್ಚ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುವ ಉತ್ಸಾಹ ತೋರಿಸುವುದು ಆತಂಕದ ಸಂಗತಿ.

ಸರ್ವೋಚ್ಚ ನ್ಯಾಯಾಲಯವು ಸರಕಾರದ ಭಾಷಾ ನೀತಿಯನ್ನು ಪುರಸ್ಕರಿಸಿದ ಮೇಲೆ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮ. ಐದನೆಯ ತರಗತಿಯಿಂದ ಮಾತ್ರ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲಾರಂಭಿಸುವ ಮಕ್ಕಳಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ , ಅನಿವಾರ್ಯತೆಯಾಗಲಿ ಇರುವುದಿಲ್ಲ. ಆದ್ದರಿಂದ ಮಕ್ಕಳು ಇಂಗ್ಲಿಷ್ಅನ್ನು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಅರಂಭದ ಹಂತದಲ್ಲಿ ಮಕ್ಕಳನ್ನು ಸರಳವಾದ ಇಂಗ್ಲಿಷಿನಲ್ಲಿ ಮಾತನಾಡಿಸಿ ಅವರಿಗೆ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಸಬಲ್ಲ ಇಂಗ್ಲಿಷ್ ಮಾತನಾಡುವ ಅಧ್ಯಾಪಕರನ್ನು ಸಿದ್ಧಗೊಳಿಸಬೇಕು. ಮಕ್ಕಳು ತಮ್ಮ ಮಾತೃಭಾಷೆಯಲ್ಲಿಯೇ ಎಲ್ಲ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಹೆಚ್ಚು ಮುಂದಿರುವುದನ್ನು ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ.

ಆದ್ದರಿಂದ ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವೂ ಸಂವಿಧಾನ ವಿರುದ್ಧವೂ ಆಗುತ್ತದೆ. ಸರ್ವೋಚ್ಚ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಯ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.

ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬
panditaradhya@gmail.com

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ
೦ ೧ ೨ ೩ ೪ ೫ ೬ ೭ ೮ ೯