Monthly Archives: ಸೆಪ್ಟೆಂಬರ್ 2013

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಧಾಕೃಷ್ಣನ್ ಕುರಿತು ಜಿ.ಎಚ್. ನಾಯಕರು ಬರೆದ ಲೇಖನಕ್ಕೆ ಪ್ರತಿಕ್ರಿಯೆ

(ಇದು ಕಳೆದ ವರ್ಷದ ಶಿಕ್ಷಕರ ದಿನಾಚರಣೆ ಸಂದರ್ಭ ನಾಯಕರ ಲೇಖನಕ್ಕೆ ಬರೆದಿದ್ದ ಅಪ್ರಕಟಿತ ಪ್ರತಿಕ್ರಿಯೆ)

ಅನುಪಮಾ ಪ್ರಸಾದ್ ಕಾಸರಗೊಡು

ಪ್ರೊ.ಜಿ.ಎಚ್. ನಾಯಕರು ತಮ್ಮ ಲೇಖನದಲ್ಲಿ (ಶಿಕ್ಷಕರ ದಿನಕ್ಕೆ ಅರ್ಥ ಇದೆಯೆ? ನಾವು ಕಾಣದ ರಾಧಾಕೃಷ್ಣನ್ ಮುಖ) ಡಾ.ಸರ್ವೇಪಲ್ಲಿ ಗೋಪಾಲ್ ಬರೆದಿರುವ ಪುಸ್ತಕದಿಂದ ಕೆಲವು ಸಾಲುಗಳನ್ನು ಉದ್ಧರಿಸುವುದರ ಮೂಲಕ ಸ್ಥಾಪಿತ ವಿಚಾರದಾಚಿಗಿನ ಸತ್ಯವನ್ನು ಬಿಚ್ಚಿಟ್ಟು ಮೂಲಕೃತಿ ಓದಲಾಗದವರ ಪಾಲಿಗೆ ಮುಸುಕಿನೊಳಗೇ ಉಳಿದುಬಿಡಬಹುದಾಗಿದ್ದ ರಾಧಾಕೃಷ್ಣನ್ ಅವರ ಇನ್ನೊಂದು ಮುಖವನ್ನು ತೋರಿಸಿ ಸತ್ಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದು ದಿನವನ್ನು ರಾಷ್ಟ್ರೀಯವಾಗಿ ಅದೂ ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆಂದರೆ ಆ ವ್ಯಕ್ತಿ ಅಂತಹ ಮೇರು ವ್ಯಕ್ತಿತ್ವವನ್ನು ಹೊಂದಿರಬೇಕು. ಆದರೆ, ಗೋಪಾಲ್ ಅವರ ಕೃತಿಯಲ್ಲಿರುವ ಎರಡು ಮುಖ್ಯ ವಿಷಯಗಳನ್ನು ಓದಿದಾಗ ರಾಧಾಕೃಷ್ಣನ್ನರಿಗೆ ಯಾವ ಕಾರಣಕ್ಕೂ ಅಂತಹ ಉನ್ನತ ವ್ಯಕ್ತಿತ್ವನ್ನು ಆರೋಪಿಸಲು ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಗೋಪಾಲ್ ಪುಸ್ತಕದಲ್ಲಿರುವ ಸಾಲುಗಳನ್ನು ಉದ್ಧರಿಸುತ್ತ ಪ್ರೊ. ನಾಯಕರು ವ್ಯಕ್ತಪಡಿಸಿದ ವಿಚಾರಗಳು, ಎತ್ತಿದ ಪ್ರಶ್ನೆಗಳು ಬಹಳ ಮಹತ್ವಪೂರ್ಣವಾದವು.

ಪ್ರೊ. ನಾಯಕರು ಗೋಪಾಲ್ ಬರಹಗಳನ್ನು ಉದ್ದರಿಸುವಾಗ ಕೇವಲ ಋಣಾತ್ಮಕ ಅಂಶಗಳನ್ನೇ ಎತ್ತಿಕೊಂಡಿರುವುದರಿಂದ ಮೂಲ ಕೃತಿಯ ಪರಿಚಯವೇ ಇಲ್ಲದ ಓದುಗರಿಗೆ ಗೋಪಾಲ್ ಅವರು ತಮ್ಮ ಪುಸ್ತಕದಲ್ಲಿ ತಂದೆಯ ಬಗ್ಗೆ ಋಣಾತ್ಮಕ ಅಂಶಗಳನ್ನೇ ಬರೆದಿದ್ದಾರೇನೋ ಅನಿಸಬಹುದಾದರೂ, ಪುಸ್ತಕ ಪರಿಚಯ ಮಾಡುವುದು ಲೇಖನದ ಉದ್ದೇಶ ಅಲ್ಲವಾದ್ದರಿಂದ ಅದು ಲೇಖನದ ಕೊರತೆ ಅನಿಸುವುದಿಲ್ಲ. ಅದೂ ಅಲ್ಲದೆ ರಾಧಾಕೃಷ್ಣನ್ನರ ವೃತ್ತಿ ಬದುಕಿನ ಸಾಧನೆ, ಶಿಕ್ಷಕರಾಗಿ ಅವರು ಗಳಿಸಿದ ಖ್ಯಾತಿ ಎಲ್ಲರಿಗೂ ಗೊತ್ತಿರುವಂತದ್ದೇ.

ಮುಖ್ಯವಾಗಿ ರಾಧಾಕೃಷ್ಣನ್ನರ ಜನ್ಮದಿನವೂ ಅಲ್ಲದ ಅಥವಾ ಆದರ್ಶದ ತುತ್ತ ತುದಿ ಎನ್ನಬಹುದಾದ (ಉನ್ನತ ವ್ಯಕ್ತಿತ್ವನ್ನು ಹೊಂದಿರುವ ಶಿಕ್ಷಕರು ಈಗಲೂ ನಮ್ಮಲ್ಲಿರುವಾಗ) ವ್ಯಕ್ತಿತ್ವವನ್ನೂ ಹೊಂದಿರದ ರಾಧಾಕೃಷ್ಣನ್ನರ ಹೆಸರಿನಲ್ಲಿ ಆಚರಿಸಲ್ಪಡುತ್ತಿರುವ ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರೊ. ನಾಯಕರು ಎತ್ತಿದ ಪ್ರಶ್ನೆ ತಾತ್ವಿಕವಾಗಿಯೂ ತಾಂತ್ರಿಕವಾಗಿಯೂ ಅತ್ಯಂತ ಸಮಂಜಸವಾಗಿದೆ. ಅದೇ ರೀತಿ ರಾಧಾಕೃಷ್ಣನ್ನರು ತಮ್ಮ ಹೆಣ್ಣು ಮಕ್ಕಳ ವಿಚಾರದಲ್ಲಿ ನಡೆದುಕೊಂಡ ರೀತಿ ಹಾಗೂ ಸ್ತ್ರೀಯರ ಬಗ್ಗೆ ಅವರಿಗಿದ್ದ ಹೇಯ ಭಾವ ಒಬ್ಬ ಸಾಮಾನ್ಯ ಶಿಕ್ಷಕನಲ್ಲಿದ್ದರೂ ಸಹಿಸುವಂತದ್ದಲ್ಲ. ರಾಷ್ಟ್ರವ್ಯಾಪಿಯಾಗಿ ಚರ್ಚಿಸಬೇಕಾದ ವಿಚಾರಗಳನ್ನು ಪ್ರೊ. ನಾಯಕರು ಪ್ರಸ್ತಾಪಿಸಿದ್ದಾರೆ. ಯಶಸ್ವೀ ಬೋಧಕನಾಗಿ ಹಾಗು ತನ್ನ ಪ್ರತಿಭೆ, ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವೃತ್ತಿಯಲ್ಲಿ ಹೇಗೆ ಉನ್ನತಿಯನ್ನು ಪಡೆಯಬೇಕೆಂಬುದಕ್ಕೆ ರಾಧಾಕೃಷ್ಣನ್ ಆದರ್ಶವಾಗಬಹುದೇ ಹೊರತು ನಿಜದ ಶಿಕ್ಷಕತನಕ್ಕಲ್ಲ.

*********