Monthly Archives: ಡಿಸೆಂಬರ್ 2011

“ನೀನು ನಕ್ಕರೆ ಹಾಲು ಸಕ್ಕರೆ!’

ಚಿತ್ರ ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕೀರ್ತಿಶ್ರೀ ನಾಯಕ

ಸುಸ್ಮಿತಾ ನಮ್ಮ ಮನೆಯಲ್ಲಿ ಇರಲು ಬಂದಾಗ ನಾನು ಆರನೆಯ ತರಗತಿಯಲ್ಲಿದ್ದೆ. ಸ್ವಲ್ಪ ಜಾಸ್ತಿಯೇ ಎನಿಸುವಂತೆ ಶಿಸ್ತಿನಲ್ಲಿ ಬೆಳೆದ ನನಗೆ ಸುಸ್ಮ ಯಾವ ಅಳುಕೂ ಇಲ್ಲದೆ ತನ್ನ ಮನೋಭಾವಗಳನ್ನು ಪ್ರಕಟಿಸುತ್ತಿದ್ದ ರೀತಿ ನೋಡಿ ನನಗೆ, ನಾನು ಕೈತೋಟದ ಗಿಡವಾದರೆ ಇವಳು ಕಾಡಿನ ಗಿಡದಂತೆ ಕಾಣುತ್ತಿದ್ದಳು.

ಸುಸ್ಮಿತಾ ನಮ್ಮ ಮನೆಗೆ ಬಂದ ಹೊಸದರಲ್ಲಿ ಯಾವುದೇ ಹಕ್ಕಿಯ ಕೂಗು ಕೇಳಿದರೂ ಸಾಕು, ‘ಏ ಕೀರ್ತಿ, ಇದು ಇಂಥಾ ಹಕ್ಕಿ’ ಎಂದು ಹಕ್ಕಿಯ ಹೆಸರು ಹೇಳುತ್ತಿದ್ದಳು. ಪಿಕರಾಳ, ಕಾಜಾಣ ಇತ್ಯಾದಿ ಹೆಸರುಗಳನ್ನು ಅವಳಿಂದಲೇ ಕೇಳಿ ಕಲಿತಿದ್ದೆ. ಅನಂತರ ತೇಜಸ್ವಿ ಮಾಮ ಮೈಸೂರಿಗೆ ಬಂದಾಗ ಇದು ಇಂಥದ್ದೇ ಹಕ್ಕಿ ಎಂದು ಹೇಗೆ ಗೊತ್ತುಮಾಡುವುದೆಂದು ಅವರಿಂದ ಕೇಳಿ ತಿಳಿಯುತ್ತಿದ್ದೆ. ಮೊದಮೊದಲು ಸುಸ್ಮಳಿಗೆ ಈ ಜ್ಞಾನ ಎಲ್ಲಿಂದ ಬಂತು ಎಂಬ ಕುತೂಹಲ ಆಗುತ್ತಿತ್ತು. ಕಾಡಿನಿಂದ ನಾಡಿಗೆ ಬಂದ ಇವಳು ಎಂತೆಂಥ ಅನುಭವಗಳನ್ನು ಕಳೆದುಕೊಳ್ಳುತ್ತಿದ್ದಾಳೆಂದು ನನಗೆ ಆಗ ಅರ್ಥವಾಗಿರಲಿಲ್ಲ. ಇದೇ ರೀತಿ ೩-೪ ವರ್ಷದ ಪುಟಾಣಿಯಾಗಿದ್ದ ಈಶಾನ್ಯೆ ಕೂಡ ಗಿಡ-ಬಳ್ಳಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಳು. ಅವಳಿಗೆ ಗಿಡಗಳ ಬಗ್ಗೆ ಅಷ್ಟೇ ಅಲ್ಲದೆ, ಅವುಗಳ ಉಪಯೋಗಗಳ ಬಗ್ಗೆಯೂ ತಿಳಿದಿತ್ತು. ಈ ವಿಷಯದಲ್ಲಿ ‘ಮಾರ’ನೇ ಅವಳ ಗುರುವಿರಬೇಕು. ಸುಸ್ಮಿತಾ ಮೈಸೂರಿಗೆ ಓದಲು ಬಂದ ಮೇಲೆ ಸುಮಾರು ೮೫-೯೦ ವರ್ಷದ ಮಾರನೇ ಅವಳ ಸಹಪಾಠಿಯಾಗಿದ್ದ. ಅವನೊಂದಿಗೆ ಕಾಡು ಅಲೆಯುವಾಗ ಸಂಗ್ರಹಿಸಿದ ಮಾಹಿತಿ ಇದಾಗಿರಬಹುದು.

ತೇಜಸ್ವಿ ಮಾಮ, ರಾಜೇಶ್ವರಿ ಆಂಟಿ ತಿಂಗಳಿಗೊಮ್ಮೆಯಾದರೂ ಮೈಸೂರಿಗೆ ಬಂದು ಸುಸ್ಮಳನ್ನು ನೋಡಿಕೊಂಡು ಹೋಗುತ್ತಿದ್ದರು. ಆಗ ಅವರಿದ್ದಷ್ಟು ದಿನ ಇವಳು ಅವರಜ್ಜಿಯ ಮನೆಯಲ್ಲಿರುತ್ತಿದ್ದಳು. ಹೀಗಿದ್ದಾಗ ಒಂದು ಭಾನುವಾರ ಮಾಮ ಮನೆಗೆ ಬಂದವರು ಅವರ ಮಾತುಕತೆಯೆಲ್ಲ ಮುಗಿಸಿ ಹೊರಡುವಾಗ, ‘ಕೀರ್ತಿ ನಡಿಯೆ, ನಮ್ಮನೇಲಿ ಮೀನಿದೆ. ಅಲ್ಲೇ ಊಟಮಾಡೋಣ’ ಎಂದರು. ತೇಜಸ್ವಿ ಮಾಮ ಹೇಳಿದ ಅನಂತರ ಮತ್ತೊಮ್ಮೆ ಯೋಚಿಸುವ ರೂಢಿಯೇ ಇಲ್ಲದ ನಾನು ಅವರ ಹಿಂದೆ ಹೋದೆ.
ಬಾಗಿಲನ್ನು ತೆರೆದ ರಾಜೇಶ್ವರಿ ಆಂಟಿ ನಮ್ಮನ್ನು ನೇರವಾಗಿ ಊಟದ ಮನೆಗೆ ಕರೆದುಕೊಂಡುಹೋದರು. ಅಣ್ಣ(ಕುವೆಂಪು), ಸುಸ್ಮ, ಈಶ, ಪ್ರಾರ್ಥನೆ ಊಟಕ್ಕೆ ಕುಳಿತಿದ್ದರು. ಅಮ್ಮ(ಹೇಮಾವತಿ) ಬಿಸಿ ಬಿಸಿಯಾಗಿ ಮೀನು ಇತ್ಯಾದಿಗಳನ್ನು ಹುರಿದುಕೊಡುತ್ತಿದ್ದರು. ತಾರಿಣಕ್ಕ, ರಾಜೇಶ್ವರಿ ಆಂಟಿ ಬಡಿಸುತ್ತಿದ್ದರು. ಎಲ್ಲರೂ ಏನೊ ಮಾತಾಡಿಕೊಂಡು ಊಟಮಾಡುತ್ತಿದ್ದರು. ಅಣ್ಣ ಮುಂದೆ ಕೂತದ್ದರಿಂದ ನಾನು ಹೆಚ್ಚು ಮಾತಾಡದೆ ಮೀನು, ಕೋಳಿ ಇತ್ಯಾದಿಗಳಿದ್ದ ನನ್ನ ತಟ್ಟೆ ನೋಡಿಕೊಂಡು ಸುಮ್ಮನೆ ಊಟ ಮಾಡುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಅಣ್ಣ ಏನು ಊಟ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ತಲೆಗೆ ಬಂತು. ಅವರ ತಟ್ಟೆ ನೋಡಿ ನಾನು ಅವಾಕ್ಕಾದೆ. ಅವರೂ ನಮ್ಮಂತೆ ಮೀನು ಕೋಳಿಗಳನ್ನೇ ತಿನ್ನುತ್ತಿದ್ದರು. ಆ ವಯಸ್ಸಿನಲ್ಲಿ ನನಗೆ ಜಾತಿ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ಆಗ ನನ್ನ ಪ್ರಕಾರ ಸಸ್ಯಾಹಾರಿಗಳೆಲ್ಲ ಬ್ರಾಹ್ಮಣರು, ಅಸಸ್ಯಾಹಾರಿಗಳೆಲ್ಲ ಗೌಡರು ಎಂಬ ಭಾವನೆ. ಆ ಪ್ರಕಾರ ನನ್ನ ಅಭಿಪ್ರಾಯದಲ್ಲಿ ಅಣ್ಣ ಬ್ರಾಹ್ಮಣರು, ತೇಜಸ್ವಿ ಮಾಮ, ನಾವು ಎಲ್ಲ ಗೌಡರು!
ಕುವೆಂಪು ಅವರು ಸಸ್ಯಾಹಾರಿಗಳು ಎಂದು ನಾನು ತಿಳಿದುಕೊಳ್ಳಲು ಹಲವು ಕಾರಣಗಳಿದ್ದವು. ಶಾಲೆಯಲ್ಲಿ ನಾವು ಕೇಳುತ್ತಿದ್ದ ಅಂಶಗಳು, ಅಣ್ಣ ಯಾವಾಗಲೂ ಧ್ಯಾನಾಸಕ್ತರಾಗಿರುತ್ತಾರೆಂಬ ವಿಷಯ ಮತ್ತು ಅವರಿಗೆ ಇಹದ ಅರಿವಿಲ್ಲವೆಂಬ ವಿಚಾರ ಕೇಳುತ್ತಲೇ ಬಂದಿದ್ದೆ. ಆದ್ದರಿಂದ ಕುವೆಂಪು=ತಪಸ್ವಿ=ಬಾಹ್ಮಣ ಎಂದಷ್ಟೇ ನನ್ನ ಪುಟ್ಟ ಮೆದುಳಿಗೆ ತಿಳಿದದ್ದು. ದೊಡ್ಡವಳಾಗುತ್ತಾ ಹೋದಂತೆ ತಪೋನಿರತ ಋಷಿಗಳಿಗಿಂತ ಅಣ್ಣನವರ ಜೀವನ ಹೊರತಾಗಿಲ್ಲ ಎಂಬುದು ತಿಳಿಯುತ್ತಾ ಹೋಯಿತು.

ತಾಳ್ಮೆ, ಸೌಜನ್ಯಗಳ ಮೂರ್ತಿಗಳಾಗಿದ್ದ ಅಣ್ಣ, ಅಮ್ಮ(ಕುವೆಂಪು. ಹೇಮಾವತಿ)ಯವರ ಆತ್ಮೀಯತೆಯನ್ನು, ಸುಸ್ಮಳನ್ನು ಶನಿವಾರ ಬಿಡಲು ಮತ್ತು ಭಾನುವಾರ ಕರೆತರಲು ಅವರ ಮನೆಗೆ ಹೋಗುತ್ತಿದ್ದಾಗ ಅನುಭವಿಸಿದ್ದೇನೆ. ಹಲವು ಬಾರಿ ಅಮ್ಮ, ತಾರಿಣಕ್ಕ, ನಾನು ವೆರಾಂಡದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅಣ್ಣ ಬಿಡುವಾಗಿದ್ದರೆ ತಾವೂ ಬಂದು ನಮ್ಮೊಂದಿಗೆ ಕುಳಿತು ತೇಜಸ್ವಿ ಮಾಮನ ಲೀಲೆಗಳನ್ನು ಹೇಳಿ ತಾವೂ ನಕ್ಕು ನಮ್ಮನ್ನೂ ನಗಿಸುತ್ತಿದ್ದರು. ಹಾಗಾಗಿ ತಾರಿಣಕ್ಕನ ‘ಮಗಳು ಕಂಡ ಕುವೆಂಪು’ ಪುಸ್ತಕದಲ್ಲಿನ ಹಲವು ವಿಷಯಗಳನ್ನು ಅಣ್ಣ, ಅಮ್ಮರ ಬಾಯಿಂದ ಕೇಳಿ ಬಲ್ಲೆ.

ಈ ಮೃದುಭಾಷಿಗಳ ನಡುವೆ ತೇಜಸ್ವಿ ಮಾಮ ಹೇಗೆ ಅವತರಿಸಿದರು ಎಂಬ ಬಗ್ಗೆ ಬಹಳ ಸೋಜಿಗವಾಗುತ್ತಿತ್ತು. ಅಣ್ಣ, ಅಮ್ಮ, ತಾರಿಣಕ್ಕ, ಕಲಕ್ಕ ಯಾವತ್ತೂ ಜೋರಾಗಿ ಮಾತಾಡಿದ್ದನ್ನು ನಾನು ಕೇಳಿಯೇ ಇಲ್ಲ; ಮಾಮ ಸಣ್ಣಗೆ ಮಾತಾಡಿದ್ದನ್ನೂ ಕೇಳಿ ಇಲ್ಲ. ಇದರ ಜೊತೆಗೆ ಸಮಾಜದಲ್ಲಿ ಒಬ್ಬ ಮೇರು ವ್ಯಕ್ತಿ ಎನಿಸಿಕೊಂಡವರು ತಮ್ಮ ಮಗನ ಹುಡುಗಾಟ, ಹುಡುಕಾಟಕ್ಕೆ ಯಾವುದೇ ರೀತಿಯ ಬ್ರೇಕ್ ಹಾಕದೆ ಅವರ ದಾರಿಯನ್ನು ಅವರೇ ಅವರಿಗೆ ಬೇಕಾದಂತೆ ಹುಡುಕಿಕೊಳ್ಳಲು ಬಿಟ್ಟ ಬಗ್ಗೆ ಪರಮಾಶ್ಚರ್ಯವಾಗುತ್ತದೆ. ಇದರ ಜೊತೆ ಅಣ್ಣನವರಿಗೆ ತಮ್ಮ ಬಗ್ಗೆ ಮತ್ತು ತಮ್ಮ ಮಗನ ಬಗ್ಗೆ ಎಂಥ ವಿಶ್ವಾಸ ಇತ್ತೆಂದೂ ತಿಳಿಯುತ್ತದೆ. ಅಣ್ಣ ಯಾವ ನಿಮಿಷದಲ್ಲಿಯೂ ತಮ್ಮ ವ್ಯಕ್ತಿತ್ವಕ್ಕೆ ತೇಜಸ್ವಿ ಮಾಮನಿಂದ ತೊಂದರೆಯಾಗಬಹದೆಂದು ಯೋಚಿಸದೆ ತೇಜಸ್ವಿ ಮಾಮ ಸ್ವತಂತ್ರ ವ್ಯಕ್ತಿತ್ವವಾಗಿ ಬೆಳೆಯಲು ಸಹಾಯಮಾಡಿದ್ದು ವಿಶೇಷವಾಗಿ ಕಾಣುತ್ತದೆ. ಇದು ವಿಶಾಲವಾದ ಮರದ ನೆರಳಿನಲ್ಲಿ ಮತ್ತೊಂದು ಮರ ಬೆಳೆಯುವುದಿಲ್ಲ ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಿದಂತೆನಿಸುತ್ತದೆ. ಇಂತಹ ಅಮ್ಮ, ಅಪ್ಪರನ್ನು ಪಡೆದ ತೇಜಸ್ವಿ ಮಾಮ ಧನ್ಯರು. ಇಂತಹ ದೊಡ್ಡವರ ಒಡನಾಟದಲ್ಲಿ ನಾನೂ ಕೆಲಕಾಲ ಕಳೆದದ್ದಕ್ಕೆ ನನಗೂ ಬಹಳ ಸಂತೋಷವಿದೆ.

ಒಮ್ಮೆ ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ಕುವೆಂಪು ಅವರ ಪ್ರತಿಮೆ ಮಾಡುವ ಸಲುವಾಗಿ ಶ್ರೀ ಪಿ.ಆರ್. ತಿಪ್ಪೇಸ್ವಾಮಿಯವರು ಕುವೆಂಪು ಅವರ ಮನೆಗೆ ಬಂದು ಅವರ ಚಿತ್ರಗಳನ್ನು ತೆಗೆಯುತ್ತಾ ಪ್ರತಿಮೆಯನ್ನು ಮಾಡಿಸುವುದರಲ್ಲಿ ನಿರತರಾಗಿದ್ದರು. ಅದು ರಜೆಯ ದಿನವಾಗಿದ್ದರಿಂದ ನಾನು ಸುಸ್ಮಳನ್ನು ಕರೆದುಕೊಳ್ಳಲೋ ಬಿಡಲೋ ಹೋಗಿದ್ದವಳು ಅವರು ಮಾಡುತ್ತಿದ್ದ ಪ್ರತಿಮೆಯನ್ನು ಕುತೂಹಲದಿಂದ ನೋಡುತ್ತಾ ಕುಳಿತಿದ್ದೆ. ತಿಪ್ಪೇಸ್ವಾಮಿಯವರು ಅಣ್ಣನವರಿಗೆ, ನಿಮ್ಮ ಮೊಮ್ಮಕ್ಕಳ ಜೊತೆ ಫೋಟೊ ತೊಗೋತೀನಿ ಅಂದರು. ಅಣ್ಣ ಸುಸ್ಮ ಪ್ರಾರ್ಥನೆಯರನ್ನು ಕರೆದರು.ಅನಂತರ ಅಲ್ಲೇ ಕುಳಿತಿದ್ದ ನನ್ನನ್ನೂ ‘ಬಾ ಅಕ್ಕ’ ಎಂದು ಕರೆದರು. ಆ ಕಾಲದ ಕನ್ನಡ ಅಧ್ಯಯನ ಸಂಸ್ಥೆಯ ರಾಜಕೀಯದ ಬಗ್ಗೆ ಅಲ್ಪ ಸ್ವಲ್ಪ ಅರಗಿಸಿಕೊಂಡಿದ್ದ ನನಗೆ ಏನು ಮಾಡಬೇಕೆಂದು ತಿಳಿಯದೆ ಬಹಳ ಮುಜುಗರವಾಯಿತು. ಆದರೆ ಅಣ್ಣನವರ ಮಾತನ್ನು ಮೀರುವಂತಿರಲಿಲ್ಲ. ಏನು ಮಾಡಬೇಕೆಂದೇ ತಿಳಿಯದೆ ತಿಪ್ಪೇಸ್ವಾಮಿಯವರ ಮುಖ ನೋಡಿದೆ. ಕುವೆಂಪು ಅವರು ಜಿ.ಎಚ್. ನಾಯಕರ ಮಗಳನ್ನು ತಮ್ಮೊಂದಿಗೆ ಫೋಟೋಗೆ ನಿಲ್ಲಲು ಕರೆಯುತ್ತಿರುವುದನ್ನು ನೋಡಿ ಅವರು ನನಗಿಂತ ಹೆಚ್ಚಿನ ಗೊಂದಲದಲ್ಲಿದ್ದಂತೆ ಕಂಡಿತು. ಅಣ್ಣನವರ ಮಾತನ್ನು ಮೀರಲಾರದೆ ನಾನೂ ಅವರೊಂದಿಗೆ ಫೋಟೋವನ್ನೇನೊ ತೆಗೆಸಿಕೊಂಡೆ. ಆದರೆ ಅದರ ಪ್ರತಿಯನ್ನು ತಿಪ್ಪೇಸ್ವಾಮಿಯವರೂ ಕೊಡಲಿಲ್ಲ, ನಾನೂ ಕೇಳಲಿಲ್ಲ. ಅಪ್ಪ, ಮೀರಕ್ಕರಿಗೆ ಈ ವಿಷಯವನ್ನು ನಾನು ಹೇಳಲೂ ಇಲ್ಲ.

ಶಿವಮೊಗ್ಗ ಸುಬ್ಬಣ್ಣನವರು ಕುವೆಂಪು ಭಾವಗೀತೆಗಳನ್ನು ಆಡಿಯೋ ಕ್ಯಾಸೆಟ್ ಮಾಡಿದ ಕಾಲವದು. ನಾನು, ಸುಸ್ಮ ಆ ಕ್ಯಾಸೆಟ್ಟನ್ನು ಪದೇಪದೇ ಕೇಳುತ್ತಿದ್ದೆವು. ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣ ಅಡಿಗರು ನಮ್ಮ ಮನೆಗೆ ಬಂದಿದ್ದರು. ಅವರು ಮೈಸೂರಿಗೆ ಬಂದಾಗಲೆಲ್ಲ ನಮ್ಮಲ್ಲಿ ಉಳಿದುಕೊಳ್ಳುತ್ತಿದ್ದರು. ಅಡಿಗರಿಗೆ ಕಾಫಿ, ಸಿಗರೇಟು ಎರಡು ಇದ್ದರೆ ಮತ್ತೇನೂ ಬೇಡವಾಗಿತ್ತು. ಆ ದಿನ ಕೂಡ ಮೀರಕ್ಕ ಶಾಲೆಯಿಂದ ಬರುತ್ತಿದ್ದಂತೆಯೇ ನೇರವಾಗಿ ಅಡಿಗೆ ಮನೆಗೆ ಅಡಿಗರಿಗೆ ಕಾಫಿ ಮಾಡಲು ಹೊರಟಿದ್ದನ್ನು ನೋಡಿದ ಅಡಿಗರು ಮೀರಕ್ಕನಿಗೆ ಹೇಳುತ್ತಿದ್ದ ಮಾತು ಆಗ ತಾನೇ ಶಾಲೆಯಿಂದ ಮರಳಿದ ನನ್ನ ಕಿವಿಗೂ ಬಿತ್ತು. ಅವರು ‘ಮೀರಾ, ಕಾಫಿ ಮಾಡಬೇಡಮ್ಮ. ನಾನು ಕುಡಿದಾಯಿತು’ ಎಂದರು. ನಾನೂ ಮನೆಯಲ್ಲಿಲ್ಲದ್ದರಿಂದ ಮೀರಕ್ಕ ಅವಾಕ್ಕಾಗಿ, ‘ಎಲ್ಲಿ ಸಾರ್’ ಎಂದರು. ಅದಕ್ಕೆ ಅಡಿಗರು ‘ಸುಸ್ಮಿತ ಮಾಡಿಕೊಟ್ಟಳು’ ಎಂದರು. ಸುಸ್ಮಿತಾ ಆಗ ೨-೩ ನೇ ತರಗತಿಯಲ್ಲಿ ಓದುತ್ತಿದ್ದ ಪುಟಾಣಿ. ಮೀರಕ್ಕ ಈ ಮಾತನ್ನು ನಂಬಲಾರದೆ ಅಲ್ಲೇ ಇದ್ದ ಸುಸ್ಮಳನ್ನು ಕಾಫಿ ಹೇಗೆ ಮಾಡಿದೆ? ಎಂದು ಕೇಳಿದರು. ಅವಳು ತಾನು ಮಾಡಿದ ರೀತಿಯನ್ನು ಮೀರಕ್ಕನಿಗೆ ವಿವರಿಸುತ್ತಿದ್ದಳು. ಅಲ್ಲೇ ನಿಂತು ಇವೆಲ್ಲವನ್ನೂ ಕೇಳುತ್ತಿದ್ದ ನಾನು ‘ಸುಸ್ಮ, ಕಾಫಿ ಮಾಡಕ್ಕೆ ನೀನು ಎಷ್ಟೆಲ್ಲಾ ಕಷ್ಟಪಟ್ಟೆ.. ಆದರೆ ನಿಮ್ಮ ಅಜ್ಜಯ್ಯನ ಮನೇಲಿ ಬಹಳ ಸುಲಭ ಕಣೆ’ ಎಂದೆ. ಚಿಕ್ಕವಳಾದ ಅವಳಿಗೆ ಅದೇನೂ ಅರ್ಥವಾಗಲಿಲ್ಲ. ‘ಅದ್ಹೇಗೇ?’ ಎಂದಳು. ನಾನು, ‘ನಿಮ್ಮ ಅಜ್ಜಿ ಕಾಫಿ ಡಿಕಾಕ್ಷನ್ ಲೋಟದಲ್ಲಿ ಹಾಕಿಕೊಂಡು ನಿಮ್ಮ ಅಜ್ಜನ ಮುಂದೆ ಬಂದು ನಿಂತು ನಕ್ಕರೆ ಹಾಲು ಸಕ್ಕರೆ ಮಿಕ್ಸ್ ಆಗುತ್ತೆ’ ಎಂದು ‘ನೀನು ನಕ್ಕರೆ ಹಾಲು ಸಕ್ಕರೆ’ ಎಂಬ ಕುವೆಂಪು ಅವರ ಭಾವಗೀತೆಯ ಸಾಲುಗಳನ್ನು ನೆನಪು ಮಾಡಿಕೊಂಡು ಹೇಳಿದೆ. ನಮ್ಮ ಈ ಸಂಭಾಷಣೆಗೆ ಮೀರಕ್ಕ, ಅಡಿಗರು ಜೋರಾಗಿ ನಕ್ಕರು. ಆದರೆ ಪಾಪ ಆ ಪುಟ್ಟ ಮನಸ್ಸಿಗೆ ಏನನಿಸಿತೋ ಏನೋ! ಮುಂದಿನ ಸಲ ನಾವು ಅವರ ಅಜ್ಜಯ್ಯನ ಮನೆಗೆ ಹೋದಾಗ ಅಜ್ಜಯ್ಯ, ಅಜ್ಜಿಯರಿಗೆ ಬಹಳ ಬೇಸರದಿಂದ ನನ್ನ ಮುಂದೇ ಈ ಸಂಗತಿಯನ್ನು ಹೇಳಿದಳು. ನಾನು ಇದನ್ನು ನಿರಿಕ್ಷಿಸಿಯೇ ಇರಲಿಲ್ಲ. ವಿಷಯವನ್ನು ಕೇಳಿ ಅಣ್ಣ, ಅಮ್ಮ ಮುಕ್ತವಾಗಿ ನಕ್ಕರು. ಅನಂತರ ಅಮ್ಮ ಸುಸ್ಮಿತಳಿಗೆ ಅರ್ಥವಾಗುವಂತೆ ‘ಅಕ್ಕಾ, ಕೀರ್ತಿ ಮಾಡಿದ್ದು ಹಾಸ್ಯ, ಅದಕ್ಕೆಲ್ಲ ಬೇಜಾರು ಮಾಡಿಕೊಳ್ಳಬಾರದಕ್ಕ’ ಎಂದು ಅವಳನ್ನು ಸಮಾಧಾನ ಮಾಡಿದರು.

ನಮ್ಮ ಮದುವೆಯಾದ ಹೊಸದರಲ್ಲಿ ಅಣ್ಣ, ತಾರಿಣಕ್ಕ ಅವರನ್ನು ಮಾತನಾಡಿಸಿಕೊಂಡು ಬರಲು ನಾನು, ಮದನ್ ಕುವೆಂಪು ಅವರ ಮನೆಗೆ ಹೋದೆವು. ಆಗ ಅಮ್ಮ ಇರಲಿಲ್ಲ. ಗೇಟಿನ ಹೊರಗೆ ಕುವೆಂಪು ವಿಶ್ವವಿದ್ಯಾನಿಲಯದ ಕಾರು, ಮತ್ತೂ ಒಂದೆರಡು ಕಾರುಗಳಿದ್ದದನ್ನು ನೋಡಿ ನಾನು, ಮದನ್ ಸ್ವಲ್ಪ ಹೊತ್ತು ಬಿಟ್ಟು ಬಂದರಾಯಿತೆಂದು ಮಾತನಾಡಿಕೊಂಡೆವು. ಈ ವಿಷಯವನ್ನು ತಾರಿಣಕ್ಕನವರಿಗೆ ಹೇಳಿಬರಲು ನಾನೊಬ್ಬಳೇ ಒಳಗೆ ಹೋದೆ. ಹಾಲಿನಲ್ಲಿ ಚದುರಂಗ ಮಾಮ, ಶಾಂತಿನಾಥ ದೇಸಾಯಿಯವರು, ಶಿವಮೊಗ್ಗೆಯ ಕೃಷ್ಣಮೂರ್ತಿ ಸಿರ್ಸಿ ಮತ್ತೆ ನಮಗೆ ಪರಿಚಯದ ಒಬ್ಬಿಬ್ಬರು ಇದ್ದರು. ಆಗ ಶಾಂತಿನಾಥ ದೇಸಾಯಿಯವರು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು. ನಾನು ಒಳಗೆ ಹೋಗುತ್ತಿದ್ದಂತೆಯೇ ಅಣ್ಣ, ‘ಅಕ್ಕಾ, ಬಂದ್ಯಾ’ ಎಂದು ಅತಿಥಿಗಳ ಕಡೆ ತಿರುಗಿ ‘ನಾವು ಕೀರ್ತಿ, ಅವಳ ಗಂಡನನ್ನು ಮನೆಗೆ ಬರಲು ಹೇಳಿದ್ದೆವು. ಆದರೆ ಅನಿರೀಕ್ಷಿತವಾಗಿ ನೀವು ಬಂದಿದ್ದೀರಿ’ ಅಂದರು. ಎಲ್ಲ ಹಿರಿಯರ ನಡುವೆ ನನಗೆ ಬಹಳ ಮುಜುಗರವಾಗುತ್ತಿತ್ತು. ನಮ್ಮ ಮಾತುಗಳನ್ನು ಕೇಳಿದ ತಾರಿಣಕ್ಕ ಹೊರಗೆ ಬಂದರು. ಆಗ ನಾನು ಅಕ್ಕನಿಗೆ ‘ನಾನು, ಮದನ್ ಸ್ವಲ್ಪ ಹೊತ್ತು ಬಿಟ್ಟು ಬರುತ್ತೇವೆ’ ಎಂದೆ. ಇದನ್ನು ಕೇಳಿಸಿಕೊಂಡ ಅಣ್ಣ ‘ಇಲ್ಲ ಇಲ್ಲ, ನಾವು ಈ ಹೊತ್ತಿಗೆ ನಿಮಗೆ ಬರಕ್ಕೆ ಹೇಳಿದ್ದು, ನೀನು ಹೋಗಿ ನಿನ್ನ ಗಂಡನನ್ನ ಕರ್ಕೊಂಬಾಕ್ಕ’ ಎಂದರು. ಅಣ್ಣನವರಿಗೆ ಎದುರಾಡಲಾಗದೆ ನಾನು ಮದನ್ ಅನ್ನು ಕರೆದುಕೊಂಡು ಬಂದೆ. ಆಗ ಅಣ್ಣ ಕುಳಿತಿದ್ದವರಿಗೆ ‘ಇವನು ಕಲ್ಲು ಮಣ್ಣುಗಳ ಜೊತೆ ಮಾತನಾಡುವವನು’ ಎಂದು ಪರಿಚಯಿಸಿದರು. ಒಂದು ನಿಮಿಷ ನಮಗ್ಯಾರಿಗೂ ಇವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಅನಂತರ ಅವರೇ ಇವನು ಇಂಜಿನಿಯರ್, ಇವನ ವ್ಯವಹಾರ ಏನಿದ್ದರೂ ಕಲ್ಲು ಮಣ್ಣುಗಳ ಜೊತೆ. ಅದಕ್ಕೇ ಹಾಗೆ ಹೇಳಿದೆ ಎಂದು ನಕ್ಕರು. ನಮ್ಮ ಮದುವೆಗೆ ಯಾರನ್ನೂ ಕರೆಯದೇ ಇದ್ದುದರಿಂದ ಮದನ್ ಗೆ ಚದುರಂಗ ಮಾಮ, ಸಿರ್ಸಿ, ದೇಸಾಯಿಯವರ ಪರಿಚಯವಾಗಿದ್ದು ಆಗಲೇ.
ಶಾಂತಿನಾಥ ದೇಸಾಯಿಯವರು ಕುವೆಂಪು ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯ ತೋರಿಸುವ ವ್ಯವಸ್ಥೆ ಮಾಡುವ ಸಲುವಾಗಿ ಬಂದಿದ್ದರೆಂಬುದು ಅವರ ಮಾತಿನ ಮೂಲಕ ನಮಗೆ ಅನಂತರ ತಿಳಿಯಿತು.

ಒಮ್ಮೊಮ್ಮೆ ಸುಸ್ಮಳನ್ನು ಕರೆಯಲು ನಾನು ಭಾನುವಾರ ಸಂಜೆ ಹೋದಾಗ ಬರಲು ನಿರಾಕರಿಸುತ್ತಿದ್ದಳು. ಆಗ ಸೋಮವಾರ ಬೆಳಗ್ಗೆ ಅಣ್ಣ, ಅಮ್ಮ ಅವರ ದೊಡ್ಡ ಕಾರಿನಲ್ಲಿ ಅವಳನ್ನು ಕರೆದುಕೊಂಡು ಬರುತ್ತಿದ್ದರು. ಅಣ್ಣನವರ ಆ ಕಾರು ಯೂನಿವರ್ಸಿಟಿಯ ಕ್ಯಾಂಪಸ್ಸಿನ ಸಣ್ಣ ರಸ್ತೆಯೊಳಗೆ ನುಗ್ಗದೇ ಇದ್ದುದರಿಂದ ಅಣ್ಣ ಮೇನ್ ರೊಡಿನಲ್ಲಿ ಕಾರು ನಿಲ್ಲಿಸಿಕೊಂಡಿರುತ್ತಿದ್ದರು. ಅಮ್ಮ ಒಂದು ಕೈಯಲ್ಲಿ ಸುಸ್ಮಿತಳ ಕೈಯನ್ನೂ ಮತ್ತೊಂದು ಕೈಯಲ್ಲಿ ಅವರ ತೋಟದಲ್ಲಿ ಬೆಳೆದ ಹಣ್ಣುಗಳ ಬುಟ್ಟಿಯನ್ನೂ ಹಿಡಿದುಕೊಂಡು ಬರುವ ದೃಶ್ಯವನ್ನು ನಾನೆಂದಿಗೂ ಮರೆಯಲಾರೆ. ಅಣ್ಣ, ಅಮ್ಮರ ನೆನಪಾದಾಗಲೆಲ್ಲ ನಾರು ಮಡಿಯುಟ್ಟು ಸಾತ್ವಿಕ ಜೀವನ ನಡೆಸುವ ತಪಸ್ವಿಗಳ ಬಗ್ಗೆ ಓದಿದ್ದು ಕಣ್ಣ ಮುಂದೆ ಬಂದು ಅವರು ಅದರ ಸಾಕಾರ ಮೂರ್ತಿಗಳಂತೆ ನನಗನಿಸುತ್ತಿದ್ದರು.


ನನ್ನ ಮಗಳು ಚಕಿತ ಡಿಸೆಂಬರ್ ೨೩.೧೯೮೯ರಂದು ಹುಟ್ಟಿದಳು. ನನ್ನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಪದ್ಮಾ ಆಂಟಿಗೆ(ಪದ್ಮಾ ಶ್ರೀರಾಂ), ‘ಈ ಡಾಕ್ಟರುಗಳು ಗಡಿಬಿಡಿ ಮಾಡದಿದ್ದರೆ ಇವಳು ಅಣ್ಣನವರ ಹುಟ್ಟಿದ ದಿನದಂದೇ ಹುಟ್ಟುವ ಸಾಧ್ಯತೆ ಇತ್ತು’ ಎಂದಿದ್ದೆ. ಇದನ್ನು ಆಂಟಿ ತಾರಿಣಕ್ಕನಿಗೆ ಹೇಳಿರಬೇಕು. ತಾರಿಣಕ್ಕನ ಮೂಲಕ ವಿಷಯ ತಿಳಿದ ಅಣ್ಣ, ತಾರಿಣಕ್ಕ ನನ್ನನ್ನು ನೋಡಲು ಆಸ್ಪತ್ರೆಗೆ ಬರುವಾಗ ಅವರೊಂದಿಗೆ ಕಲ್ಲುಸಕ್ಕರೆ ಕೊಟ್ಟು ಕಳುಹಿಸಿ, ‘ಚಕಿತಾ ಕುವೆಂಪು ಅವರ ಅಧ್ಯಾತ್ಮ ಗುರು ಶ್ರೀ ಶಿವಾನಂದರು ಹುಟ್ಟಿದ ದಿನ ಹುಟ್ಟಿದ್ದಾಳೆಂದೂ ಈ ಸಂಗತಿ ಅವರಿಗೆ ಬಹಳ ಸಂತಸ ತಂದಿದೆ’ಯೆಂದೂ ಹೇಳಿ ಕಳುಹಿಸಿದ್ದರು.

ಹೀಗೇ ನಮಗೆ ವಯಸ್ಸಾದಂತೆ ನಾವು ನಮ್ಮ ಹಿರಿಯ ಚೇತನಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಆದರೆ ಎಂದೋ ಒಂದು ದಿನ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗಿನ ಬೆಚ್ಚನೆ ನೆನಪುಗಳು ಮನಸ್ಸಿಗೆ ಹಿತವೆನಿಸುತ್ತವೆ, ಮುದ ನೀಡುತ್ತವೆ.

ಸೌಜನ್ಯ ಹಾಡು ಪಾಡು ಆಂದೋಲನ ದಿನ ಪತ್ರಿಕೆ ಮೈಸೂರು ೨೫-೧೨-೨೦೧೧

ಗಂಗಾವತಿ ಸಮ್ಮೇಳನದ ಕರಪತ್ರ

ಮಾನ್ಯರೆ,
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಮುಗಿದಿದೆ. ಸಮ್ಮೇಳನಕ್ಕಾಗಿ ಸಿದ್ಧಪಡಿಸಿ ಅಲ್ಲಿ ವಿತರಿಸಿದ ಕರಪತ್ರವನ್ನು ಇಲ್ಲಿ ಕೊಟ್ಟಿದೆ. ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ, ಕನ್ನಡ ಅಂಕಿಗಳನ್ನು ಬಳಸಿ ಎನ್ನುವ ಕರಪತ್ರವನ್ನು ಇಂದಿನವರೆಗೆ ನವೀಕರಿಸಲಾಗಿದೆ. ಮಕ್ಕಳ ಶಿಕ್ಷಣ ಹಕ್ಕಿನ ಹಕ್ಕೊತ್ತಾಯವಿರುವಂತೆ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುವ ದುಡುಕಿನ ಬಗ್ಗೆ, ಕನ್ನಡ ಶಾಲೆಗಳನ್ನು ಮುಚ್ಚುವ ಬಗ್ಗೆ ವಿರೋಧ ಇಲ್ಲಿವೆ. ಎಂದಿನಂತೆ ನಿಮ್ಮ ಪ್ರತಿಕ್ರಿಯೆಗಳಿಗೆ ಮುಕ್ತ ಸ್ವಾಗತವಿದೆ.

ಕರ್ನಾಟಕದ ಹಲವೆಡೆ ದೊರೆತಿರುವ ಕ್ರಿಪೂ ೩ನೇ ಶತಮಾನದ ಅಶೋಕನ ಶಾಸನಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಪ್ರಾಕೃತ ಭಾಷೆಯ ಅಂಕಿಗಳು ಮೊದಲಬಾರಿಗೆ ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಕ್ರಿಶ.೬ನೇ ಶತಮಾದ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.

ಬ್ರಾಹ್ಮೀ ಲಿಪಿಯ ದಕ್ಷಿಣದ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಕ್ರಿ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದಾರೆ.

ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ. ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದ ರಾಜ್ಯದ ದೊಡ್ಡ ಪತ್ರಿಕೆಗಳು ಈಗ ಕನ್ನಡ ಅಂಕಿಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುತ್ತಿಲ್ಲ. ಕರ್ಮವೀರ, ಕಸ್ತೂರಿ, ಹೊಸತು ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳುತ್ತಿರುವುದು ಮೆಚ್ಚುವಂಥದು. ಸಂಜೆವಾಣಿ ಸುದ್ದಿಯ ದಿನಾಂಕವನ್ನು ಮಾತ್ರ ಕನ್ನಡ ಅಂಕಿಗಳಲ್ಲಿ ನಮೂದಿಸುತ್ತಿದೆ! ಕನ್ನಡ ಪ್ರಭದ ಅಂತರಜಾಲದ ಅಕ್ಷರ ಆವೃತ್ತಿಯಲ್ಲಿ ಮಾತ್ರ ಕನ್ನಡ ಅಂಕಿಗಳಿವೆ! ಪ್ರಜಾವಾಣಿಯ ಮಾಸಿಕ ಪುರವಣಿ ಸಾಹಿತ್ಯ ಸಂಚಿಕೆಯ ಸಂಖ್ಯೆ ಮಾತ್ರ ಕನ್ನಡ ಅಂಕಿಯಲ್ಲಿದೆ! ಸಂಯುಕ್ತ ಕರ್ನಾಟಕ, ಹೊಸ ದಿಗಂತ ಮೊದಲಾದವುಗಳಲ್ಲಿ ಭಾನುವಾರದ ಪುರವಣಿಗಳ ಪುಟಸಂಖ್ಯೆಗಳು ಮಾತ್ರ ಕನ್ನಡ ಅಂಕಿಗಳಲ್ಲಿವೆ! ರಾಜ್ಯ ಸರಕಾರದ ಮಾಸಪತ್ರ್ರಿಕೆ ಜನಪದ ಮುಖಪುಟದಲ್ಲಿ ವರ್ಷವನ್ನು ಮಾತ್ರ ಕನ್ನಡ ಅಂಕಿಗಳಲ್ಲಿ ಪ್ರಕಟಿಸುತ್ತಿದೆ! ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆಂದೋಲನ, ಮೈಸೂರು ಮಿತ್ರಗಳಂತೆ ರಾಜ್ಯದ ವಿವಿಧ ಜಿಲ್ಲಾ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ.

ರಾಜಧಾನಿಯ ಮಾಧ್ಯಮಗಳು ಬಳಸುತ್ತಿರುವ ಕನ್ನಡವು ಪ್ರತಿರೋಧ ಸಾಮರ್ಥ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿದೆ. ಅದಕ್ಕೆ ತುರ್ತಾಗಿ ಕರ್ನಾಟಕದ ವಿವಿಧ ಪ್ರದೇಶಗಳಿಂದ ಆರೋಗ್ಯಕರ ರಕ್ತದಾನವಾಗಬೇಕಿದೆ. ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕಾದ ಮಾಧ್ಯಮಗಳು ಒಂದೇ ಉಸಿರಿನಲ್ಲಿ ಮತೀಯ ಮೂಲಭೂತವಾದದ ಮೌಢ್ಯವನ್ನೂ ಇಂಗ್ಲಿಷ್ ಗುಲಾಮಗಿರಿಯನ್ನೂ ಪ್ರತಿಪಾದನೆ ಮಾಡುವುದು ಸ್ಪರ್ಧಾತ್ಮಕವೆನ್ನುವಂತೆ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ.

ಕನ್ನಡವು ಅಭಿಜಾತ(ಶಾಸ್ತ್ರೀಯ) ಭಾಷೆಯೆಂಬ ತೋರಿಕೆಯ ಅಭಿಮಾನವನ್ನು ಪ್ರಕಟಿಸುವ ಕನ್ನಡದ ಮಾಧ್ಯಮಗಳು ಕನ್ನಡ ಭಾಷೆಯ ವೈಶಿಷ್ಟ್ಯ, ಸೂಕ್ಷ್ಮಗಳನ್ನು ಓದುಗರಿಗೆ ಪರಿಚಯಿಸುವ ಗೋಜಿಗೆ ಹೋಗದೆ ಅನಗತ್ಯವಾಗಿ ಇಂಗ್ಲಿಷ್ ಅಕ್ಷರ, ಪದ, ಪದಪುಂಜಗಳನ್ನು ಬಳಸುತ್ತಿವೆ. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ ‘ತಾEA ದೇವರು!’ ಎಂದು ಬರೆಯುವಂತೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಆದ್ಯಕ್ಷರಗಳಾದ ವಿ ಕ ಗಳನ್ನು ಇಂಗ್ಲಿಷಿನ ವಿ ಕೆ ಎಂದು ಬದಲಾಯಿಸಿ ಅದನ್ನು ಕನ್ನಡ ಪದ ‘ಲವಲವಿಕೆ’ಯಲ್ಲಿರುವ ‘ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು ‘ಲವಲ’ ಎಂದು ಅರ್ಥಹೀನವಾಗಿಸಿ, ವಿಕಲಾಂಗ(‘ವಿಕಲಚೇತನ’!)ಗೊಳಿಸಿದೆ. ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ವಿಜಯ Next(ನೆಕ್ಸ್ಟ್) ಎಂಬ ಕಲಬೆರಕೆ ಹೆಸರಿನ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳ ಬಳಕೆ ಹೆಚ್ಚಿದೆ. ಕೆಲವು ಕನ್ನಡ ಸಂಪಾದಕರು ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬೆರಸುವ ಗೀಳಿನಿಂದ ನರಳುತ್ತಿರುವಂತಿದೆ. ಇಂಗ್ಲಿಷಿನಲ್ಲಿ ಮಾತನಾಡುವಾಗ, ಬರೆಯುವಾಗ ಒಂದು ಕನ್ನಡ ಪದವೂ ನುಸುಳದಂತೆ ಎಚ್ಚರವಹಿಸುವವರು ಕನ್ನಡದ ಬಗ್ಗೆಯೂ ಅಷ್ಟೇ ಪ್ರಬುದ್ಧರಾಗಿ ವರ್ತಿಸುವುದು ಯಾವಾಗ?

ಎಫ್.ಎಂ. ರೇಡಿಯೋ ಕನ್ನಡ ವಾಹಿನಿಗಳಲ್ಲಿ ಇಂಗ್ಲಿಷ್ ಕಲಬೆರಕೆಯ ಅಬದ್ಧ ರೂಪಗಳು ಜುಗುಪ್ಸೆಯನ್ನು ಉಂಟುಮಾಡುತ್ತವೆ. ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು ‘ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ‘ಜಿಲ್ಲಾ ಜರ್ನಿ’ ಇತ್ಯಾದಿ ಇಂಗ್ಲಿಷಿನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು.

ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-೨: ವೈವ : ೭೮:೨೦೦೧-೦೨ ದಿನಾಂಕ ೩೧-೮-೨೦೦೧). ರಾಜ್ಯಗಳಲ್ಲಿ ನೋಂದಣಿಯಾಗುವ ಎಲ್ಲ ವಾಹನಗಳೂ ಆಯಾ ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ನೋಂದಣಿ ಫಲಕಗಳನ್ನು ಪ್ರದರ್ಶಿಸುವುದು ದೇಶಾದ್ಯಂತ ಏಕರೂಪವಾಗಿ ಜಾರಿಗೆ ಬರುವಂತೆ ಒತ್ತಾಯಿಸಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳೂ ಕನ್ನಡ ಅಂಕಿಗಳಲ್ಲಿರಬೇಕು.

ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯ ಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ (೨೦೧೧). ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಮಾನದ ಅನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿರುವುದು ಆತಂಕದ ಸಂಗತಿ.

ಸರ್ವೋನ್ನತ ನ್ಯಾಯಾಲಯವು ಪುರಸ್ಕರಿಸಿದ ಸರಕಾರದ ಭಾಷಾ ನೀತಿಯಿಂದ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ. ಇದರಿಂದ ಹಿಂದುಳಿದ ವರ್ಗಗಳ ಮಕ್ಕಳಂತೆ ಮುಂದುವರೆದ ವರ್ಗಗಳ ಮಕ್ಕಳೂ ಮಾತೃಭಾಷೆಯಲ್ಲಿಯೇ ಕಲಿಯುವುದರಿಂದ ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಸ್ಪರ್ಧೆಯ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಸೌಲಭ್ಯಗಳಿರುವ ಮುಂದುವರೆದ ಮಕ್ಕಳ ಜೊತೆ, ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಸೌಲಭ್ಯಗಳಿಲ್ಲದ ಹಿಂದುಳಿದ ವರ್ಗಗಳ ಮಕ್ಕಳು ಇಂಗ್ಲಿಷನ್ನೂ ಕಲಿಯುತ್ತಾ ಸ್ಪರ್ಧಿಸಬೇಕಾಗುವುದರಿಂದ ಅವರ ನಡುವಿನ ಅಸಮಾನತೆಯ ಅಂತರ ಹೆಚ್ಚುವಂತಾಗುತ್ತದೆ. ಅದರ ಬದಲು ಎಲ್ಲ ಮಕ್ಕಳೂ ತಮ್ಮ ಮಾತೃಭಾಷೆಯಲ್ಲಿಯೇ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಸಮಾನವಾಗಿ ಮುಂದುವರೆಯಲು ಸಾಧ್ಯವಾಗುವುದು ಮಹತ್ವದ ಸಂಗತಿ.

ಮಕ್ಕಳು ಐದನೆಯ ತರಗತಿಯಿಂದ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲು ಆರಂಭಿಸುವುದರಿಂದ ಅವರಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ, ಅನಿವಾರ್ಯತೆಯಾಗಲಿ ಇರುವುದಿಲ್ಲ. ಅವರು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯವನ್ನು ಇಂಗ್ಲಿಷಿನಲ್ಲಿ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದಲ್ಲಿಯೇ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವೂ ಮಕ್ಕಳ ಶಿಕ್ಷಣ ಹಕ್ಕಿನ ವಿರುದ್ಧವೂ ಆಗುತ್ತದೆ. ಸರ್ವೋನ್ನತ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮಥ್ರ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.

ಸರ್ವೋನ್ನತ ನ್ಯಾಯಾಲಯ ಅನುಮೋದಿಸಿದ್ದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿ, ಅದರ ಇತ್ಯರ್ಥವನ್ನು ಹದಿನಾಲ್ಕು ವರ್ಷಗಳವರೆಗೆ ವಿಳಂಬಿಸಿ, ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಿತಗೊಳಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯೇ ಆಗಿದೆ. ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ, ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿನ ಅವಕಾಶವನ್ನು ಶಾಶ್ವತವಾಗಿ ತಪ್ಪಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವದು ಈ ಸಂಶಯಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದಕ್ಕೆ ಕೆಲವರು ಮಾತ್ರ ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮಾತ್ರ ನಿರ್ಧರಿಸುತ್ತಾರೆ. ಮಾತೃಭಾಷೆಯಲ್ಲದ ಭಾಷೆಯನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣ ಎಂದು ಶಿಕ್ಷಣ ತಜ್ಞರು ಯಾರೂ ಹೇಳಿಲ್ಲ. ಅದಕ್ಕೆ ಬದಲಾಗಿ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದೇ ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಕಲಿಸುವುದು ಮಾತ್ರ ಶೈಕ್ಷಣಿಕವಾಗಿ ಮುಖ್ಯ.

ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿಯೇ ಕಲಿಸಬೇಕು. ಅದನ್ನು ಯಾರೂ ಬೇಡವೆನ್ನುತ್ತಿಲ್ಲ. ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವಂತೆ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಅದನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಅವರು ಮಕ್ಕಳೊಂದಿಗೆ ಸಹಜವಾಗಿ ಸರಳವಾದ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಸುವುದರಿಂದ ಮಕ್ಕಳು ಇಂಗ್ಲಿಷ್ನಲ್ಲಿ ಮಾತನಾಡುವುದನ್ನು ಮೊದಲು ಕಲಿಯುತ್ತಾರೆ. ಅನಂತರ ಇಂಗ್ಲಿಷಿನಲ್ಲಿ ಓದುವುದು ಬರೆಯುವುದನ್ನು ಕಲಿಸಬೇಕು. ಹಾಗೆ ಮಾಡದೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅಕ್ಷರ, ಪುಸ್ತಕಗಳನ್ನು ಓದಿಸುತ್ತಿರುವುದರಿಂದ ಉದ್ದೇಶೀತ ಪ್ರಯೋಜನವಾಗುತ್ತಿಲ್ಲ. ಯಾವಾಗಬೇಕಾದರೂ ಶೈಕ್ಷಣಿಕವಾದ ಸರಿಯಾದ ಕ್ರಮದಲ್ಲಿ ಸುಲಭವಾಗಿ ಕಲಿಯಬಹುದಾದುದನ್ನು ಶೈಕ್ಷಣಿಕವಲ್ಲದ ಕ್ರಮದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದಲೇ ಕಡ್ಡಾಯವಾಗಿ ಕಲಿಸಬೇಕೆಂದು ವಾದಿಸುವುದರಲ್ಲಿ ಅರ್ಥವಿಲ್ಲ.

ಸ್ವಾತಂತ್ರ್ಯಾನಂತರ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದ್ದೇವೆ. ಕನ್ನಡವು ಕನ್ನಡಿಗರೆಲ್ಲರ ತಾಯಿ, ನಾಡದೇವಿ ಎನ್ನುವುದು ಅಮೂರ್ತ ಕಲ್ಪನೆ. ಅದನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಮೊದಲಾದವುಗಳ ಜೊತೆ ಸಮೀಕರಿಸಕೂಡದು. ಕನ್ನಡ ತಾಯಿ, ನಾಡದೇವಿಯ ಹೆಸರಿನಲ್ಲಿ ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಪೂಜಾ ಕ್ರಮವನ್ನು ನಡೆಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಅವರು ಹೇಳಿರುವಂತೆ ‘ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬಂದು’, ಮೊಗೇರಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ಕನ್ನಡವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಹೊಣೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.

ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ಧಾರ್ಮಿಕ ವ್ಯಕ್ತಿಗಳೂ ಎಲ್ಲರೊಂದಿಗೆ ಸಮಾನ ಗೌರವದಿಂದ ಭಾಗವಹಿಸಬಹುದು. ಆದರೆ ಇಲ್ಲಿ ಅವರನ್ನು ಧಾರ್ಮಿಕ ವೇದಿಕೆಗಳಲ್ಲಿ ಸ್ತುತಿಸುವಂತೆ ‘ದಿವ್ಯ ಸಾನ್ನಿಧ್ಯ’ ಎಂದು ವಿಶೇಷವಾಗಿ ಸಂಬೋಧಿಸುವುದು ಅನುಚಿತ. ಪರಿಷತ್ತು ಈ ದಿವ್ಯಸನ್ನಿಯಿಂದ ಗುಣಮುಖವಾಗಬೇಕು.

ಗಂಗಾವತಿ*
೯ ಡಿಸೆಂಬರ್ ೨೦೧೧
ರಾಷ್ಟ್ರೀಯ ಶಕೆ ೧೯೩೩ ಹೇಮಂತ ಮಾರ್ಗಶಿರ ೯
O ಚತುರ್ದಶಿ ಕೃತ್ತಿಕಾ ಶುಕ್ರವಾರ

ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ
ಮೈಸೂರು ೫೭೦೦೦೬