ಕನ್ನಡ ಅಂಕಿಗಳನ್ನೇ ಬಳಸಿ ೦ ೧ ೨ ೩ ೪ ೫ ೬ ೭ ೮ ೯

ಸಾಮಾನ್ಯ ಪೂರ್ವ ಶಕ ೩ನೆಯ ಶತಮಾನದ ಅಶೋಕನ ಶಾಸನಗಳು ಕರ್ನಾಟಕದ ಹಲವೆಡೆ ದೊರೆತಿವೆ. ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯಲ್ಲಿರುವ ಈ ಶಾಸನಗಳಲ್ಲಿ ಮೊದಲ ಬಾರಿಗೆ ಅಂಕಿಗಳು ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಸಾ.ಶ. ೬ನೇ ಶತಮಾನದ ಕದಂಬ ರವಿವರ್ಮನ ಸಂಸ್ಕೃತ ಭಾಷೆಯ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.
ಬ್ರಾಹ್ಮೀ ಲಿಪಿಯ ದಕ್ಷಿಣ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಸಾ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಮೈಸೂರು ಒಡೆಯರು ತಮ್ಮ ನಾಣ್ಯಗಳಲ್ಲಿ; ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ (೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದರು. ಕನ್ನಡ ಬೆರಳಚ್ಚು ಯಂತ್ರದಲ್ಲಿ ಕನ್ನಡ ಅಂಕಿಗಳು ಕಣ್ಮರೆಯಾಗಿದ್ದವು. ಗಣಕ ತಂತ್ರಜ್ಞಾನ ಕನ್ನಡ ಅಂಕಿಗಳನ್ನು ಮತ್ತೆ ಒದಗಿಸಿದೆ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆಂದೋಲನ, ಮೈಸೂರು ಮಿತ್ರ ದಿನಪತ್ರಿಕೆಗಳು, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಹೊಸತು, ಹುಬ್ಬಳ್ಳಿಯ ಕಸ್ತೂರಿ, ಬೆಂಗಳೂರಿನ ಕರ್ಮವೀರ ಹಾಗೂ ರಾಜ್ಯದ ವಿವಿಧ ಜಿಲ್ಲಾ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ. ಆಂದೋಲನ ಕೊಡಗಿನಲ್ಲಿ ಕನ್ನಡ ಅಂಕಿಗಳನ್ನು ಬಳಸುವ ದಿನಪತ್ರಿಕೆ ಎಂದು ಕೊಡವರ ಅಭಿಮಾನಕ್ಕೆ ಪಾತ್ರವಾಗಿದೆ. ಆಂದೋಲನ, ನವಕರ್ನಾಟಕ ಮೈಸೂರಿನ ಹರ್ಷ ಪ್ರಿಂಟರ್ಸ್ ಸಂಸ್ಥೆಗಳು ಕನ್ನಡ ಅಂಕಿಗಳ ದಿನಸೂಚಿಗಳನ್ನು ಪ್ರಕಟಿಸುತ್ತಿರುವುದು ಮೆಚ್ಚುವಂಥದು.
ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ. ಕನ್ನಡ ಅಂಕಿಗಳನ್ನು ಬಳಸಬೇಕೆಂಬ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳನ್ನು ಗೌರವಿಸಿ ಕನ್ನಡ ಅಂಕಿಗಳನ್ನು ಬಳಸಲು ಆರಂಭಿಸಿದ್ದ ಪತ್ರ್ರಿಕೆಗಳು ಅವನ್ನು ಬಿಟ್ಟಿರುವುದು ವಿಷಾದದ ಸಂಗತಿ. ಪ್ರಜಾವಾಣಿ ತನ್ನ ಮಾಸಿಕ ಸಾಹಿತ್ಯ ಪುರವಣಿಯಲ್ಲಿ ದಿನಾಂಕ, ಸಂಚಿಕೆಯ ಸಂಖ್ಯೆಗಳನ್ನು ಕನ್ನಡ ಅಂಕಿಯಲ್ಲಿ ನಮೂದಿಸುತಿತ್ತು. ಈ ತಿಂಗಳ ಸಾಹಿತ್ಯ ಪುರವಣಿಯೇ ಕಣ್ಮರೆಯಾಗಿದೆ! ಬಹುಶಃ ಸಂಪೂರ್ಣ ಕನ್ನಡ ಅಂಕಿಗಳನ್ನೇ ಬಳಸಿ ಸಾಹಿತ್ಯ ಸಮ್ಮೇಳನದ ವಿಶೇಷ ಪುರವಣಿ ಸಿದ್ಧಪಡಿಸುತ್ತಿರಬಹುದು. ಪತ್ರಿಕೆಯ ಎಲ್ಲೆಡೆ ಕನ್ನಡ ಅಂಕಿಗಳನ್ನೇ ಬಳಸಬೇಕು.
ವೈಜ್ಞಾನಿಕ ಮನೋಭಾವ, ವೈಚಾರಿಕತೆಗಳನ್ನು ಬೆಳಸಬೇಕಾದ ಸಮೂಹ ಮಾಧ್ಯಮಗಳು ಮತೀಯ ಮೂಲಭೂತವಾದ, ಇಂಗ್ಲಿಷ್ ಗುಲಾಮಗಿರಿಗಳ ಪ್ರತಿಪಾದನೆಯನ್ನು ಸ್ಪರ್ಧಾತ್ಮಕವೆಂಬಂತೆ ಹೆಚ್ಚಿಸುತ್ತಿರುವುದು ಕಳವಳದ ಸಂಗತಿ. ಕನ್ನಡ ಸಮೂಹ ಮಾಧ್ಯಮಗಳಲ್ಲಿ ಇಂಗ್ಲಿಷ್ ಪದಗಳ ಬಳಕೆ ಅನಗತ್ಯವಾಗಿ ಹೆಚ್ಚಿದೆ. ವಿಜಯ ಕರ್ನಾಟಕ ಪತ್ರಿಕೆ ತನ್ನ ಭಾನುವಾರದ ಸಂಚಿಕೆಯ ಹೆಸರಿನ ಜೊತೆ ’ಆನ್ ಸಂಡೇಸ್’ ಎಂದು ಇಂಗ್ಲಿಷ್ ಲಿಪಿಯಲ್ಲಿ ಮುದ್ರಿಸುತ್ತಿದೆ. ಪತ್ರಿಕೆಯ ವಿವಿಧ ವಿಭಾಗಗಳ, ಪುರವಣಿಗಳ ಹೆಸರುಗಳನ್ನು ಇಂಗ್ಲಿಷ್ ಭಾಷೆ ಮತ್ತು ಲಿಪಿಗಳಲ್ಲಿ ಪ್ರಕಟಿಸುತ್ತಿದೆ. ಕನ್ನಡ ಓದುಗರಿಗೆ ಅದರ ಅಗತ್ಯವಿಲ್ಲ. ಕನ್ನಡ ಬಾರದವರಿಗೆ ಅಷ್ಟನ್ನು ತಿಳಿದೂ ಪ್ರಯೋಜನವಿಲ್ಲ. ವಿಜಯ ಕರ್ನಾಟಕದ ಪುರವಣಿ ‘ಲವಲ’ದ ಜೊತೆ ಇಂಗ್ಲಿಷ್ ಅಕ್ಷರಗಳಲ್ಲಿರುವ ‘ವಿಕೆ’, ‘ವಿಕೆ ಎಜುಕೇಷನ್’, ‘ವಿಕೆ ಜಾಬ್ಸ್’, ‘ಪ್ರಾಪರ್ಟಿ’, ವಿಜಯ ‘ನೆಕ್ಸ್ಟ್’; ‘ಮೆಟ್ರೊ’, ‘ಬೈಟು ಕಾಫಿ’, ‘ಸುವರ್ಣ ಟೈಮ್ಸ್ ಆಫ್ ಕರ್ನಾಟಕ’ ಇವು ಕನ್ನಡ ಪತ್ರಿಕೆಗಳ, ಪುರವಣಿಗಳ ‘ಬೈ-ಟು-ಕನ್ನಡ’ ಹೆಸರುಗಳು! ಕನ್ನಡಿಗ ಮಾಲೀಕರೇ ಸಂಪಾದಕರಾಗಿರುವ ಪತ್ರಿಕೆಗಳೂ ಇಂಗ್ಲಿಷ್ ಭಾಷೆ ಮತ್ತು ಪದಗಳನ್ನು ಅನಗತ್ಯವಾಗಿ ಬಳಸುತ್ತಿವೆ. ಕನ್ನಡ ಪತ್ರಿಕೆ ಓದುಗರಿಗೆ ಕನ್ನಡ ಗೊತ್ತಿದ್ದರೆ ಸಾಲದು, ಇಂಗ್ಲಿಷ್ ಭಾಷೆಯ ಅರಿವೂ ಅನಿವಾರ್ಯ ಎನ್ನುವ ಪರಿಸ್ಥಿತಿಯನ್ನು ನಿರ್ಮಿಸುತ್ತಿರುವುದು ಸರಿಯಲ್ಲ. ಇಂಗ್ಲಿಷ್ ಸಮೂಹ ಮಾಧ್ಯಮಗಳು ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯನ್ನು ಬಳಸುವಂತೆ ಕನ್ನಡ ಸಮೂಹಮಾಧ್ಯಮಗಳೂ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಬಳಸಲೇಬೇಕು. ಇಂಗಿಷ್ ಮಾತ್ರ ಬಲ್ಲವರು ಗೌರವದಿಂದ ಇಂಗ್ಲಿಷ್ ಪತ್ರಿಕೆ ಓದಬಹುದಾದಂತೆ ಕನ್ನಡ ಮಾತ್ರ ಬಲ್ಲವರು ಕನ್ನಡ ಪತ್ರಿಕೆ ಓದಲಾಗದಂಥ ಅವಮಾನದ ವಾತಾವರಣವನ್ನು ಕನ್ನಡ ಪತ್ರಿಕೆಗಳು ಕನ್ನಡಿಗರಿಗೆ ನಿರ್ಮಿಸಿವೆ. ವಿಜಯ ಕರ್ನಾಟಕವಂತೂ ‘ಹೊಂದಾಣಿಕೆ ಮಾಡ್ಕೋಬೇಡಿ ಪ್ರತಿಭಟಿಸಿ’ ಎಂಬ ಕರೆಯನ್ನೂ ನೀಡಿದೆ. ವೈದ್ಯರೇ ನಿಮ್ಮನ್ನು ಗುಣಪಡಿಸಿಕೊಳ್ಳಿ!
ರಾಜಧಾನಿಯ ಕನ್ನಡ ಸಮೂಹ ಮಾಧ್ಯಮಗಳು ಪ್ರತಿರೋಧ ಸಾಮರ್ಥ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿವೆ. ಅವಕ್ಕೆ ತುರ್ತಾಗಿ ಕನ್ನಡತನದ ಆರೋಗ್ಯಕರ ರಕ್ತದಾನವಾಗಬೇಕಿದೆ. ಕನ್ನಡದ ಮಾಧ್ಯಮಗಳು ಕನ್ನಡವು ಅಭಿಜಾತ(ಶಾಸ್ತ್ರೀಯ) ಭಾಷೆಯೆಂಬ ತೋರಿಕೆಯ ಅಭಿಮಾನದ ಬದಲು ಕನ್ನಡ ಭಾಷೆಯ ಸೂಕ್ಷ್ಮ, ವೈಶಿಷ್ಟ್ಯಗಳನ್ನು ಬಳಸುವ ಮೂಲಕ ನಿಜವಾದ ಕನ್ನಡಾಭಿಮಾನವನ್ನು ಪ್ರದರ್ಶಿಸಬೇಕು. ಎಫ್.ಎಂ.(ಫಿನಿಶ್ ದ ಮದರ್ ಟಂಗ್?) ರೇಡಿಯೋ, ಇಂಗ್ಲಿಷ್ ಹೆಸರಿನ ಕನ್ನಡ ದೂರದರ್ಶನ ವಾಹಿನಿಗಳಲ್ಲಿನ ಇಂಗ್ಲಿಷ್ ಕಲಬೆರಕೆ ಜುಗುಪ್ಸೆ ಉಂಟುಮಾಡುತ್ತವೆ. ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು ‘ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ‘ಜಿಲ್ಲಾ ಜರ್ನಿ’ ಇತ್ಯಾದಿ ಇಂಗ್ಲಿಷಿನಲ್ಲಿವೆ. ‘ಟೋಟಲ್ ಕನ್ನಡ’ ಎನ್ನುವುದು ಕನ್ನಡ ಮಳಿಗೆಯೊಂದರ ಹೆಸರು! ಕನ್ನಡವನ್ನೇ ಬಳಸಬೇಕೆಂಬ ವಾದವನ್ನು ಅದರ ತಾರ್ಕಿಕ ಅತಿಗೆ ಎಳೆದು ಸಾವಿರಾರು ವರ್ಷಗಳಿಂದ ಕನ್ನಡದಲ್ಲಿ ಬಳಕೆಯಲ್ಲಿರುವ ಸಂಸ್ಕೃತ ಮೂಲದ ಪದಗಳ ಬದಲು ಮಿಂಚಂಚೆ(electronic mail), ಮಿಂಬಲೆ(weBLOG), ಓಡುತಿಟ್ಟ(ವಿಡಿಯೊ), ಎಣ್ಣುಕ(ಗಣಕ) ನನ್ನಿ (ಧನ್ಯವಾದ?) ಮೊದಲಾದ ಹಳಗನ್ನಡದಂಥ ರೂಪಗಳನ್ನು ಸೃಷ್ಟಿಸುವ ಪ್ರಯತ್ನಗಳೂ ನಡೆಯುತ್ತಿವೆ. ಪಾರಿಭಾಷಿಕ ಪರಿಕಲ್ಪನೆಯ ನಿಖರ ಅನುವಾದಕ್ಕೆ, ಭಾಷೆಯ ಜೀವಂತಿಕೆಗೆ ಎರವಾಗುವ ಇಂಥ ಎಲ್ಲ ಪ್ರಯತ್ನಗಳ ಬಗ್ಗೆ ಗಂಭೀರವಾದ ಮರುಚಿಂತನೆ ಅಗತ್ಯ.
ರಾಜ್ಯ ಸರಕಾರದ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-: ವೈವ ೨: ೭೮: ೨೦೦೧-೦೨ ದಿನಾಂಕ ೩೧-೮-೨೦೦೧). ನೋಂದಣಿ ಸಂಖ್ಯಾ ಫಲಕಗಳ ಬರವಣಿಗೆ ಉಬ್ಬು ಅಕ್ಷರಗಳಲ್ಲಿರಬೇಕೆಂಬ ಸರ್ವೋನ್ನತ ನ್ಯಾಯಾಲಯದ ಸೂಚನೆಯಂತೆ ಕನ್ನಡದಲ್ಲಿ ಉಬ್ಬು ಅಕ್ಷರ-ಅಂಕಿಗಳ ಫಲಕಗಳನ್ನು ಮೈಸೂರಿನ ‘ರಂಜನ್ ರೇಡಿಯಮ್ಸ್’ ಒದಗಿಸುತ್ತಿರುವುದು ಮೆಚ್ಚುವಂಥದು. ರಾಜ್ಯಗಳಲ್ಲಿ ನೋಂದಣಿಯಾಗುವ ವಾಹನಗಳು ಆಯಾ ರಾಜ್ಯಗಳ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸವಂತೆ ಒತ್ತಾಯಿಸಬೇಕು. ಕರ್ನಾಟಕದ ಎಲ್ಲ ನಗರ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳು ಕನ್ನಡ ಅಂಕಿಗಳಲ್ಲಿರಬೇಕು.
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩). ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಇದು ದೇಶಕ್ಕೇ ಮಾದರಿಯಾಗಿದೆ ಎಂದು ಪ್ರಶಂಸಿಸಿತ್ತು.
ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದ್ದು ಇದರಿಂದ ಮಕ್ಕಳು ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.
ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದ್ದು ಈ ತಿಂಗಳಿನಿಂದ ವಿಚಾರಣೆ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಶಿಕ್ಷಣ ಮಾಧ್ಯಮದ ವಿಚಾರಣೆಯಲ್ಲಿ ಕೇಂದ್ರ ಸರಕಾರವನ್ನು ಭಾಗಿಯಾಗಿ ಮಾಡಲಾಗಿದೆ. ಸಂವಿಧಾನ ಪೀಠದ ಅನುಮೋದನೆ ಪಡೆದ ಮೇಲೆ ರಾಜ್ಯದ ಶಿಕ್ಷಣ ಮಾಧ್ಯಮ ನೀತಿಯು ದೇಶಾದ್ಯಂತ ಅನ್ವಯವಾಗುವುದು ಮಹತ್ವದ ಸಂಗತಿ.
ನ್ಯಾಯಾಲಯ ತೀರ್ಪು ನೀಡುವವರೆಗೆ ಕಾಯದೆ, ಯಾರ ಮಾತೃಭಾಷೆಯೂ, ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವ, ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವ ಮತ್ತು ಜಿಲ್ಲೆಯಲ್ಲಿ ಒಂದೊಂದು ಮಾದರಿ ವಸತಿ ಶಾಲೆಗಳನ್ನು ತೆರೆಯುವ ಸರಕಾರದ ತೀರ್ಮಾನಗಳ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿನ ಅವಕಾಶವನ್ನು ಶಾಶ್ವತವಾಗಿ ತಪ್ಪಿಸುವ ವ್ಯವಸ್ಥಿತವಾದ ಸಂಚು ಇರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಅವಕಾಶ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವದು ಈ ಸಂಶಯಕ್ಕೆ ಪುಷ್ಟಿ ನೀಡುವಂತಿದೆ.
ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ‘ಎಲ್ಲ ವರ್ಗ ಹಾಗೂ ಸಮುದಾಯಗಳ ಜನಪರ ಬೇಡಿಕೆ’ ಎಂದು ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸಬಾರದು; ಶಿಕ್ಷಣ ತಜ್ಞರ ಅಭಿಪ್ರಾಯದಂತೆ ನಿರ್ಧರಿಸಬೇಕು. ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಅದನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಮಾತೃಭಾಷೆಯಲ್ಲದ ಇಂಗ್ಲಿಷನ್ನು ಎರಡನೆಯ ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸಬಹುದು. ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಿ ಮೊದಲು ಅವರನ್ನು ಸಿದ್ಧಪಡಿಸಬೇಕು. ಸರಳವಾದ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಮೊದಲು ಕಲಿಸಿದ ಅನಂತರವೇ ಇಂಗ್ಲಿಷಿನಲ್ಲಿ ಓದಿ ಬರೆಯುವುದನ್ನು ಕಲಿಸಬೇಕು.
ಮುಸ್ಲಿಮರಲ್ಲಿ ವಿದ್ಯಾವಂತರ ಪ್ರಮಾಣ ಕಡಿಮೆ ಇರುವುದರಿಂದ ಇತರ ಸಾಮಾಜಿಕ ವರ್ಗಗಳ ಜೊತೆ ಅವರಿಗೆ ಇರುವ ಅಂತರ ತಗ್ಗಲು ಅವರಿಗೆ ಹೆಚ್ಚಿನ ಶಿಕ್ಷಣಾವಕಾಶಗಳನ್ನು ಒದಗಿಸಬೇಕು ಎಂದು ಸಾಚಾರ್ ಸಮಿತಿ ಶಿಫಾರಸು ಮಾಡಿದೆ. ಅದರ ಅನ್ವಯ ಕೇಂದ್ರ ಸರಕಾರವು ದೇಶದ ಐದು ಕಡೆಗಳಲ್ಲಿ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಗಳನ್ನು ತೆರೆಯುವುದಾಗಿ ತಿಳಿಸಿದೆ. ಅವುಗಳಲ್ಲಿ ಒಂದನ್ನು ಶ್ರೀರಂಗಪಟ್ಟಣ/ಕೋಲಾರ(?)ದಲ್ಲಿ ತೆರೆದು ಅದಕ್ಕೆ ಟಿಪ್ಪೂಸುಲ್ತಾನನ ಹೆಸರಿಡುವುದಾಗಿಯೂ ಸಂಬಂಧಪಟ್ಟ ಸಚಿವರು ಹೇಳಿದ್ದಾರೆ. ಧಾರ್ಮಿಕ/ಭಾಷಿಕ ಅಲ್ಪಸಂಖ್ಯಾತರು ತಮ್ಮ ಧರ್ಮ, ಸಂಸ್ಕೃತಿ, ಭಾಷೆ, ಲಿಪಿ, ಅಕ್ಷರ, ಅಂಕಿ ಮೊದಲಾದುವನ್ನು ರಕ್ಷಿಸಿಕೊಳ್ಳಲು ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದನ್ನು ನಿರ್ವಹಿಸುವ ವಿಶೇಷ ಹಕ್ಕನ್ನು ಸಂವಿಧಾನ ನೀಡಿದೆ. ಈ ಹಕ್ಕಿನ ವ್ಯಾಖ್ಯೆಯ ಬಗ್ಗೆ ಬಗೆಹರಿಯದ ಗೊಂದಲ, ವಾದ ವಿವಾದಗಳಿವೆ. ಇಂಥ ಸಂಸ್ಥೆಗಳು ಸ್ಥಾಪಿಸಿ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ. ೫೦ ಅನ್ನು ಅವರ(ಸಮುದಾಯದ?)ಆಯ್ಕೆಗೆ ಬಿಡಲಾಗಿದೆ. ಅಲ್ಲಿ ಸಾಮಾನ್ಯ ಮೀಸಲಾತಿ ನಿಯಮಗಳು ಅನ್ವಯಿಸುವುದಿಲ್ಲ; ಇತರ ಹಿಂದುಳಿದ ವರ್ಗಗಳಿಗೆ ಶೇ. ೨೭ರ ಮೀಸಲಾತಿ ಇರುವುದಿಲ್ಲ. ಮತಧರ್ಮ ನಿರಪೇಕ್ಷತೆಯ ಮುಖ್ಯವಾಹಿನಿಯಲ್ಲಿ ಕರಗಿಹೋಗಬೇಕಾದ ಬಹುಸಂಖ್ಯಾತ ಮತ್ತು ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಪ್ರತ್ಯೇಕತೆಗಳನ್ನು ಸರಕಾರವೇ ಸ್ಥಾಪಿಸಿ ನಡೆಸುವ ಸಂಸ್ಥೆಗಳೇ ಪೋಷಿಸುವುದರ ಪರಿಣಾಮಗಳನ್ನು ಕುರಿತು, ಸಂವಿಧಾನದ ವಿಶೇಷ ಹಕ್ಕಿನ ವ್ಯಾಪ್ತಿ, ಅದರಿಂದ ಕನ್ನಡ ಭಾಷೆ, ಶಿಕ್ಷಣಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಾದ ತುರ್ತು ಇದೆ. ಅದರ ಬದಲು ಚರಿತ್ರೆಯಲ್ಲಿ ಆಗಿಹೋದ ಟಿಪ್ಪುಸುಲ್ತಾನನ ಹೆಸರನ್ನು ಇಡುವ ಬಗ್ಗೆ, ಅವನ ದೇಶಪ್ರೇಮ, ಮತಾಂಧತೆ ಮೊದಲಾದವುಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಲ್ಲಿ ಪ್ರಸಿದ್ಧ ಸಂಶೋಧಕರು, ಲೇಖಕರು, ನ್ಯಾಯವೇತ್ತರೂ ಭಾಗವಹಿಸುತ್ತಿರುವುದು ದುರದೃಷ್ಟಕರ.
ಸ್ವಾತಂತ್ರ್ಯಾನಂತರ ದೇಶ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದೆ. ಕನ್ನಡವು ಕನ್ನಡಿಗರೆಲ್ಲರ ತಾಯಿ, ನಾಡದೇವಿ ಎನ್ನುವುದು ಅಮೂರ್ತ ಕಲ್ಪನೆ. ಅದನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಮೊದಲಾದವುಗಳ ಜೊತೆ ಈಗ ಸಮೀಕರಿಸುವಂತಿಲ್ಲ. ಕನ್ನಡತಾಯಿ, ನಾಡದೇವಿಯ ಹೆಸರಿನಲ್ಲಿ ಒಂದು ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಪೂಜಾ ಕ್ರಮವನ್ನು ನಡೆಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಹೇಳುವಂತೆ ‘ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬರ’ಬೇಕು. ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ಕನ್ನಡವನ್ನು ವೈಚಾರಿಕವಾಗಿ ಬೆಳೆಸುವ ಹೊಣೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.
ಕೊಡಗು ಕರ್ನಾಟಕದ ವಿಶಿಷ್ಟ ಜಿಲ್ಲೆ. ಕೊಡವ ಭಾಷೆ, ಸಂಸ್ಕೃತಿಗಳನ್ನು ಮತಧರ್ಮ ನಿರಪೇಕ್ಷತೆಯ ನೆಲೆಯಲ್ಲಿ ಪ್ರೋತ್ಸಾಹಿಸಿ ಬೆಳೆಸುವ, ಕೊಡಗಿನ ವಿಶಿಷ್ಟ ಸಮಸ್ಯೆಗಳಿಗೆ ವಿಶೇಷ ಗಮನಹರಿಸಬೇಕಾದ ಹೊಣೆಯೂ ರಾಜ್ಯ ಸರಕಾರದ ಮೇಲಿದೆ. ಪ್ರಸಿದ್ಧ ಸಂಶೋಧಕರಾಗಿದ್ದ ಡಾ ಶ್ರೀನಿವಾಸ ಹಾವನೂರ ಅವರು ೧೯೮೦ರ ದಶಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾಗ ಕನ್ನಡ ಎಂ.ಎ. ತರಗತಿಯಲ್ಲಿ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತ ಐಚ್ಛಿಕ ಆಧ್ಯಯನ ವಿಷಯವನ್ನು ಆರಂಭಿಸಿದ್ದರು. ಕೊಡಗಿನ ಸ್ನಾತಕೋತ್ತರ ಕೆಂದ್ರದಲ್ಲಿ ಈ ಅಧ್ಯಯನಕ್ಕೆ ವಿಶೇಷ ಆವಕಾಶಗಳನ್ನು ಒದಗಿಸಬೇಕು. ಕೊಡವ ಭಾಷೆಯನ್ನು ಸಮೃದ್ಧ ಬರವಣಿಗೆಯ ಭಾಷೆಯಾಗಿ ಬಳಸುವ ಬೆಳೆಸುವ ಹೊಣೆ ಸರಕಾರ, ಶಿಕ್ಷಣ ತಜ್ಞರು, ಪರಿಷತ್ತು, ಅಕಾಡೆಮಿಗಳು ಮತ್ತು ಕೊಡವ ಭಾಷಾಭಿಮಾನಿಗಳ ಮೇಲಿದೆ. ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಎಂಬ ಭಾಷಾ ನೀತಿಯಂತೆ ಪ್ರಾಥಮಿಕ ಶಿಕ್ಷಣದಿಂದ ಕೊಡವ ಭಾಷೆಯ ಕಲಿಕೆಯನ್ನು ಆರಂಭಿಸುವುದು ಸ್ವಾಗತಾರ್ಹ.
ಪ್ರಾಥಮಿಕ ಪೂರ್ವದಿಂದ ಪಿಎಚ್ ಡಿಯೋತ್ತರದವರೆಗೆ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು. ಮಾತೃಭಾಷೆಯಲ್ಲಿ ನಡೆಸುವ ಅಧ್ಯಯನ ಸಂಶೋಧನೆಗಳು ಪರಿಣಾಮಕಾರಿಯಾದ ಅಭಿವ್ಯಕ್ತಿ ಪಡೆಯುತ್ತವೆ. ಐದನೆಯ ತರಗತಿಯಿಂದ ಆಡುಭಾಷೆಯಾಗಿ, ಅನಂತರ ಗ್ರಂಥಾಲಯ ಭಾಷೆಯಾಗಿ ಇಂಗ್ಲಿಷನ್ನು ಕಲಿತಿರುವುದರಿಂದ ಉನ್ನತ ಅಧ್ಯಯನಕ್ಕೆ, ನೆರೆ ರಾಜ್ಯಕ್ಕೆ, ವಿದೇಶಗಳಿಗೆ ಹೋಗುವ ಕೆಲವರಿಗೆ ತೊಂದರೆಯಾಗುವುದಿಲ್ಲ. ಬಹುಸಂಖ್ಯೆಯಲ್ಲಿ ಜನರು ತಮ್ಮ ಭಾಷೆಯಲ್ಲಿ ಹೊಸ ಹೊಸ ವಿಷಯಗಳನ್ನು ಕುರಿತು ಸ್ವತಂತ್ರವಾಗಿ ಯೋಚಿಸಿ ಸಂಶೋಧಿಸಲು ಸಾಧ್ಯವಾಗುವುದು ಮುಖ್ಯ.

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ

ಪ್ರೀತಿಯಿಂದ
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ(ವಿ)
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು
೮೮೧ ಬಸವೇಶ್ವರ ರಸ್ತೆ ಮೈಸೂರು ೫೭೦೦೦೪
ದೂರವಾಣಿ ೯೪೪೮೪೮೧೪೦೨

*ಮಡಿಕೇರಿ
೭ ಜನವರಿ ೨೦೧೪
ರಾಷ್ಟ್ರೀಯ ಶಕೆ ೧೯೩೫ ಶಿಶಿರ ಪುಷ್ಯ ೧೬
O ಸಪ್ತಮಿ ಉತ್ತರಾಭಾದ್ರ ಮಂಗಳವಾರ
ವಿ ಅಂಚೆ panditaradhya@gmail.com
ಜಾಲಚರಿ panditaputa.wordpress.com

* ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಿದೆ.

ವಿಶ್ವ ಅಧ್ಯಾಪಕರ ದಿನ ೨೦೧೩ : ಅಧ್ಯಾಪಕರಿಗೆ ಕರೆ !

WTD 2013
‘ಅಧ್ಯಾಪಕರಿಗೆ ಕರೆ’ ಎನ್ನುವುದು ವಿಶ್ವರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು(ಯುನೆಸ್ಕೊ) ತನ್ನ ಪಾಲುದಾರರಾದ ವಿಶ್ವ ಕಾರ್ಮಿಕರ ಸಂಸ್ಥೆ(ಐಎಲ್ಒ), ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‍ಡಿಪಿ), ವಿಶ್ವರಾಷ್ಟ್ರಗಳ ಮಕ್ಕಳ ಅಂತಾರಾಷ್ಟ್ರೀಯ ತುರ್ತು ನಿಧಿ (ಯುನಿಸೆಫ಼್) ಮತ್ತು ಅಂತಾರಾಷ್ಟ್ರೀಯ ಶಿಕ್ಷಣ(ಐಎಲ್) ಇವುಗಳ ಜೊತೆಗೂಡಿ ೨೦೧೩ರ ಅಕ್ಟೋಬರ್ ೫ರಂದು ಆಚರಿಸುವ ವಿಶ್ವ ಅಧ್ಯಾಪಕರ ದಿನದ ಘೋಷಣೆಯಾಗಿದೆ.
ಅಧ್ಯಾಪಕರು ಸಮಾನತೆಯ, ಕೈಗೆ ಎಟುಕುವ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಬಲ್ಲ ಅತ್ಯಂತ ಪ್ರಬಲವಾದ ಶಕ್ತಿಯಾಗಿದ್ದಾರೆ. ಅವರಿಗೆ ಕರೆನೀಡುವುದೆಂದರೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವಂತೆ ಕರೆನೀಡಿದಂತೆ.
ಗುಣಮಟ್ಟದ ಶಿಕ್ಷಣವು ಉತ್ತಮ ಜೀವನಮಟ್ಟದ ಬಗ್ಗೆ ಆಸೆ ಮತ್ತು ಭರವಸೆಗಳನ್ನು ನೀಡುತ್ತದೆ. ಶಾಶ್ವತವಾದ ಶಾಂತಿ ಮತ್ತು ತಾಳಿಕೆಯ ಅಭಿವೃದ್ಧಿಗಳಿಗೆ ಅಗತ್ಯವಾಗಿರುವ ಭದ್ರವಾದ ತಳಪಾಯಕ್ಕಾಗಿ ಮೌಲಿಕವಾದ, ತಕ್ಕ ಬೆಂಬಲವುಳ್ಳ ಮತ್ತು ಅದಕ್ಕೆ ಅಗತ್ಯವಾದ ಉತ್ತಮ ತರಬೇತಿ ಪಡೆದಿರುವ ಅಧ್ಯಾಪಕರಿಂದ ಗುಣಮಟ್ಟದ ಶಿಕ್ಷಣ ಪಡೆಯುವುದಕ್ಕಿಂತ ಮಿಗಿಲಾದುದು ಬೇರೊಂದಿಲ್ಲ.

“ಗುಣಮಟ್ಟದ ಶಿಕ್ಷಣಕ್ಕಾಗಿ ಅಧ್ಯಾಪಕರಿಗೆ ವೃತ್ತಿಪರ ಜ್ಞಾನ ಮತ್ತು ಕೌಶಲಗಳು ಅತ್ಯಂತ ಮುಖ್ಯ. ಅದಕ್ಕಾಗಿ ಶಕ್ತಿಶಾಲಿ ತರಬೇತಿ, ನಿರಂತರ ವೃತ್ತಿಪರ ಅಭಿವೃದ್ಧಿ ಮತ್ತು ಬೆಂಬಲಗಳನ್ನು ಪಡೆದುಕೊಳ್ಳುವಂತೆ ಈ ವಿಶ್ವ ಅಧ್ಯಾಪಕರ ದಿನದಂದು ಅವರಿಗೆ ಕರೆ ನೀಡುತ್ತೇವೆ”
ಇರಿನಾ ಬೊಕೊವಾ
ಯುನೆಸ್ಕೊ ಪ್ರಧಾನ ನಿರ್ದೇಶಕರು

ಅಧ್ಯಾಪಕರಿಗೆ ಕರೆ ನೀಡುವುದು ಏಕೆ?
ಏಕೆಂದರೆ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟವನ್ನು ಸಾಧಿಸಲು ಆಗತ್ಯವಾದ ವೃತ್ತಿಪರತೆ, ಉತ್ತಮ ತರಬೇತಿ ಮತ್ತು ಬೆಂಬಲಗಳಿರುವ ಆಧ್ಯಾಪಕರ ಕೊರತೆ ಆಪಾರ ಪ್ರಮಾಣದಲ್ಲಿದೆ. ಸಂಖ್ಯೆಯಲ್ಲಿ ಮಾತ್ರವಲ್ಲ, ಗುಣಮಟ್ಟದ ಅಧ್ಯಾಪಕರನ್ನು ನೇಮಿಸುವುದು ಸವಾಲಿನ ವಿಷಯವಾಗಿದೆ. ಬಹಳ ಬಾರಿ ಅಧ್ಯಾಪಕರು ಕಡಿಮೆ ಆರ್ಹತೆ ಮತ್ತು ಸಂಬಳಗಳೊಂದಿಗೆ ಕೆಳ ಮಟ್ಟದಲ್ಲಿಯೇ ಉಳಿದುಬಿಡುತ್ತಾರೆ.
೨೦೧ರ ಅಕ್ಟೋಬರ್ ರಂದು ಪ್ಯಾರಿಸ್‍ನ ಯುನೆಸ್ಕೊ ಕೇಂದ್ರ ಕಛೇರಿಯಲ್ಲಿ ನಡೆಯುವ ವಿಶ್ವ ಅಧ್ಯಾಪಕರ ದಿನಾಚರಣೆಯಲ್ಲಿ, ಉತ್ತಮ ಶಿಕ್ಷಣಕ್ಕಿರುವ ಅಧ್ಯಾಪಕರ ಕೊರತೆ, ಆಡೆತಡೆಗಳು ಮತ್ತು ವಿಶ್ವಮನೋಧರ್ಮದ ನಾಗರಿಕರನ್ನು ಬೆಳೆಸುವುದರಲ್ಲಿ ಅಧ್ಯಾಪಕರ ಪಾತ್ರ ಕುರಿತು ವಿಶೇಷವಾಗಿ ಪರಿಗಣಿಸಲಾಗುವುದು.
ವಿಶ್ವಾದ್ಯಂತ ಈ ಘಟನೆಯನ್ನು ನಿಜವಾದ ಅಂತಾರಾಷ್ಟ್ರೀಯ ದಿನವಾಗಿ ಆಚರಿಸುವಂತೆ ಪಾಲುದಾರರನ್ನು ಒತ್ತಾಯಿಸಲಾಗುವುದು.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಧಾಕೃಷ್ಣನ್ ಕುರಿತು ಜಿ.ಎಚ್. ನಾಯಕರು ಬರೆದ ಲೇಖನಕ್ಕೆ ಪ್ರತಿಕ್ರಿಯೆ

(ಇದು ಕಳೆದ ವರ್ಷದ ಶಿಕ್ಷಕರ ದಿನಾಚರಣೆ ಸಂದರ್ಭ ನಾಯಕರ ಲೇಖನಕ್ಕೆ ಬರೆದಿದ್ದ ಅಪ್ರಕಟಿತ ಪ್ರತಿಕ್ರಿಯೆ)

ಅನುಪಮಾ ಪ್ರಸಾದ್ ಕಾಸರಗೊಡು

ಪ್ರೊ.ಜಿ.ಎಚ್. ನಾಯಕರು ತಮ್ಮ ಲೇಖನದಲ್ಲಿ (ಶಿಕ್ಷಕರ ದಿನಕ್ಕೆ ಅರ್ಥ ಇದೆಯೆ? ನಾವು ಕಾಣದ ರಾಧಾಕೃಷ್ಣನ್ ಮುಖ) ಡಾ.ಸರ್ವೇಪಲ್ಲಿ ಗೋಪಾಲ್ ಬರೆದಿರುವ ಪುಸ್ತಕದಿಂದ ಕೆಲವು ಸಾಲುಗಳನ್ನು ಉದ್ಧರಿಸುವುದರ ಮೂಲಕ ಸ್ಥಾಪಿತ ವಿಚಾರದಾಚಿಗಿನ ಸತ್ಯವನ್ನು ಬಿಚ್ಚಿಟ್ಟು ಮೂಲಕೃತಿ ಓದಲಾಗದವರ ಪಾಲಿಗೆ ಮುಸುಕಿನೊಳಗೇ ಉಳಿದುಬಿಡಬಹುದಾಗಿದ್ದ ರಾಧಾಕೃಷ್ಣನ್ ಅವರ ಇನ್ನೊಂದು ಮುಖವನ್ನು ತೋರಿಸಿ ಸತ್ಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದು ದಿನವನ್ನು ರಾಷ್ಟ್ರೀಯವಾಗಿ ಅದೂ ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆಂದರೆ ಆ ವ್ಯಕ್ತಿ ಅಂತಹ ಮೇರು ವ್ಯಕ್ತಿತ್ವವನ್ನು ಹೊಂದಿರಬೇಕು. ಆದರೆ, ಗೋಪಾಲ್ ಅವರ ಕೃತಿಯಲ್ಲಿರುವ ಎರಡು ಮುಖ್ಯ ವಿಷಯಗಳನ್ನು ಓದಿದಾಗ ರಾಧಾಕೃಷ್ಣನ್ನರಿಗೆ ಯಾವ ಕಾರಣಕ್ಕೂ ಅಂತಹ ಉನ್ನತ ವ್ಯಕ್ತಿತ್ವನ್ನು ಆರೋಪಿಸಲು ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಗೋಪಾಲ್ ಪುಸ್ತಕದಲ್ಲಿರುವ ಸಾಲುಗಳನ್ನು ಉದ್ಧರಿಸುತ್ತ ಪ್ರೊ. ನಾಯಕರು ವ್ಯಕ್ತಪಡಿಸಿದ ವಿಚಾರಗಳು, ಎತ್ತಿದ ಪ್ರಶ್ನೆಗಳು ಬಹಳ ಮಹತ್ವಪೂರ್ಣವಾದವು.

ಪ್ರೊ. ನಾಯಕರು ಗೋಪಾಲ್ ಬರಹಗಳನ್ನು ಉದ್ದರಿಸುವಾಗ ಕೇವಲ ಋಣಾತ್ಮಕ ಅಂಶಗಳನ್ನೇ ಎತ್ತಿಕೊಂಡಿರುವುದರಿಂದ ಮೂಲ ಕೃತಿಯ ಪರಿಚಯವೇ ಇಲ್ಲದ ಓದುಗರಿಗೆ ಗೋಪಾಲ್ ಅವರು ತಮ್ಮ ಪುಸ್ತಕದಲ್ಲಿ ತಂದೆಯ ಬಗ್ಗೆ ಋಣಾತ್ಮಕ ಅಂಶಗಳನ್ನೇ ಬರೆದಿದ್ದಾರೇನೋ ಅನಿಸಬಹುದಾದರೂ, ಪುಸ್ತಕ ಪರಿಚಯ ಮಾಡುವುದು ಲೇಖನದ ಉದ್ದೇಶ ಅಲ್ಲವಾದ್ದರಿಂದ ಅದು ಲೇಖನದ ಕೊರತೆ ಅನಿಸುವುದಿಲ್ಲ. ಅದೂ ಅಲ್ಲದೆ ರಾಧಾಕೃಷ್ಣನ್ನರ ವೃತ್ತಿ ಬದುಕಿನ ಸಾಧನೆ, ಶಿಕ್ಷಕರಾಗಿ ಅವರು ಗಳಿಸಿದ ಖ್ಯಾತಿ ಎಲ್ಲರಿಗೂ ಗೊತ್ತಿರುವಂತದ್ದೇ.

ಮುಖ್ಯವಾಗಿ ರಾಧಾಕೃಷ್ಣನ್ನರ ಜನ್ಮದಿನವೂ ಅಲ್ಲದ ಅಥವಾ ಆದರ್ಶದ ತುತ್ತ ತುದಿ ಎನ್ನಬಹುದಾದ (ಉನ್ನತ ವ್ಯಕ್ತಿತ್ವನ್ನು ಹೊಂದಿರುವ ಶಿಕ್ಷಕರು ಈಗಲೂ ನಮ್ಮಲ್ಲಿರುವಾಗ) ವ್ಯಕ್ತಿತ್ವವನ್ನೂ ಹೊಂದಿರದ ರಾಧಾಕೃಷ್ಣನ್ನರ ಹೆಸರಿನಲ್ಲಿ ಆಚರಿಸಲ್ಪಡುತ್ತಿರುವ ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರೊ. ನಾಯಕರು ಎತ್ತಿದ ಪ್ರಶ್ನೆ ತಾತ್ವಿಕವಾಗಿಯೂ ತಾಂತ್ರಿಕವಾಗಿಯೂ ಅತ್ಯಂತ ಸಮಂಜಸವಾಗಿದೆ. ಅದೇ ರೀತಿ ರಾಧಾಕೃಷ್ಣನ್ನರು ತಮ್ಮ ಹೆಣ್ಣು ಮಕ್ಕಳ ವಿಚಾರದಲ್ಲಿ ನಡೆದುಕೊಂಡ ರೀತಿ ಹಾಗೂ ಸ್ತ್ರೀಯರ ಬಗ್ಗೆ ಅವರಿಗಿದ್ದ ಹೇಯ ಭಾವ ಒಬ್ಬ ಸಾಮಾನ್ಯ ಶಿಕ್ಷಕನಲ್ಲಿದ್ದರೂ ಸಹಿಸುವಂತದ್ದಲ್ಲ. ರಾಷ್ಟ್ರವ್ಯಾಪಿಯಾಗಿ ಚರ್ಚಿಸಬೇಕಾದ ವಿಚಾರಗಳನ್ನು ಪ್ರೊ. ನಾಯಕರು ಪ್ರಸ್ತಾಪಿಸಿದ್ದಾರೆ. ಯಶಸ್ವೀ ಬೋಧಕನಾಗಿ ಹಾಗು ತನ್ನ ಪ್ರತಿಭೆ, ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವೃತ್ತಿಯಲ್ಲಿ ಹೇಗೆ ಉನ್ನತಿಯನ್ನು ಪಡೆಯಬೇಕೆಂಬುದಕ್ಕೆ ರಾಧಾಕೃಷ್ಣನ್ ಆದರ್ಶವಾಗಬಹುದೇ ಹೊರತು ನಿಜದ ಶಿಕ್ಷಕತನಕ್ಕಲ್ಲ.

*********

ಕನ್ನಡ ಭಾಷೆಗೆ ಎಳ್ಳುನೀರು?

ನಾನು ೨೦೧೨ನೇ ಜುಲೈ ೩೧ರಂದು ನಿವೃತ್ತನಾದ ಮೇಲೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕಡೆ ಹೋಗುವುದು ಅಪರೂಪ. ಕಳೆದ ವಾರ ಹೋಗಿದ್ದಾಗ ನನಗೆ ಒಂದು ಮದುವೆಯ ಅಮಂತ್ರಣ ಕಾದಿತ್ತು. ಸರಳವಲ್ಲದ ಮತ್ತು ಸಂಪ್ರದಾಯ ರಹಿತವಲ್ಲದ ಮದುವೆಗಳಿಗೆ ನಾನು ಹೋಗುವುದಿಲ್ಲವೆಂಬುದು ನನ್ನ ವಿದ್ಯಾರ್ಥಿಗಳಿಗೂ ಗೊತ್ತಿದೆ. ಆದರೂ ಅಭ್ಯಾಸದಂತೆ ನನಗೂ ಒಂದು ಆಮಂತ್ರಣ ಪತ್ರವನ್ನು ಕೊಡುವುದುಂಟು. ಆಮಂತ್ರಣ ನೀಡಲು ಬಂದಾಗಲೇ ಅವರಿಗೆ ನನ್ನ ಸಂತೋಷವನ್ನೂ ಹಾರೈಕೆಗಳನ್ನು ತಿಳಿಸುತ್ತಿದ್ದೆ.

ಈಗ ನನಗೆ ಬಂದಿರುವ ಆಮಂತ್ರಣವೂ ನನ್ನ ವಿದ್ಯಾರ್ಥಿನಿಯಾಗಿದ್ದ ರೇಣುಕಾ ಕೋಡಗುಂಟಿ ಅವರ ಮದುವೆಯದು. ಅವರು ಮದುವೆಯಾಗುತ್ತಿರುವುದು ಸಂತೋಷದ ವಿಷಯ. ಆಮಂತ್ರಣ ಪತ್ರವನ್ನು ನನಗೆ ಪ್ರತ್ಯಕ್ಷವಾಗಿ ಕೊಡಲು ಸಾಧ್ಯವಾಗಿದ್ದರೆ ಅವರಿಗೆ ನನ್ನ ಶುಭಾಶಯಗಳನ್ನು ಹೇಳಬಹುದಿತ್ತು. ಹಾಗೆ ಸಾಧ್ಯವಾಗದ್ದರಿಂದ ಈ ಮೂಲಕ ಅವರಿಗೆ ಎಲ್ಲ ಒಳಿತನ್ನೂ ಹಾರೈಸುತ್ತೇನೆ.

ಆಮಂತ್ರಣ ಪತ್ರದ ಸ್ವರೂಪ, ಒಕ್ಕಣೆ ವಿಲಕ್ಷಣವಾಗಿ ಕಂಡದ್ದರಿಂದ ಅದನ್ನು ಇಲ್ಲಿ ಕೊಟ್ಟಿದ್ದೇನೆ:

ಹೊರ ಕವಚದ ಮೇಲಿನ ಬರಹ:

ಕೋಡಗುಂಟಿ ಕುಟುಂಬದವರ ಮದುವೆಯ ಆಮಂತ್ರಣ

ತಾರೀಕು : ೨೦೦೫೨೦೧೩ ಸೋಮವಾರ ಮುಂಜಾನೆ ೧೦.೦೦ರಿಂದ ೧೧.೩೦ರವರೆಗೆ

ಸ್ತಳ: ನಿಜಲಿಂಗಪ್ಪ ಸಬಾಬವನ, ವೀರಶಯಿವ ಕಲ್ಯಾಣ ಮಂಟಪದ ಪಕ್ಕ, ಶಿವಮೊಗ್ಗ

 ಪೊಸತಿದು ಪಾವನಮಿದು ರಂ

ಜಿಸುವ ಮಹಾನರ್ ಗ್ಯಮ್  ಇಂತಿದೆಂಬೀ ಜಸದಿಂ

ರಸಕಾವ್ಯಮೀ ಮದುವೆ ರಾ

ಜಸಬೆ ಬ್ರಹ್ಮಸಬೆ ದೇವಸಬೆಗೆಸೆದಿರ್ಕುಂ

 ಗೆ

 ಕೋಡಗುಂಟಿ ವಂಶದ್ವಯರ್

 ಬಸವರಾಜ ಕೋಡಗುಂಟಿ

(ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ)

 ಪರಶುರಾಮ ಕೋಡಗುಂಟಿ

(ಪ್ರಕಾಶಕ, ಬಂಡಾರ ಪ್ರಕಾಶನ ಮಸ್ಕಿ)

 

ಆಮಂತ್ರಣದ ಒಕ್ಕಣೆ:

 ಸ್ವಸ್ತಿಶ್ರೀ ವಿಜಯಾಬ್ಯುದಯ ಶ್ರೀಮನ್ರುಪ ಶಾಲಿವಾಹನ ಶಕ ಸಂವತ್ಸರಂಗಳ್ ಸಾವಿರದೊಂಬತ್ತುನೂರ ಮೂವತ್ತಯ್ದನೆ ಶ್ರೀ ವಿಜಯನಾಮ ಸಂವತ್ಸರದ ವಯಿಸಾಕ ಸುದ್ದ ದಶಮಿಯನ್ದು ತಾರೀಕು ಎರಡು ಸಾವಿರದಹದಿಮೂರನೆ ಮೇ ಮಾಸದ ಇಪ್ಪತ್ತನೆಯ ದಿವಸದೊಳ್ ಸೋಮವಾರದನ್ದು ಮುಂಜಾನೆಯ ಸಮಯ ಹತ್ತರಿಂ ಹನ್ನೊಂದುವರೆವರಂ ಸಲ್ವ ಶುಬ ಕರ್ಕಾಟಕ ಲಗ್ನದೊಳ್ ಶುಬ ಮುಹೂರ್ತದೊಳ್ ಎಮ್ಮ ತಂಗಿಯಪ್ಪ ರೇಣುಕಾ ಕೋಡಗುಂಟಿ ಎನ್ಬ ಕನ್ಯಾರತ್ನಮನ್ ಶ್ರೀಮತಿ ಶ್ರೀಯರು ಪೇರ್ಮಿ ಗವುರಮ್ಮ ಕ್ರಿಶ್ಣಮೂರ್ತಿಯವರ್ಕಳ ಕಿರಿಯ ಮಗನ್ ಪೇರ್ಮಿ ಬಾಲಾಜಿ ಎನ್ಬ ವರಂಗೆ ಕೊಟ್ಟು ವಿವಾಹಮನ್ ನೆರವೇರಿಸಲ್ ಮನೆದೇವರಾ ಹರಕೆಯಲ್ ಗುರುಹಿರಿಯರ ಕಯ್ಯಲ್ ನಿಶ್ಚಯಮನ್ ಮಾಡಿರ್ಪುದು.

 ಶುಬ ಕಲ್ಯಾಣಂ ಶಿವಮೊಗ್ಗೆಯ ಶ್ರೀ ವೀರಶಯಿವ ಕಲ್ಯಾಣ ಮಂಟಪ ಪಕ್ಕದೊಳ್ ನಿಜಲಿಂಗಪ್ಪ ಸಬಾಬವನದೊಳು

 ತಮ್ಮಂಗಳ ಆಶೀರ್ವಾದಂಗಳನ್ ಮದುಮಕ್ಕಳಿಂಗೆ ನೀಡುವುದು ಮನಮುದಮನ್ ತರುವುದು

 ರಾಯಚೂರು ಜಿಲ್ಲೆಯೊಳ್ ಲಿಂಗಸೂಗೂರು ತಾಲೂಕಿನೊಳ್ ನಿಜಗ್ರಾಮ ಮಸ್ಕಿಯ

ಶ್ರೀಯರ್ಕಳ್ ಕೋಡಗುಂಟಿ ವಂಶದ್ವಯರ್ ಬಸವರಾಜ ಪರಶುರಾಮರ್

——

ವಾರದ ನೀರು:

ತಾರೀಕು ೨೨೦೫೨೦೧೩ ಬುದುವಾರ ಶ್ರೀ ಚವುಡೇಶ್ವರಿ ಸಮುದಾಯ ಬವನ ವೀರಾಪೂರ ಓಣಿ ಮಸ್ಕಿ (ಊಟ: .೦೦ಕ್ಕೆ)

ಯೂನಿಕೋಡ್ ನಲ್ಲಿ ಅರ್ಕಾವತ್ತು ಮಾತ್ರ ಬಳಸಲು ಸಾಧ್ಯವಾದ್ದರಿಂದ ಮೂಲದಲ್ಲಿದ್ದಂತೆ ರಕಾರಕ್ಕೆ ಒತ್ತಕ್ಷರವನ್ನು ಬಳಸಲಾಗಿಲ್ಲ.

ಇಡೀ ಆಮಂತ್ರಣ ಪತ್ರದ ಭಾಷೆ ಯಾವ ಕಾಲದ ಕನ್ನಡದಲ್ಲಿದೆ ಎಂಬುದೇ ತಿಳಿಯಲಿಲ್ಲ. ಹಳಗನ್ನಡದ ಸುದ್ದಗೆಯೂ ಅಲ್ಲದ ಇಂದಿನ ಪ್ರಾದೇಶಿಕ, ಸಾಮಾಜಿಕ ಉಪಭಾಷೆ ಅಥವಾ ಶಿಷ್ಟ ಭಾಷೆಯೂ ಅಲ್ಲದ ವಿಲಕ್ಷಣ ವಿಕೃತಿಯಂತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಭಾಷಾವಿಜ್ಞಾನವನ್ನು ಅಧ್ಯಯನ, ಅಧ್ಯಾಪನ ಮಾಡುವವರು ಬಳಸಿರುವ ಭಾಷೆಯನ್ನು ನೋಡಿ ವಿಷಾದವಾಯಿತು. ಭಾಷಾವೈಜ್ಞಾನಿಕ ಕಾರಣವಾಗಲಿ ತರ್ಕವಾಗಲಿ ಇಲ್ಲದೆ, ಬಳಕೆಯಲ್ಲಿರುವ ಮಹಾಪ್ರಾಣ, ಶ ಆರ್ಕಾವತ್ತು ಮೊದಲಾದವನ್ನು ಬಿಟ್ಟು, ಯಾವ ಕಾಲದ, ಯಾವ ಸಮುದಾಯದ ಆಡುನುಡಿಯೂ ಅಲ್ಲದ, ಶಿಷ್ಟ ನುಡಿಯೂ ಅಲ್ಲದ  ಭಾಷೆ ಮತ್ತು ಬರವಣಿಗೆಯಿಂದ ಕನ್ನಡವನ್ನು ವಿಕಾರಗೊಳಿಸುವುದಕ್ಕಿಂತೆ ಹೆಚ್ಚಿನದೇನನ್ನಾದರೂ ಸಾಧಿಸಿದಂತಾಗುತ್ತದೆ  ಎಂದು ಅನಿಸುವುದಿಲ್ಲ.
ಆಮಂತ್ರಣದ ಕೊನೆಯಲ್ಲಿ ವಾರದ ನೀರು ಎಂಬ ಮಾತಿದೆ. ಅದು ಬಹುಶಃ ಆರತಕ್ಷತೆಯಂಥ ಸಂಪ್ರದಾಯವಿರಬಹುದು. ಆದರೆ ಆಮಂತ್ರಣದ ಪತ್ರದ ಭಾಷೆಯನ್ನು ನೋಡಿದಾಗ ಕನ್ನಡ ಭಾಷೆಗೆ ಎಳ್ಳುನೀರು ಬಿಟ್ಟಂತೆ ಅನಿಸಿತು.

ಮತಧರ್ಮ ನಿರಪೇಕ್ಷತೆಯ ಸಾರ್ವತ್ರಿಕ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕರಗಿಹೋಗಬೇಕಾದ ಬಹುಸಂಖ್ಯಾತ ಮತ್ತು ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಪ್ರತ್ಯೇಕತೆಗಳನ್ನು…

ಕನ್ನಡ ಅಂಕಿಗಳನ್ನೇ ಬಳಸಿ
೦ ೧ ೨ ೩ ೪ ೫ ೬ ೭ ೮ ೯

ಕರ್ನಾಟಕದ ಹಲವೆಡೆ ದೊರೆತಿರುವ ಸಾ(ಮಾನ್ಯ).ಪೂ(ರ್ವ).ಶಕ ೩ನೇ ಶತಮಾನದ ಅಶೋಕನ ಶಾಸನಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಪ್ರಾಕೃತ ಭಾಷೆಯ ಅಂಕಿಗಳು ಮೊದಲಬಾರಿಗೆ ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ೨೫೬ ಎನ್ನುವುದನ್ನು ೨೦೦, ೫೦, ೬ ಎಂಬ ಮೂರು ಪ್ರತ್ಯೇಕ ಅಂಕಿಗಳಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗುಡ್ನಾಪುರದಲ್ಲಿ ದೊರೆತಿರುವ ಸಾ.ಶ. ೬ನೇ ಶತಮಾನದ ಕದಂಬ ರವಿವರ್ಮನ ಸಂಸ್ಕೃತ ಶಾಸನದಲ್ಲಿ ಎಲ್ಲ ಒಂಬತ್ತು ಅಂಕಿಗಳಿವೆ.

ಬ್ರಾಹ್ಮೀ ಲಿಪಿಯ ದಕ್ಷಿಣದ ಕವಲಿನಿಂದ ಬೆಳೆದುಬಂದಿರುವ ಕನ್ನಡ ಲಿಪಿಯಲ್ಲಿ ಕನ್ನಡ ಅಂಕಿಗಳೂ ಇವೆ. ಸಾ.ಶ. ೮ನೆಯ ಶತಮಾನದಿಂದ ಶಾಸನಗಳಲ್ಲಿ ಕನ್ನಡ ಅಂಕಿಗಳು ಕಾಣಿಸುತ್ತವೆ. ದಕ್ಷಿಣ ಭಾರತದಲ್ಲಿ ಕನ್ನಡ ಮಾತ್ರ ತನ್ನ ಅಂಕಿಗಳನ್ನು ಉಳಿಸಿಕೊಂಡಿರುವುದು ಕನ್ನಡಿಗರ ಹೆಮ್ಮೆ. ಮೈಸೂರು ಒಡೆಯರು ತಮ್ಮ ನಾಣ್ಯಗಳಲ್ಲಿ; ಬ್ರಿಟಿಷರು, ಹೈದರಾಬಾದಿನ ನಿಜಾಮರು ತಮ್ಮ ನೋಟುಗಳಲ್ಲಿ ಕನ್ನಡ ಅಂಕಿಗಳನ್ನು ಬಳಸಿದ್ದರು. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ(೧೮೪೨)ವನ್ನು ಆರಂಭಿಸಿದ ಜರ್ಮನ್ ಪಾದ್ರಿಗಳು ಕನ್ನಡ ಅಂಕಿಗಳನ್ನೇ ಬಳಸಿದ್ದರು.

ಇಂದು ಕನ್ನಡ ಅಂಕಿಗಳ ಸ್ಥಾನವನ್ನು ಇಂಗ್ಲಿಷ್ ಅಂಕಿಗಳು ಆಕ್ರಮಿಸಿವೆ. ಆಡಳಿತ ಮತ್ತು ಮಾಧ್ಯಮಗಳ ಕೇಂದ್ರವಾಗಿರುವ ರಾಜಧಾನಿ ಬೆಂಗಳೂರಿನಲ್ಲಿ ಇದು ಹೆಚ್ಚಾಗಿದೆ. ಇದು ನಮ್ಮ ಭಾಷಿಕ ಸಂಸ್ಕೃತಿಗೆ ಅಪಾಯಕಾರಿ. ಕನ್ನಡ ಅಂಕಿಗಳನ್ನು ಬಳಸಬೇಕೆಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ನಿರ್ಣಯ ಅಂಗೀಕರಿಸಿ ಒತಾಯಿಸಿದ್ದುದನ್ನು ಗೌರವಿಸಿ ಕನ್ನಡ ಅಂಕಿಗಳನ್ನು ಬಳಸಲು ಆರಂಭಿಸಿದ್ದ ಪತ್ರಿಕೆಗಳು ಮತ್ತೆ ಅವನ್ನು ಬಿಟ್ಟಿರುವುದು ವಿಷಾದದ ಸಂಗತಿ. ಕೆಲವು ಪತ್ರಿಕೆಗಳು ಅಂತರಜಾಲದ ಅಕ್ಷರ ಆವೃತ್ತಿಯಲ್ಲಿ ಮಾತ್ರ ಬಳಸುತ್ತಿದ್ದು ಈಗ ಅಲ್ಲಿಯೂ ಕೈಬಿಟ್ಟಿವೆ. ಸಾಪಾಹಿಕ ಪುರವಣಿ, ಮಾಸಿಕ ಸಾಹಿತ್ಯ ಪುರವಣಿಗಳ ದಿನಾಂಕ, ಸಂಚಿಕೆಯ ಸಂಖ್ಯೆಗಳನ್ನು ಮಾತ್ರ ಕನ್ನಡ ಅಂಕಿಯಲ್ಲಿ ನಮೂದಿಸುತ್ತಿವೆ. ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕಾದ ಮಾಧ್ಯಮಗಳು ಒಂದೇ ಉಸಿರಿನಲ್ಲಿ ಮತೀಯ ಮೂಲಭೂತವಾದದ ಮೌಢ್ಯವನ್ನೂ ಇಂಗ್ಲಿಷ್ ಗುಲಾಮಗಿರಿಯನ್ನೂ ಪ್ರತಿಪಾದನೆ ಮಾಡುವುದು ಸ್ಪರ್ಧಾತ್ಮಕವೆನ್ನುವಂತೆ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ. ಈ ಆತಂಕಕ್ಕೆ ಪ್ರತೀಕಾರ ಎಂಬಂತೆ ಭಾಗಶಃ ಕನ್ನಡ ಅಂಕಿಗಳನ್ನು ಬಳಸುತ್ತಿದ್ದ ಪತ್ರಿಕೆಗಳು ಮತಧರ್ಮ ಮೌಢ್ಯ ಪ್ರಸಾರದ ಬದಲು ಕನ್ನಡ ಅಂಕಿಗಳ ಬಳಕೆಯನ್ನು ನಿಲ್ಲಿಸಿವೆ! ರಾಜ್ಯ ಸರಕಾರದ ಮಾಸಪತ್ರಿಕೆ ಜನಪದ ಕನ್ನಡ ಅಂಕಿಗಳನ್ನು ಬಳಸುವಂತೆ ಮಾಡಿದ ಮನವಿಗೆ ಕಿವುಡುತನ ನಟಿಸುತ್ತಿದೆ.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆಂದೋಲನ, ಮೈಸೂರು ಮಿತ್ರ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಹೊಸತು ಮಾಸಪತ್ರಿಕೆಗಳಂತೆ ರಾಜ್ಯದ ವಿವಿಧ ಜಿಲ್ಲಾ ಪತ್ರಿಕೆಗಳು ಕನ್ನಡ ಅಂಕಿಗಳನ್ನೇ ಬಳಸುತ್ತಿರುವುದು ಅಭಿಮಾನದ ಸಂಗತಿ.

ರಾಜಧಾನಿಯ ಕನ್ನಡ ಸಮೂಹ ಮಾಧ್ಯಮಗಳು ಪ್ರತಿರೋಧ ಸಾಮರ್ಥ್ಯವನ್ನೇ ಕಳೆದುಕೊಂಡ ಏಡ್ಸ್ ರೋಗಿಯಂತಾಗಿವೆ. ಅವಕ್ಕೆ ತುರ್ತಾಗಿ ಕನ್ನಡತನದ ಆರೋಗ್ಯಕರ ರಕ್ತದಾನವಾಗಬೇಕಿದೆ. ಕನ್ನಡವು ಅಭಿಜಾತ(ಶಾಸ್ತ್ರೀಯ) ಭಾಷೆಯೆಂಬ ತೋರಿಕೆಯ ಅಭಿಮಾನವನ್ನು ಪ್ರಕಟಿಸುವ ಕನ್ನಡದ ಮಾಧ್ಯಮಗಳು ಕನ್ನಡ ಭಾಷೆಯ ವೈಶಿಷ್ಟ್ಯ, ಸೂಕ್ಷ್ಮಗಳನ್ನು ಪರಿಚಯಿಸುವ ಗೋಜಿಗೆ ಹೋಗದೆ ಅನಗತ್ಯವಾಗಿ ಇಂಗ್ಲಿಷ್ ಅಕ್ಷರ, ಪದ, ಪದಪುಂಜಗಳನ್ನು ಬಳಸುತ್ತಿವೆ. ಶಾಲಾ ಪತ್ರಿಕೆಯಲ್ಲಿ ಎಳೆಯರು ವಿನೋದಕ್ಕಾಗಿ `ತಾEA ದೇವರು!’ ಎಂದು ಬರೆಯುವಂತೆ ಕನ್ನಡದ ದೊಡ್ಡ ಪತ್ರಿಕೆ ತನ್ನ ಹೆಸರಿನ ಆದ್ಯಕ್ಷರಗಳಾದ ವಿ ಕ ಗಳನ್ನು ಇಂಗ್ಲಿಷಿನ ವಿ ಕೆ ಎಂದು ಬದಲಾಯಿಸಿ ಅದನ್ನು ಕನ್ನಡ ಪದ `ಲವಲವಿಕೆ’ಯಲ್ಲಿರುವ ‘`ವಿಕೆ’ ಜೊತೆ ಕಸಿಮಾಡಿ ಕನ್ನಡ ಪದವನ್ನು `ಲವಲ’ ಎಂದು ಅರ್ಥಹೀನವಾಗಿಸಿ, ವಿಕಲಾಂಗ(`ವಿಕಲಚೇತನ’!) ಗೊಳಿಸಿದೆ. ವಿಜಯNext Next(ನೆಕ್ಸ್ಟ್) ಎಂಬ ಕಲಬೆರಕೆ ಹೆಸರಿನ ಕನ್ನಡ ಪತ್ರಿಕೆಯಲ್ಲಿ ಇಂಗ್ಲಿಷ್ ಪದಪುಂಜ, ವ್ಯಾಕರಣ ರಚನೆಗಳ ಬಳಕೆ ಹೆಚ್ಚಿದೆ. ಕೆಲವು ಕನ್ನಡ ಸಂಪಾದಕರು ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬೆರಸುವ ಗೀಳಿನಿಂದ ನರಳುತ್ತಿರುವಂತಿದೆ.

ಇಂಥ ಕನ್ನಡ ಮುರುಕತನವನ್ನು ರಾಜಧಾನಿಯ ಮಾಧ್ಯಮಗಳು ಎಗ್ಗಿಲ್ಲದೆ ಮಾಡುತ್ತಿವೆ. ರಾಜಧಾನಿಯ ಪತ್ರಿಕೆಗಳು ಹಲವು ಕೇಂದ್ರಗಳಲ್ಲಿ ಮುದ್ರಣವಾಗಿ ರಾಜಧಾನಿಯ ರೋಗವನ್ನೂ ರಾಜ್ಯಾದ್ಯಂತ ಹರಡುತ್ತಿರುವುದು ಆತಂಕದ ಸಂಗತಿ. ಎಫ್.ಎಂ. ರೇಡಿಯೋ, ಇಂಗ್ಲಿಷ್ ಹೆಸರಿನ ಕನ್ನಡ ದೂರದರ್ಶನ ವಾಹಿನಿಗಳಲ್ಲಿ ಇಂಗ್ಲಿಷ್ ಕಲಬೆರಕೆಯ ಅಬದ್ಧ ರೂಪಗಳು ಜುಗುಪ್ಸೆಯನ್ನುಂಟುಮಾಡುತ್ತವೆ. ದೃಶ್ಯ ಮಾಧ್ಯಮದ ವಿವಿಧ ಕನ್ನಡ ವಾಹಿನಿಗಳ ಕಾರ್ಯಕ್ರಮಗಳ ಹೆಸರುಗಳು `’ನ್ಯೂಸ್’, ‘ಟ್ವೆಂಟಿಫೋರ್ ಸೆವೆನ್’, ‘ಬ್ರೇಕಿಂಗ್ ನ್ಯೂಸ್’, ‘ಗ್ಲೋಬ್ ಟ್ರಾಟಿಂಗ್’, ‘ಜಸ್ಟ್ ಬೆಂಗಳೂರು’ ‘ಜಿಲ್ಲಾ ಜರ್ನಿ’ ಇತ್ಯಾದಿ ಇಂಗ್ಲಿಷಿನಲ್ಲಿವೆ. ಎಲ್ಲ ವಾಹಿನಿಗಳಲ್ಲಿ ಕನ್ನಡ ಪದಗಳು ಮತ್ತು ಕನ್ನಡ ಅಂಕಿಗಳನ್ನೇ ಬಳಸಬೇಕು. ಕನ್ನಡ ಪದ, ಅಂಕಿಗಳನ್ನೇ ಬಳಸಬೇಕೆಂಬ ವಾದವನ್ನು ತಾರ್ಕಿಕ ತುದಿಗೆ ಎಳೆದು ಬಳಕೆಯಲ್ಲಿರುವ ಸಂಸ್ಕೃತ ಮೂಲದ ಪದಗಳ ಬದಲು ಹಳಗನ್ನಡ ಪದಗಳನ್ನು ಬಳಸುವ ಪ್ರಯತ್ನಗಳೂ ನಡೆಯುತ್ತಿವೆ. ಭಾಷೆಯ ಜೀವಂತಿಕೆಗೆ ಎರವಾಗುವ ಇಂಥ ಪ್ರಯತ್ನಗಳ ಬಗ್ಗೆ ಮರುಚಿಂತನೆ ಅಗತ್ಯ.

ರಾಜ್ಯ ಸರಕಾರದ ಎಲ್ಲ ವಾಹನಗಳು ಕಡ್ಡಾಯವಾಗಿ ಕನ್ನಡದಲ್ಲಿಯೂ ನೋಂದಣಿ ಫಲಕಗಳನ್ನು ಪ್ರದರ್ಶಿಸಬೇಕೆಂದು ಕರ್ನಾಟಕ ಸರಕಾರ ಆದೇಶ ನೀಡಿರುವುದು ಸ್ತುತ್ಯರ್ಹ(ಸುತ್ತೋಲೆ ಸಂಖ್ಯೆ: ಸಾ ಆ: ನೋಂದಣಿ-೨: ವೈವ : ೭೮:೨೦೦೧-೦೨ ದಿನಾಂಕ ೩೧-೮-೨೦೦೧). ರಾಜ್ಯಗಳಲ್ಲಿ ನೋಂದಣಿಯಾಗುವ ಎಲ್ಲ ವಾಹನಗಳೂ ಆಯಾ ರಾಜ್ಯದ ಆಡಳಿತ ಭಾಷೆಯ ಅಕ್ಷರ ಮತ್ತು ಅಂಕಿಗಳಲ್ಲಿಯೂ ಕಡ್ಡಾಯವಾಗಿ ನೋಂದಣಿ ಫಲಕಗಳನ್ನು ಪ್ರದರ್ಶಿಸುವುದು ದೇಶಾದ್ಯಂತ ಏಕರೂಪವಾಗಿ ಜಾರಿಗೆ ಬರುವಂತೆ ಒತ್ತಾಯಿಸಬೇಕು. ಕರ್ನಾಟಕದ ಎಲ್ಲ ಸಾರಿಗೆ ಬಸ್ಸುಗಳ ಮಾರ್ಗಫಲಕಗಳಲ್ಲಿ ಮಾರ್ಗಸಂಖ್ಯೆ ದೊಡ್ಡ ಗಾತ್ರದಲ್ಲಿ ಕನ್ನಡ ಅಂಕಿಗಳಲ್ಲಿರಬೇಕು. ಬಸ್ ಚೀಟಿಗಳೂ ಕನ್ನಡ ಅಂಕಿಗಳಲ್ಲಿರಬೇಕು.

ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯ ಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿ ಪೂರ್ವ ಪ್ರಾಥಮಿಕವೂ ಸೇರಿದಂತೆ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಎಳೆಯ ಹಂತದಲ್ಲಿಯೇ ’ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ. ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯ ವಿಚಾರಣೆಯನ್ನು ಮುಗಿಸಿ ತೀರ್ಪನ್ನು ಕಾಯ್ದಿರಿಸಿದೆ.

ನ್ಯಾಯಾಲಯದ ತೀರ್ಪು ಬರುವ ಮುನ್ನವೇ, ಯಾರ ಮಾತೃಭಾಷೆಯೂ ಅಲ್ಲದ ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿನ ಅವಕಾಶವನ್ನು ಶಾಶ್ವತವಾಗಿ ತಪ್ಪಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವದು ಈ ಸಂಶಯಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದನ್ನು ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸಬಾರದು; ಶಿಕ್ಷಣ ತಜ್ಞರ ಅಭಿಪ್ರಾಯದಂತೆ ನಿರ್ಧರಿಸಬೇಕು. ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಅದನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ, ಪರಿಣಾಮಕಾರಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಸರಳವಾದ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಮೊದಲು ಕಲಿಸಿ ಅನಂತರ ಇಂಗ್ಲಿಷಿನಲ್ಲಿ ಓದುವುದು ಬರೆಯುವುದನ್ನು ಕಲಿಸಬೇಕು.

ಮುಸ್ಲಿಮರಲ್ಲಿ ವಿದ್ಯಾವಂತರ ಪ್ರಮಾಣ ಕಡಿಮೆ ಇರುವುದರಿಂದ ಇತರ ಸಾಮಾಜಿಕ ವರ್ಗಗಳ ಜೊತೆಗಿನ ಅಂತರವನ್ನು ತಗ್ಗಿಸಲು ಅವರಿಗೆ ಹೆಚ್ಚಿನ ಶಿಕ್ಷಣಾವಕಾಶಗಳನ್ನು ಒದಗಿಸಬೇಕು ಎಂದು ಸಾಚಾರ್ ಸಮಿತಿ ಶಿಫಾರಸು ಮಾಡಿದೆ. ಇದರ ಅನ್ವಯ ಕೇಂದ್ರ ಸರಕಾರವು ದೇಶದ ಐದು ಕಡೆಗಳಲ್ಲಿ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಗಳನ್ನು ತೆರೆಯುವುದಾಗಿ ತಿಳಿಸಿದೆ. ಅವುಗಳಲ್ಲಿ ಒಂದನ್ನು ಶ್ರೀರಂಗಪಟ್ಟಣದಲ್ಲಿ ತೆರೆದು ಅದಕ್ಕೆ ಟಿಪ್ಪೂಸುಲ್ತಾನನ ಹೆಸರಿಡುವುದಾಗಿಯೂ ಸಂಬಂಧಪಟ್ಟ ಸಚಿವರು ಹೇಳಿದ್ದಾರೆ. ಧಾರ್ಮಿಕ/ಭಾಷಿಕ ಅಲ್ಪಸಂಖ್ಯಾತರು ತಮ್ಮ ಧರ್ಮ, ಸಂಸ್ಕೃತಿ, ಭಾಷೆ, ಲಿಪಿ, ಅಕ್ಷರ, ಅಂಕಿ ಮೊದಲಾದುವನ್ನು ರಕ್ಷಿಸಿಕೊಳ್ಳಲು ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದನ್ನು ನಿರ್ವಹಿಸುವ ವಿಶೇಷ ಹಕ್ಕನ್ನು ಸಂವಿಧಾನ ನೀಡಿದೆ. ಈ ಹಕ್ಕಿನ ವ್ಯಾಖ್ಯೆಯ ಬಗ್ಗೆ ಬಗೆಹರಿಯದ ಗೊಂದಲ, ವಾದ ವಿವಾದಗಳಿವೆ. ಇಂಥ ಸಂಸ್ಥೆಗಳು ಸ್ಥಾಪಿಸಿ ನಿರ್ವಹಿಸುವ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ.೫೦ಅನ್ನು ಅವರ (ಸಮುದಾಯದ?)ಆಯ್ಕೆಗೆ ಬಿಡಲಾಗಿದೆ. ಅಲ್ಲಿ ಸಾಮಾನ್ಯ ಮೀಸಲಾತಿ ನಿಯಮಗಳು ಅನ್ವಯಿಸುವುದಿಲ್ಲ; ಇತರ ಹಿಂದುಳಿದ ವರ್ಗಗಳಿಗೆ ಶೇ.೨೭ರ ಮೀಸಲಾತಿ ಇರುವುದಿಲ್ಲ. ಮತಧರ್ಮ ನಿರಪೇಕ್ಷತೆಯ ಸಾರ್ವತ್ರಿಕ ಶಿಕ್ಷಣದ ಮುಖ್ಯವಾಹಿನಿಯಲ್ಲಿ ಕರಗಿಹೋಗಬೇಕಾದ ಬಹುಸಂಖ್ಯಾತ ಮತ್ತು ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಪ್ರತ್ಯೇಕತೆಗಳನ್ನು ಸರಕಾರ ಸ್ಥಾಪಿಸಿ ನಡೆಸುವ ಸಂಸ್ಥೆಗಳೇ ಪೋಷಿಸುವುದರ ಪರಿಣಾಮಗಳನ್ನು ಕುರಿತು, ಸಂವಿಧಾನದ ವಿಶೇಷ ಹಕ್ಕಿನ ವ್ಯಾಪ್ತಿ, ಅದರಿಂದ ಕನ್ನಡ ಭಾಷೆ, ಶಿಕ್ಷಣಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಈಗ ಗಂಭೀರ ಚರ್ಚೆ ನಡೆಯಬೇಕಾದ ತುರ್ತು ಇದೆ. ಅದರ ಬದಲು ಚರಿತ್ರೆಯಲ್ಲಿ ಆಗಿಹೋದ ಟಿಪ್ಪುಸುಲ್ತಾನನ ಹೆಸರನ್ನು ಇಡುವ ಬಗ್ಗೆ, ಅವನ ‘ದೇಶಪ್ರೇಮ’, ‘ಮತಾಂಧತೆ’ ಮೊದಲಾದವುಗಳ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ಇದರಲ್ಲಿ ಪ್ರಸಿದ್ಧ ಸಂಶೋಧಕರು, ಲೇಖಕರು, ನ್ಯಾಯವೇತ್ತರೂ ಭಾಗವಹಿಸುತ್ತಿರುವುದು ದುರದೃಷ್ಟಕರ.

ಸ್ವಾತಂತ್ರ್ಯಾನಂತರ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಸಂವಿಧಾನವನ್ನು ಅಂಗಿಕರಿಸಿದ್ದೇವೆ. ಕನ್ನಡವು ಕನ್ನಡಿಗರೆಲ್ಲರ ತಾಯಿ, ನಾಡದೇವಿ ಎನ್ನುವುದು ಅಮೂರ್ತ ಕಲ್ಪನೆ. ಅದನ್ನು ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಖಾಸಗಿ ನಂಬಿಕೆಯ ಮತಧರ್ಮದ ದೇವತೆಗಳಾದ ರಾಜರಾಜೇಶ್ವರಿ, ಭುವನೇಶ್ವರಿ, ಚಾಮುಂಡೇಶ್ವರಿ ಮೊದಲಾದವುಗಳ ಜೊತೆ ಸಮೀಕರಿಸಕೂಡದು. ಕನ್ನಡ ತಾಯಿ, ನಾಡದೇವಿಯ ಹೆಸರಿನಲ್ಲಿ ಮತಧರ್ಮದ ದೇವತೆಯ ವಿಗ್ರಹ ಸ್ಥಾಪಿಸುವುದು, ಪೂಜಾ ಕ್ರಮವನ್ನು ನಡೆಸುವುದು, ಅಂಬಾರಿಯಲ್ಲಿ ಮೆರೆಸುವುದು ಸಂವಿಧಾನಕ್ಕೆ ಎಸಗುವ ಅಪಚಾರ. ಕುವೆಂಪು ಅವರು ಹೇಳಿರುವಂತೆ ‘`ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬರ’ಬೇಕು. ಮೊಗೇರಿ ಗೋಪಾಲಕೃಷ್ಣ ಅಡಿಗರು ಹೇಳಿರುವಂತೆ ‘`ಕನ್ನಡವೆಂದರೆ ತಾಯಿಯೆ, ದೇವಿಯೇ, ನಾನೂ ನೀನೂ ಅವರು’ ಎಂಬ ಜನಪರ ನೆಲೆಯಲ್ಲಿ ಕನ್ನಡವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಬೆಳೆಸುವ ಹೊಣೆ, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವ ಸಂಕಲ್ಪವನ್ನು ಸಂವಿಧಾನದಲ್ಲಿ ಸ್ವೀಕರಿಸಿರುವ ನಮ್ಮೆಲ್ಲರ ಮೇಲಿದೆ.

ಈ ಸಮ್ಮೇಳನದ ವೇದಿಕೆಯಲ್ಲಿ ಧಾರ್ಮಿಕ ವ್ಯಕ್ತಿಗಳು ಎಲ್ಲರೊಂದಿಗೆ ಸಮಾನ ಗೌರವದಿಂದ ಭಾಗವಹಿಸುತ್ತಿರುವುದು, ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಮೂಢನಂಬಿಕೆಗಳ ವಿರುದ್ದ ಅವುಗಳ ಪ್ರಾಯೋಗಿಕ ಕಾರ್ಯಕ್ರಮವನ್ನು ನಡೆಸುತ್ತಿರುವುದು ಸಂತೋಷದ ಸಂಗತಿಗಳು; ಇವುಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ

ಪ್ರೀತಿಯಿಂದ
ಡಾ ಪಂಡಿತಾರಾಧ್ಯ
ಕನ್ನಡ ಪ್ರಾಧ್ಯಾಪಕ(ವಿ)
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸಗಂಗೋತ್ರಿ ಮೈಸೂರು ೫೭೦೦೦೬

ವಿಳಾಸ: ೮೮೧ ಬಸವೇಶ್ವರ ರಸ್ತೆ ಮೈಸೂರು ೫೭೦೦೦೪
ವಿ ಅಂಚೆ panditaradhya@gmail.com
ಜಾಲಚರಿ panditaputa.wordpress.com
ದೂರವಾಣಿ ೯೪೪೮೪೮೧೪೦೨

*ಬಿಜಾಪುರ
೯ ಫೆಬ್ರುವರಿ ೨೦೧೩
ರಾಷ್ಟ್ರೀಯ ಶಕೆ ೧೯೩೪ ಶಿಶಿರ ಮಾಘ ೨೦ ಕೃಷ್ಣ ಚತುರ್ದಶಿ ಉತ್ತರಾಷಾಢ ಶನಿವಾರ

*ಬಿಜಾಪುರದಲ್ಲಿ ನಡೆದ ಅಖಿಲ ಭಾರತ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿತರಿಸಿದೆ.

ಅಕ್ಟೋಬರ್ ೫ ವಿಶ್ವ ಅಧ್ಯಾಪಕರ ದಿನದ ಶುಭಾಶಯಗಳು!

 

Image

 

೧೯೯೪ನೇ ಅಕ್ಟೋಬರ್ ೫ನೇ ದಿನವನ್ನು ವಿಶ್ವ ಅಧ್ಯಾಪಕರ ದಿನವೆಂದು ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೊ) ಘೋಷಿಸಿದೆ. ಅಧ್ಯಾಪಕರಿಗೆ ಬೆಂಬಲವನ್ನು ಕ್ರೋಡೀಕರಿಸುವುದು ಮತ್ತು ಅವರು ಭವಿಷ್ಯದ ತಲೆಮಾರುಗಳ ಅಗತ್ಯಗಳನ್ನು ನಿರಂತರವಾಗಿ ಪೂರೈಸುವುದನ್ನು ಖಚಿತಗೊಳಿಸುವುದು ಅದರ ಉದ್ದೇಶ. ಅಧ್ಯಾಪಕರ ದಿನಾಚರಣೆಯನ್ನು ವಿವಿಧ ದೇಶಗಳು ವಷ೯ದ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಿವೆ. ಆದರೆ ಅಕ್ಟೋಬರ್ ೫ರಂದು  ವಿಶ್ವದ ಅಧ್ಯಾಪಕ ಸಮುದಾಯದೊಡನೆ ಒಂದಾಗಿಆಚರಿಸಬಹುದು.

೧೯೬೬ರ ಅಕ್ಟೋಬರ್ ೫ರಂದು ಯುನೆಸ್ಕೊ, ಅಂತಾರಾಷ್ಟ್ರೀಯ ಕಾಮಿ೯ಕ ಸಂಸ್ಥೆಯ ಸಹಯೋಗದೊಂದಿಗೆ ಪ್ಯಾರಿಸ್ಸಿನಲ್ಲಿ ಏಪ೯ಡಿಸಿದ್ದ ವಿವಿಧ ಸರಕಾರಗಳ ವಿಶೇಷ ಸಮ್ಮೇಳನದಲ್ಲಿ ಅಧ್ಯಾಪಕರ ಸ್ಥಿತಿಗತಿ ಕುರಿತ ಶಿಫಾರಸುಗಳನ್ನು ಅಂಗೀಕರಿಸಲಾಯಿತು. ಅದರಲ್ಲಿ ಅಧ್ಯಾಪಕರ ಹಕ್ಕುಗಳು, ಕತ೯ವ್ಯಗಳು, ಅವರ ತರಬೇತಿ ಮತ್ತು ಮುಂದಿನ ಶಿಕ್ಷಣ, ನೇಮಕ. ನೌಕರಿ, ಬೋಧನೆ ಮತ್ತು ಕಲಿಕೆಯ ಮೊದಲಾದವುಗಳ ಸ್ಥಿತಿಗತಿಗಳನ್ನು ನಿಧ೯ರಿಸಲಾಗಿತ್ತು. ಜೊತೆಗೆ ಶೈಕ್ಷಣಿತ ನಿಧಾ೯ರಗಳಲ್ಲಿ ಶಿಕ್ಷಣ ಪ್ರಾಧಿಕಾರದ ಜೊತೆ ಸಮಾಲೋಚನೆ, ಅನುಸಂಧಾನಗಳ ಮೂಲಕ ಅಧ್ಯಾಪಕರು ಭಾಗವಹಿಸುವುದೂ ಸೇರಿತ್ತು. ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಶಿಕ್ಷಕರ ಸ್ಥಿತಿಯನ್ನು ಉತ್ತಮಪಡಿಸಲು ಈ ಶಿಫಾರಸುಗಳನ್ನು ಮುಖ್ಯ ಮಾಗ೯ದಶಿ೯ಯಾಗಿ ಪರಿಗಣಿಸಲಾಯಿತು.

೧೯೬೭ರ ಅಕ್ಟೋಬರ್ ೫ರಂದು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಧ್ಯಾಪಕರ ಸ್ಥಿತಿಗತಿಗಳನ್ನು ಕುರಿತ ಶಿಫಾರಸನ್ನು ಯುನೆಸ್ಕೊ ಮಹಾಸಭೆಯು ಅಂಗೀಕರಿಸಿತು.

೧೯೯೪ರ ಅಕ್ಟೋಬರ್ ೫ರಂದು ಮೊದಲ ವಿಶ್ವ ಅಧ್ಯಾಪಕರ ದಿನವನ್ನು ಆಚರಿಸಲಾಯಿತು. ಅನಂತರ ಪ್ರತಿ ವಷ೯ ಅದೇ ದಿನ ವಿಶ್ವ ಅಧ್ಯಾಪಕರ ದಿನವನ್ನು ಆಚರಿಸಲಾಗುತ್ತಿದೆ. ಯುನೆಸ್ಕೊ ಪ್ರತಿವಷ೯ ಹೊಸ ಘೋಷಣೆಯಿರುವ ಭಿತ್ತಿಪತ್ರವನ್ನು ಬಿಡುಗಡೆ ಮಾಡುತ್ತಿದೆ. ಈ ವಷ೯ದ ಭಿತ್ತಿಪತ್ರ ಇಲ್ಲಿದೆ. ಯುನೆಸ್ಕೊ ಸಿದ್ಧಪಡಿಸಿರುವ ಶುಭಾಶಯ ಪತ್ರಗಳನ್ನು ಅಧ್ಯಾಪಕರು ವಿನಿಮಯಮಾಡಿಕೊಳ್ಳುತ್ತಾರೆ.

೨೦೦೯ರಿಂದ ಅಕ್ಟೋಬರ್ ೫ರಿಂದ ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘವು  ವಿಶ್ವ ಅಧ್ಯಾಪಕರ ದಿನವನ್ನು ಆಚರಿಸಿಕೊಂಡು ಬರುತ್ತಿದೆ.

ಎಲ್ಲರಿಗೂ ವಿಶ್ವ ಅಧ್ಯಾಪಕರ ದಿನದ ಶುಭಾಶಯಗಳು.

ಪತ್ರೋತ್ತರ

ಹಿರಿಯರಾದ ಪಂಡಿತಾರಾಧ್ಯರಿಗೆ
ತಾವು ಪಂಡಿತಪುಟದಲ್ಲಿ ಪ್ರಕಟಿಸಿರುವ ಪತ್ರವನ್ನು ‘ಕಾಮನಬಿಲ್ಲು’ ಪುರವಣಿಗೆ ಕಳುಹಿಸಿಕೊಟ್ಟಿಲ್ಲ. ಆದ್ದರಿಂದ ದಯವಿಟ್ಟು ಇದನ್ನು ಪ್ರಜಾವಾಣಿ ಪ್ರಕಟಿಸಿಲ್ಲ ಎಂಬರ್ಥದ ಸಾಲನ್ನು ನಿಮ್ಮ ಬ್ಲಾಗ್‌ನಿಂದ ತೆಗೆದು ಹಾಕಬೇಕಾಗಿ ಕೋರುತ್ತೇನೆ. ಸಾಮಾನ್ಯವಾಗಿ ಪ್ರಜಾವಾಣಿ ಆಯಾ ಪುರವಣಿಗಳಲ್ಲಿ ಪ್ರಕಟವಾಗುವ ಪ್ರತಗಳಿಗೆ ಸಂಬಂಧಿಸಿದ ಉತ್ತರಗಳನ್ನೂ ಆಯಾ ಪುರವಣಿಗಳಲ್ಲೇ ಪ್ರಕಟಿಸುತ್ತದೆ. ತಾವು ಇಂಥದ್ದೊಂದು ಉತ್ತರವನ್ನು ‘kamanabillu (at) prajavani.co.in’ ಎಂಬ ‘ಕಾಮನಬಿಲ್ಲು’ ಪುರವಣಿಯ ಅಧಿಕೃತ ವಿಳಾಸಕ್ಕಂತೂ ಕಳುಹಿಸಿಲ್ಲ. ಈ ಹಿಂದೆ ‘ಕಾಮನಬಿಲ್ಲು’ ಪುರವಣಿಯಲ್ಲಿ ಪ್ರಕಟವಾದ ನಿಮ್ಮ ಪತ್ರ, ಅದಕ್ಕೆ ನಾನು ಬರೆದ ಉತ್ತರಗಳೆಲ್ಲವೂ ಇದೇ ಮೇಲ್ ವಿಳಾಸವನ್ನು ಬಳಸಿಕೊಂಡಿದ್ದವು ಎಂಬುದನ್ನಿಲ್ಲಿ ನೆನಪಿಸಲು ಬಯಸುತ್ತೇನೆ. ನೀವು ಕಳುಹಿಸದೇ ಇರುವ ಪತ್ರವೊಂದನ್ನು ಪತ್ರಿಕೆ ಪ್ರಕಟಿಸಿಲ್ಲ ಎಂದು ಅದು ಹೇಗೆ ಹೇಳುತ್ತೀರಿ ಎಂಬುದು ನನಗಂತೂ ಅರ್ಥವಾಗುತ್ತಿಲ್ಲ. ‘ಈ ಪತ್ರವನ್ನು ಪ್ರಜಾವಾಣಿ ಪತ್ರಿಕೆ ಪ್ರಕಟಿಸದಿದ್ದುದರಿಂದ ಇಲ್ಲಿ ಪ್ರಕಟಿಸಿದೆ’ ಎಂಬ ಮಾತುಗಳನ್ನು ಬರೆಯುವುದು ತಮ್ಮಂಥ ಹಿರಿಯರಿಗೆ ಶೋಭಿಸುವುದಿಲ್ಲ ಎಂದು ವಿಷಾದಪೂರ್ವಕವಾಗಿ ಇಲ್ಲಿ ದಾಖಲಿಸ ಬಯಸುತ್ತೇನೆ. ಇದನ್ನು ತಕ್ಷಣವೇ ಸರಿಪಡಿಸುತ್ತೇರೆಂದು ನಾನು ಭಾವಿಸಿದ್ದೇನೆ.

ಎನ್.ಎ.ಎಂ. ಇಸ್ಮಾಯಿಲ್
ಮುಖ್ಯ ಉಪಸಂಪಾದಕ
ಪ್ರಜಾವಾಣಿ

ಶ್ರೀ ಎನ್ ಎ ಎಂ ಇಸ್ಮಾಯಿಲ್ ಅವರಿಗೆ ನಮಸ್ಕಾರಗಳು.
ನಾನು ಪ್ರಜಾವಾಣಿಯ ಕಾಮನಬಿಲ್ಲು ಪುರವಣಿಯ ವಾಚಕರವಾಣಿ ವಿಭಾಗಕ್ಕೆಂದು ಬರೆದು ಎಂದಿನಂತೆ ಎಡಿಟ್ ಪೇಜ್ ಅಟ್ ಪ್ರಜಾವಾಣಿ.ಕೊ.ಇನ್ ವಿಳಾಸಕ್ಕೆ ಕಳುಹಿಸಿದ ಈ ಪತ್ರ ನಿಮಗೆ ತಲುಪಿಲ್ಲ ಎಂಬ ನಿಮ್ಮ ವಿವರಣೆಯನ್ನು ಒಪ್ಪಿ ನಿಮ್ಮ ಅಪೇಕ್ಷೆಯಂತೆ ಪಂಡಿತಪುಟದಲ್ಲಿ ಪ್ರಕಟಿಸಿದ ಪತ್ರವನ್ನು ತೆಗೆದಿರಿಸಿದ್ದೇನೆ. ಕಾಮನಬಿಲ್ಲನಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಗಣಕ ಸಾಧನಗಳಲ್ಲಿ ಕನ್ನಡ ಬಳಕೆಗೆ ಇರುವ ಅವಕಾಶಗಳು ಮತ್ತು ಅವುಗಳನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡುವುದು ಅಗತ್ಯ ಎಂದು ಬರೆದಿದ್ದ ನನ್ನ ಪತ್ರದ ಆಶಯವನ್ನು ಗೌಣಗೊಳಿಸಿ ನಾನು ಬಳಸಿರುವ ಕನ್ನಡ ಪಾರಿಭಾಷಿಕಗಳ ಬಗ್ಗೆ ನೀವು ಬರೆದ ಪತ್ರಗಳು ಮತ್ತು ನನ್ನ ಉತ್ತರಗಳ ಹಿನ್ನೆಲೆಯಲ್ಲಿ ಎರಡು ವಾರ ಕಳೆದರೂ ನನ್ನ ಪತ್ರ ಪ್ರಕಟವಾಗಿಲ್ಲ ಎಂದು ಅನಿಸಿತು. ಈಗಲೂ ನೀವು ನನ್ನ ಅಭಿಪ್ರಾಯ ಮಂಡನೆಗೆ ಅವಕಾಶಕೊಡಬಹುದು ಎಂಬ ಭಾವನೆಯಿಂದ ಪಂಡಿತ ಪುಟದ ಪತ್ರವನ್ನು ತೆಗೆದಿರಿಸಿದ್ದೇನೆ. ಈ ಬಗ್ಗೆ ಮುಕ್ತ ವಿಚಾರ ವಿನಿಮಯಕ್ಕೆ ನಿಮ್ಮಲ್ಲಿ ಅವಕಾಶವಿದೆ ಎಂದು ಭಾವಿಸಿದ್ದೇನೆ.

ಪ್ರೀತಿಯಿಂದ
ಪಂಡಿತಾರಾಧ್ಯ

ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿತು. ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಆರಂಭದ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಉಚ್ಚ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಕರ್ನಾಟಕ ಸರಕಾರವು ಸರ್ವೋನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲ್ಲಿಸಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಮಾನದ ಅನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ಎಲ್ಲ ಮಕ್ಕಳಿಗೆ ಏಕರೂಪದ ಮಾತೃಭಾಷಾ ಶಿಕ್ಷಣ ಜಾರಿಗೆ ಬರುತ್ತದೆ. ಸರಕಾರವು ಸರ್ವೋನ್ನತ ನ್ಯಾಯಾಲಯದ ಮುಂದಿರುವ ಪ್ರಕರಣವು ಬೇಗ ಇತ್ಯರ್ಥವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಆರನೆಯ ತರಗತಿಯಿಂದ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುತ್ತಿರುವುದು ಆತಂಕದ ಸಂಗತಿ.

ಸರ್ವೋನ್ನತ ನ್ಯಾಯಾಲಯವು ಪುರಸ್ಕರಿಸಿದ ಸರಕಾರದ ಭಾಷಾ ನೀತಿಯಿಂದ ರಾಜ್ಯದ ಸರಕಾರಿ-ಖಾಸಗಿ, ಅನುದಾನಿತ-ಅನುದಾನರಹಿತ ಎಂಬ ಭೇದವಿಲ್ಲದೆ ಪೂರ್ವ ಪ್ರಾಥಮಿಕ ಹಂತದಿಂದ ಐದನೆಯ ತರಗತಿಯವರೆಗೆ ಎಲ್ಲ ಮಕ್ಕಳಿಗೆ ಏಕರೂಪದ, ಸಮಾನ ಅವಕಾಶದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಮಾತ್ರವೇ ಅಂದರೆ ಮೂರನೆಯ ತರಗತಿಯಿಂದ ಇಂಗ್ಲಿಷನ್ನು ಐಚ್ಛಿಕವಾಗಿ ಮತ್ತು ಐದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮವಾಗಿದೆ. ಇದರಿಂದ ಹಿಂದುಳಿದ ವರ್ಗಗಳ ಮಕ್ಕಳಂತೆ ಮುಂದುವರೆದ ವರ್ಗಗಳ ಮಕ್ಕಳೂ ಮಾತೃಭಾಷೆಯಲ್ಲಿಯೇ ಕಲಿಯುವುದರಿಂದ ಎಲ್ಲ ವರ್ಗಗಳ ಮಕ್ಕಳಿಗೆ ಸಮಾನ ಸ್ಪರ್ಧೆಯ ಸಮಾನ ಅವಕಾಶ ದೊರೆಯುತ್ತದೆ. ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲವಿರುವ ಮುಂದುವರೆದ ವರ್ಗಗಳ ಮಕ್ಕಳ ಜೊತೆ, ಮನೆಯಲ್ಲಿ ಶೈಕ್ಷಣಿಕ ವಾತಾವರಣ, ಕಲಿಕೆಯ ಸೌಲಭ್ಯಗಳ ಬೆಂಬಲಗಳಿಲ್ಲದ ಹಿಂದುಳಿದ ವರ್ಗಗಳ ಮಕ್ಕಳು ಇಂಗ್ಲಿಷನ್ನೂ ಕಲಿಯುತ್ತಾ ಇಂಗಿಷಿನಲ್ಲಿ ಸ್ಪರ್ಧಿಸಬೇಕಾಗುವುದರಿಂದ ಅವರ ನಡುವೆ ಅಸಮಾನತೆಯ ಅಂತರ ಹೆಚ್ಚುತ್ತದೆ. ಅದರ ಬದಲು ಎಲ್ಲ ಮಕ್ಕಳೂ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಕಲಿಯುವುದರಿಂದ ಅವರು ಶೈಕ್ಷಣಿಕವಾಗಿ ಸಮಾನವಾಗಿ ಮುಂದುವರೆಯಲು ಸಾಧ್ಯವಾಗುವುದು ಮಹತ್ವದ ಸಂಗತಿ.

ಮಕ್ಕಳು ಐದನೆಯ ತರಗತಿಯಿಂದ ಮಾತ್ರ ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಯಲು ಆರಂಭಿಸಿರುವುದರಿಂದ ಅವರಿಗೆ ಆರನೆಯ ತರಗತಿಯ ಹಂತದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್ಲ ವಿಷಯಗಳನ್ನು ಕಲಿಯುವಷ್ಟು ಸಾಮರ್ಥ್ಯವಾಗಲಿ, ಅಗತ್ಯವಾಗಲಿ ಇರುವುದಿಲ್ಲ. ಅವರು ಮಾಧ್ಯಮವಾಗಿ ಬಳಸಬಹುದಾದಷ್ಟು ಸಾಮರ್ಥ್ಯವನ್ನು ಇಂಗ್ಲಿಷಿನಲ್ಲಿ ಪಡೆಯವವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ದುಡುಕಬಾರದು. ಕರ್ನಾಟಕ ಸರಕಾರವು ಈಗಿರುವ ಶಿಕ್ಷಣಕ್ರಮದಲ್ಲಿಯೇ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸುವುದು ಅಶೈಕ್ಷಣಿಕವಷ್ಟೇ ಅಲ್ಲ, ಸಾಧ್ಯವಾದಷ್ಟೂ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯಬೇಕೆಂಬ ಮಕ್ಕಳ ಶಿಕ್ಷಣ ಹಕ್ಕಿನ ವಿರುದ್ಧವೂ ಆಗುತ್ತದೆ. ಸರ್ವೋನ್ನತ ನ್ಯಾಯಾಲಯ ಅನುಮೋದಿಸಿರುವ ಭಾಷಾನೀತಿಯನ್ನು ಮೊದಲು ಪೂರ್ಣವಾಗಿ ಜಾರಿಗೊಳಿಸಿ, ಅದರ ಕ್ರಮದಂತೆ ಐದನೆಯ ತರಗತಿಯನ್ನು ಪೂರೈಸಿದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷೆಯನ್ನು ಮಾಧ್ಯಮವಾಗಿ ಬಳಸುವ ಸಾಮರ್ಥ್ಯ ಮತ್ತು ಅಗತ್ಯಗಳನ್ನು ಗಮನಿಸಿದ ಅನಂತರವೇ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಬಹುದಾದ ಹಂತದ ಬಗ್ಗೆ ನಿರ್ಧರಿಸಬೇಕು.
ಸರ್ವೋನ್ನತ ನ್ಯಾಯಾಲಯ ಅನುಮೋದಿಸಿದ್ದ ಕರ್ನಾಟಕ ಸರಕಾರದ ಭಾಷಾನೀತಿಯನ್ನು ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿ, ಅದರ ಇತ್ಯರ್ಥವನ್ನು ಹದಿನಾಲ್ಕು ವರ್ಷಗಳವರೆಗೆ ವಿಳಂಬಿಸಿ, ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಿತಗೊಳಿಸಿರುವುದು ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯೇ ಆಗಿದೆ. ಸರ್ವೋನ್ನತ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರ ಮಾತೃಭಾಷೆಯೂ ಅಲ್ಲದ, ರಾಜ್ಯಭಾಷೆಯೂ ಅಲ್ಲದ ಇಂಗ್ಲಿಷನ್ನು ಒಂದನೆಯ ತರಗತಿಯಿಂದ ಆರಂಭಿಸಿರುವ, ಮತ್ತು ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೇ ತೆರೆಯುವುದರ ಹಿಂದೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಅವಕಾಶದ ಹಕ್ಕನ್ನು ಶಾಶ್ವತವಾಗಿ ವಂಚಿಸುವ ವ್ಯವಸ್ಥಿತವಾದ ಸಂಚಿರುವಂತೆ ಭಾಸವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಮುಚ್ಚಳಿಕೆಯನ್ನು ಬರೆದುಕೊಟ್ಟು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡಸುತ್ತಿರುವ ಶಾಲೆಗಳನ್ನು ಮುಚ್ಚಿಸದೆ, ಕೇಂದ್ರೀಯ ಶಾಲೆಗಳಲ್ಲಿ ಅಂತರ ರಾಜ್ಯ ವರ್ಗಾವಣೆಯಾಗುವ ಪೋಷಕರ ಮಕ್ಕಳಿಗೆ ಮಾತ್ರ ಎಂದು ಪ್ರವೇಶವನ್ನು ನಿರ್ಬಂಧಿಸದೆ ಸರಕಾರ ಕನ್ನಡ ಶಾಲೆಗಳನ್ನೇ ಮುಚ್ಚುತ್ತಿರುವುದು ಇದಕ್ಕೆ ಪುಷ್ಟಿಯನ್ನು ನೀಡುವಂತಿದೆ.

‘ಒಂದನೆಯ ತರಗತಿಯಿಂದ ಇಂಗ್ಲಿಷ್ ಕಲಿಸುವುದು ಎಲ್ಲ ವರ್ಗ ಹಾಗೂ ಸಮುದಾಯಗಳ ಕನ್ನಡಿಗರೆಲ್ಲರ ಬೇಡಿಕೆ ಎಂದೂ ಅದಕ್ಕೆ ಕೆಲವರು ಮಾತ್ರ ಬೇಡವೆನ್ನುವುದು ಜನಪರವಲ್ಲ’ವೆಂದೂ ವಾದಿಸುವವರಿದ್ದಾರೆ. ಶೈಕ್ಷಣಿಕ ವಿಷಯಗಳನ್ನು ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆಯ ಬೇಡಿಕೆಯ ಆಧಾರದ ಮೇಲೆ ನಿರ್ಧರಿಸುವುದಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದಂತೆ ಮಾತ್ರ ನಿರ್ಧರಿಸುತ್ತಾರೆ. ಮಾತೃಭಾಷೆಯಲ್ಲದ ಭಾಷೆಯನ್ನು ಒಂದನೆಯ ತರಗತಿಯಿಂದ ಕಡ್ಡಾಯವಾಗಿ ಕಲಿಸುವುದು ಗುಣಮಟ್ಟದ ಶಿಕ್ಷಣಕ್ಕೆ ಕಾರಣ ಎಂದು ಯಾವ ಶಿಕ್ಷಣ ತಜ್ಞರೂ ಹೇಳಿಲ್ಲ. ಅದಕ್ಕೆ ಬದಲಾಗಿ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದೇ ಹೇಳಿದ್ದಾರೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಕಲಿಸುವುದು ಮಾತ್ರ ಶೈಕ್ಷಣಿಕವಾಗಿ ಮುಖ್ಯ. ಇಂಗ್ಲಿಷನ್ನು ಒಂದು ಭಾಷೆಯಾಗಿ ಚೆನ್ನಾಗಿಯೇ ಕಲಿಸುವುದನ್ನು ಯಾರೂ ಬೇಡವೆನ್ನುತ್ತಿಲ್ಲ.

ಇಂಗ್ಲಿಷ್ ಮಾತೃಭಾಷೆಯ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುವ ರೀತಿಯಲ್ಲಿಯೇ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷನ್ನು ಕಲಿಸುತ್ತಿರುವ ಶಿಕ್ಷಣ ಕ್ರಮದಲ್ಲಿಯೇ ದೋಷವಿದೆ. ಇಂಗ್ಲಿಷನ್ನು ಎರಡನೆಯ ಭಾಷೆಯನ್ನು ಕಲಿಸುವ ವಿಧಾನದಲ್ಲಿ ಸುಲಭವಾಗಿ ಮತ್ತು ಯಶಸ್ವಿಯಾಗಿ ಕಲಿಸಬಹುದು. ಅದಕ್ಕೆ ಅಗತ್ಯವಾದ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ಮೊದಲು ಸಿದ್ಧಪಡಿಸಬೇಕು. ಹಾಗೆ ತರಬೇತಿಪಡೆದ ಶಿಕ್ಷಕರು ಮಕ್ಕಳೊಂದಿಗೆ ಸರಳವಾಗಿ ಇಂಗ್ಲಿಷಿನಲ್ಲಿ ಯೋಚಿಸುವುದನ್ನು, ಮಾತನಾಡುವುದನ್ನು ಮೊದಲು ಕಲಿಸಬೇಕು. ಅನಂತರವೇ ಇಂಗ್ಲಿಷಿನಲ್ಲಿ ಓದುವುದು, ಬರೆಯುವುದನ್ನು ಕಲಿಸಬೇಕು. ಈಗ ಹಾಗೆ ಮಾಡದೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಅಕ್ಷರ, ಪುಸ್ತಕಗಳನ್ನು ಓದಿಸುತ್ತಿರುವುದರಿಂದ ಉದ್ದೇಶಿತ ಪ್ರಯೋಜನವಾಗುತ್ತಿಲ್ಲ. ಶೈಕ್ಷಣಿಕವಾದ ಸರಿಯಾದ ಕ್ರಮದಲ್ಲಿ ಸುಲಭವಾಗಿ ಕಲಿಯಬಹುದಾದ ಇಂಗ್ಲಿಷ್ ಭಾಷೆಯನ್ನು ಶೈಕ್ಷಣಿಕವಲ್ಲದ ಕ್ರಮದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದಲೇ ಕಡ್ಡಾಯಗೊಳಿಸಿ ಆರನೆಯ ತರಗತಿಯಿಂದ ಹಾಗೆ ಅಸಮರ್ಪಕವಾಗಿ ಕಲಿಸಿದ ಇಂಗ್ಲಿಷನ್ನು ಮಾಧ್ಯಮವಾಗಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ.

ತಮಗೆ ಅರ್ಥವಾಗುವ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕು. ಸರಕಾರ ಯಾವ ಕಾರಣಕ್ಕೂ ಮಕ್ಕಳ ಈ ಹಕ್ಕನ್ನು ಕಸಿಯಬಾರದು. ಸರಕಾರ ತಂದೆತಾಯಿಗಳ ಅಶೈಕ್ಷಣಿಕ ಮಹತ್ವಾಕಾಂಕ್ಷೆ ಮತ್ತು ಶಿಕ್ಷಣ ವ್ಯಾಪಾರಿಗಳ ದುರಾಸೆಗೆ ಇಂಬುಕೊಡುವಂತೆ ಇಂಗ್ಲಿಷ್ ಭಾಷೆಯನ್ನು ಕಲಿಸುವ ಮತ್ತು ಮಾಧ್ಯಮವಾಗಿ ಅದನ್ನು ಬಳಸುವ ವಿಷಯದಲ್ಲಿ ದುಡುಕಬಾರದು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಹಕ್ಕಿನ ರಕ್ಷಕನಾಗಿ ವರ್ತಿಸಬೇಕು.

೧೯೮೯ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ರಾಮಾಜೋಯಿಸ್ ಮತ್ತು ಶ್ರೀ ರಾಜೇಂದ್ರಬಾಬು ಅವರು ನೀಡಿದ ತೀರ್ಪು ಇಡೀ ದೇಶಕ್ಕೆ ಮಾದರಿಯಾದುದು ಎಂದು ದಿ ಟೈಮ್ಸ್ ಆಫ್ ಇಂಡಿಯಾ ಸಂಪಾದಕೀಯದಲ್ಲಿ ಪ್ರಶಂಸಿಸಿತ್ತು. ಅದನ್ನು ೧೯೯೩ರಲ್ಲಿ ಸರ್ವೋನ್ನತ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ ಎಂ ಎನ್ ವೆಂಕಟಾಚಲಯ್ಯ ಮತ್ತು ಶ್ರೀ ಎಸ್ ಮೋಹನ್ ಅವರು ಅನುಮೋದಿಸಿದ್ದರು. ಅದನ್ನು ಆಧರಿಸಿ ಶ್ರೀ ಎಂ ವೀರಪ್ಪ ಮೊಯಿಲಿ ಅವರ ಸರಕಾರ ೧೯೯೪ರಲ್ಲಿ ರೂಪಿಸಿದ ಭಾಷಾನೀತಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಸದವಕಾಶ ಇಂದಿನ ಮುಖ್ಯಮಂತ್ರಿಗಳಾಗಿರುವ ಶ್ರೀ ಸದಾನಂದಗೌಡರ ಸರಕಾರಕ್ಕೆ ದೊರೆತಿದೆ. ಅದನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರದಾಗಲಿ ಎಂದೇ ನನ್ನ ಆಶಯ.

ಬೆಂಗಳೂರು*
೧೯೩೪ ಗ್ರೀಷ್ಮ ಜ್ಯೇಷ್ಠ ೨೫ ಕೃಷ್ಣ ಏಕಾದಶಿ ಅಶ್ವಿನಿ ಶುಕ್ರವಾರ
೧೫ಜೂನ್ ೨೦೧೨
—-
* ಸರಕಾರಿ ಶಾಲೆಗಳಲ್ಲಿ ಆರನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವುದರ ವಿರುದ್ಧ ಮೈಸೂರಿನ ಕನ್ನಡ ಕ್ರಿಯಾ ಸಮಿತಿಯು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಿದ ಪ್ರತಿಭಟನೆಯ ಧರಣಿಯಲ್ಲಿ ವಿತರಿಸಿದೆ

ಮೂಲ ಕನ್ನಡ ಕೃತಿಗಳಿಂದ ಮಾತ್ರ ಕನ್ನಡದ ಉಳಿವು; ಎರವಲು(ಎಂಜಲು) ಕೃತಿಗಳಿಂದ ಅಲ್ಲ

ಮಾನ್ಯರೆ,
ಕನ್ನಡದ ಉಳಿವಿಗಾಗಿ ಕನ್ನಡದಲ್ಲಿ ಸೃಜನಶೀಲ ಕೃತಿಗಳು ಹೆಚ್ಚು ಹೆಚ್ಚು ಬರಬೇಕು ಎನ್ನುವುದು ಸರಿಯಾದ ಚಿಂತನೆ; ಬೇರೆಯವರ ಸೃಜನಶೀಲತೆಯನ್ನು ತಮ್ಮದೆಂಬಂತೆ ವಂಚಿಸುವುದು ಅರ್ಥಯುತವಾದ ಚಿಂತನೆಯಲ್ಲವೆಂದು ನನ್ನ ಅನಿಸಿಕೆ. ಈಗ ಜನಶ್ರೀ ವಾಹಿನಿಯವರು ಆರ್ ಕೆ ನಾರಾಯಣ್ ಅವರ ಇಂಗ್ಲಿಷ್ ಕಥೆಗಳ ಸರಣಿಯನ್ನು ಆಧರಿಸಿ ಹಿಂದಿಯಲ್ಲಿ ತಯಾರಿಸಿದ್ದ ‘ಮಾಲ್ಗುಡಿ ಡೇಸ್’ ಅನ್ನು ಮೂಲ ಭಾಷೆಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಒದಗಿಸಿ, ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಅಗತ್ಯವಾದಷ್ಟು ಸಂಭಾಷಣೆಗಳನ್ನು ಕನ್ನಡದಲ್ಲಿ ಅಡಿಬರಹದಲ್ಲಿ ಕೊಟ್ಟಿರುವುದು ಕನ್ನಡದ ಪ್ರಬುದ್ಧ ಪ್ರೇಕ್ಷಕರ ವಿವೇಕಕ್ಕೆ ತೋರಿದ ಗೌರವವಾಗಿದೆ. ಆಮೀರ್ ಖಾನ್ ಅವರು ಕೂಡ ಸತ್ಯಮೇವ ಜಯತೆಯ ಇಂಗ್ಲಿಷ್ ಆವೃತ್ತಿಯನ್ನು ಮೂಲ ಹಿಂದಿಯಲ್ಲಿಯೇ ಕೇಳಿಸಿಕೊಳ್ಳುವ ಅವಕಾಶ ಉಳಿಸಿ ಇಂಗ್ಲಿಷಿನಲ್ಲಿ ಸಂಭಾಷಣೆಗಳನ್ನು ಅಡಿ ಬರಹದಲ್ಲಿ ನೀಡುತ್ತಿರುವುದನ್ನೂ ಗಮನಿಸಬೇಕು.

ದೂರದರ್ಶನದಲ್ಲಿ ಭಾನುವಾರಗಳಂದು ಪ್ರಸಾರವಾಗುವ ವಿವಿಧ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಸಂಭಾಷಣೆಗಳು ಭಾರತೀಯ ಭಾಷೆಗಳಲ್ಲಿ ಅಡಿ ಬರಹದಲ್ಲಿ ಲಭ್ಯವಿರುವುದರಿಂದ ಪ್ರೇಕ್ಷಕರು ಮೂಲ ಭಾಷೆಯನ್ನು ಕೇಳುವುದರೊಂದಿಗೆ ತಮ್ಮ ಭಾಷೆಯಲ್ಲಿರುವ ಅಡಿ ಬರಹದಲ್ಲಿ ಸಂಭಾಷಣೆಯನ್ನು ಓದಿ ಅರ್ಥಮಾಡಿಕೊಳ್ಳುತ್ತಾರೆ. ಹೀಗೆ ಭಾರತೀಯ ಭಾಷೆಗಳಲ್ಲಿ ಅಡಿಬರಹದಲ್ಲಿ ಸಂಭಾಷಣೆಗಳಿರುವ ಅನೇಕ ಚಿತ್ರಗಳ ಅಡಕತಟ್ಟೆಗಳು ಲಭ್ಯವಿವೆ. ಇದರಿಂದ ಈ ಚಿತ್ರಗಳಿಗೆ ಮೂಲಭಾಷೆಯ ಕೃತಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿ ತಮ್ಮ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.

ಇತ್ತೀಚೆಗೆ ರಾಷ್ಟ್ರಪತಿಗಳ ಚಿನ್ನದ ಕಮಲ ಪ್ರಶಸ್ತಿ ಪಡೆದ ಕನ್ನಡದ ಪ್ರತಿಭಾವಂತ ಯುವ ನಿರ್ದೇಶಕ ಶ್ರೀ ಅಭಯ ಸಿಂಹ ಅವರು ಸ್ವತಂತ್ರವಾಗಿ, ಪ್ರತ್ಯೇಕವಾಗಿಯೇ ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ತಯಾರಿಸಿದ್ದ ಶಿಕಾರಿ ಚಿತ್ರಕ್ಕೆ ಮಲಯಾಳಂ ಮತ್ತು ಕನ್ನಡ ಪ್ರೇಕ್ಷಕರನ್ನು ನಿರೀಕ್ಷಿಸಿದ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿಲ್ಲ. ಮಮ್ಮೂಟಿಯವರೇ ಕಂಠದಾನದ ನೆರವು ಪಡೆಯದೆ ಕನ್ನಡದಲ್ಲಿ ಸಂಭಾಷಣೆಗಳನ್ನು ಹೇಳಿದ್ದರೂ ಅದು ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿಲ್ಲ. ಮಲೆಯಾಳಂ ಪ್ರೇಕ್ಷಕರೂ ಇದು ಕನ್ನಡದಿಂದ ಧ್ವನಿವಾಹಿನಿ ಮಾತ್ರ ಬದಲಿಸಿದ(ಡಬ್ ಮಾಡಿದ) ಚಿತ್ರವೆಂಬಂತೆ ದೂರವಿರಿಸಿದರು ಎಂಬುದು ಒಂದು ವಿವರಣೆ. ಅಂದರೆ ಒಂದು ಭಾಷೆಯ ನಿಜ ಬಳಕೆಯ ಸಂರ್ಭವನ್ನು ಇನ್ನೊಂದು ಭಾಷೆಯ ನಿಜಬಳಕೆಯ ಸಂದರ್ಭವಾಗಿಸುವುದು ಕಷ್ಟ. ಆದರೆ ಅಡಿಬರಹದ ಸಂಭಾಷಣೆಯಿದ್ದಾಗ ಚಿತ್ರವನ್ನು ಮೂಲಭಾಷೆಯಲ್ಲಿಯೇ ಪ್ರಜ್ಞಾಪೂರ್ವಕವಾಗಿ ಒಪ್ಪಿ ಸ್ವೀಕರಿಸಿ ಅನುವಾದಿಸಿರುವ ಸಂಭಾಷಣೆಗಳ ಮೂಲಕ ಅರ್ಥಮಾಡಿಕೊಳ್ಳುತ್ತಾರೆ.

ಆದ್ದರಿಂದ ಸತ್ಯಮೇವ ಜಯತೆಯನ್ನೂ ಅದರ ಇಂಗ್ಲಿಷ್ ಅವತರಣಿಕೆಯ ಹಾಗೆ ಎಲ್ಲ ಭಾರತೀಯ ಭಾಷೆಗಳ ಅಡಿ ಬರಹದ ಸಂಭಾಷಣೆಗಳೊಂದಿಗೆ ಮಾತ್ರ ಪ್ರಸಾರಮಾಡುವಂತೆ ಅಮೀರ್ ಖಾನ್ ಅವರನ್ನು ಕೋರಿದ್ದೇನೆ. ಈಗ ಅವರು ವಿವಿಧ ಭಾಷಾ ಪತ್ರಿಕೆಗಳಲ್ಲಿ ಆಯಾ ವಾರ ಪ್ರಸಾರವಾದ ಕಂತಿನ ಅನುವಾದವನ್ನು ಲೇಖನ ರೂಪದಲ್ಲಿ ನೀಡುತ್ತಿರುವುದು ಸ್ವಾಗತಾರ್ಹ. ದೂರದರ್ಶನ ನೋಡಲಾರದ, ಪತ್ರಿಕೆ ಓದಲಾರದ ದೃಷ್ಟಿಹೀನತೆಯುಳ್ಳವರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಇದನ್ನು ಧ್ವನಿರೂಪದಲ್ಲಿ ವಿವಿಧ ಆಕಾಶವಾಣಿಯ ವಾಹಿನಿಗಳಲ್ಲಿ ಪ್ರಸಾರಮಾಡಬಹುದು.

ವಿವಿಧ ಭಾಷೆಗಳ ಚಿತ್ರಗಳನ್ನು ಅಡಿ ಬರಹಗಳಲ್ಲಿರುವ ಅನುವಾದಿತ ಸಂಭಾಷಣೆಯ ಸರಳ ವಿಧಾನದ ಮೂಲಕ ಭಾರತ ಮಾತ್ರವಲ್ಲ, ಜಗತ್ತಿನ ಎಲ್ಲ ಭಾಷೆಗಳವರು ಅರ್ಥಮಾಡಿಕೊಳ್ಳುತ್ತಿದ್ದಾರೆ.

ಈ ವಿಷಯದಲ್ಲಿ ದಯವಿಟ್ಟು ಎಲ್ಲರೂ ನಿರುದ್ವಿಗ್ನವಾಗಿ ಯೋಚಿಸಬೇಕೆಂದು ಕೋರುತ್ತೇನೆ.

ಪ್ರೀತಿಯಿಂದ
ಪಂಡಿತಾರಾಧ್ಯ
ಮೈಸೂರು

ವಿಚಾರವಾದದ ಅನುಸಂಧಾನ ಮತ್ತು ನೈಚ್ಯಾನುಸಂಧಾನ

ರಾಜ್ಯದಲ್ಲಿ ಹಲವು ಕಡೆ ಆಚರಣೆಲ್ಲಿರುವ ಕುಖ್ಯಾತ ಮಡೆಸ್ನಾನವನ್ನು ನಿಲ್ಲಿಸಬೇಕೆಂದು ಪ್ರಗತಿಪರ ಚಿಂತಕರು ಒತ್ತಾಯಿಸುತ್ತ ಬಂದಿದ್ದರೂ ಸರಕಾರ ನಿರ್ಧಾರ ಕೈಗೊಂಡಿಲ್ಲ. ಈ ಬಾರಿ ಸುಬ್ರಹ್ಮಣ್ಯದ ಮಡೆಸ್ನಾನದ ವಿರುದ್ಧ ದನಿ ಎತ್ತಿದ ಪ್ರಗತಿಪರರ ಮೇಲೆ ಪಟ್ಟಭದ್ರ ಶಕ್ತಿಗಳು ಆಕ್ರಮಣ ಮಾಡಿದಾಗಲೂ ಸರಕಾರ ಇತ್ಯಾತ್ಮಕವಾಗಿ ಸ್ಪಂದಿಸಿಲ್ಲ. ಪೇಜಾವರದ ಶ್ರೀ ವಿಶ್ವೇಶತೀರ್ಥರು ಅದು ನಂಬಿಕೆಯ ವಿಷಯವೆಂದೂ ಪರಂಪರೆಯ ಆಚರಣೆಯೆಂದೂ ಅದನ್ನು ನಿಷೇಧಿಸಲು ಮುಂದಾಗದಿದ್ದಾಗ ನಿಡುಮಾಮಿಡಿಯ ಶ್ರೀ ವೀರಭದ್ರ ಚನ್ನಮಲ್ಲರು ಮಡೆಸ್ನಾನ ಕುರಿತ ಸಂವಾದ ಏರ್ಪಡಿಸಿ ಸಮಾನ ಮನಸ್ಕ ಮಠಾಧಿಪತಿಗಳು ಮತ್ತು ವಿಚಾರವಂತರೊಂದಿಗೆ ಸಂವಾದದಲ್ಲಿ ಭಾಗವಹಿಸುವಂತೆ ಶ್ರೀ ವಿಶ್ವೇಶತೀರ್ಥರನ್ನು ಆಹ್ವಾನಿಸಿದರು. ಇದೇ ಶನಿವಾರ ೭ರಂದು ನಡೆದ ಆ ಸಭೆಯಲ್ಲಿ ಶ್ರೀ ವಿಶ್ವೇಶತೀರ್ಥರು ಭಾಗವಹಿಸಲಿಲ್ಲ. ಇತರ ಹಿಂದುಳಿದ ವರ್ಗಗಳ ವಿವಿಧ ಮಠಾಧಿಪತಿಗಳು ಸೇರಿ ಮಡೆಸ್ನಾನವನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಭಾನುವಾರ ೮ರಂದು ನಡೆದ ಮತ್ತೊಂದು ಸಭೆಯಲ್ಲಿ ಪೇಜಾವರದ ಶ್ರೀ ವಿಶ್ವೇಶತೀರ್ಥರು ತಾವು ಮಡೆಸ್ನಾನವನ್ನು ಸಮರ್ಥಿಸಿಲ್ಲವೆಂದೂ ಅದು ಹಿಂದೂ ಸಂಪ್ರದಾಯದ ಭಾಗವಾಗಿ ಉಳಿಯಬೇಕಿಲ್ಲವೆಂದೂ ಹೇಳಿದ್ದಾರೆ. ಇದಕ್ಕೆ ಮುನ್ನ ಶ್ರೀ ವೀರಭದ್ರ ಚನ್ನಮಲ್ಲರು ಮಾತನಾಡಿ ಪೇಜಾವರರ ಬಗ್ಗೆ ತಮಗೆ ಅಪಾರ ಗೌರವವಿರುವುದಾಗಿಯೂ ಅವರು, ವರ್ಷದಲ್ಲಿ ಒಂದು ದಿನ ಅಷ್ಟಮಠಗಳಲ್ಲಿ ಸಮಾಜದ ಎಲ್ಲ ವರ್ಗಗಳವರಿಗೆ ಪೂಜೆ ಸಲ್ಲಿಸಲು ಅವಕಾಶ- ಮೊದಲಾದ ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಿದರೆ ತಾವು ಅವರ ಶಿಷ್ಯವೃತ್ತಿ ಸ್ವೀಕರಿಸುವುದಾಗಿಯೂ ಹೇಳಿದರೆಂದು ವರದಿಯಾಗಿದೆ.
ಸಂವಿಧಾನ ಮತ್ತು ಪರಂಪರೆಗಳಲ್ಲಿ ತಾವು ಪರಂಪರೆಯನ್ನು ಹೆಚ್ಚು ಗೌರವಿಸುವವರು ಎಂದು ಹೇಳಿರುವ ಶ್ರೀ ವಿಶ್ವೇಶತೀರ್ಥರ ಎದುರು ಪ್ರಗತಿಪರರೆಂದುಕೊಂಡವರು ಈ ರೀತಿ ಶರಣಾದುದನ್ನು ನೋಡಿ ಇದೇನು ಸಮಾನತೆಯ ನೆಲೆಯ ಅನುಸಂಧಾನವೊ ನೈಚ್ಯಾನುಸಂಧಾನವೊ ಎಂದು ಸಖೇದಾಶ್ಚರ್ಯವಾಯಿತು. ‘ಪ್ರಗತಿಪರ ಸ್ವಾಮೀಜಿ’ ಎನ್ನುವುದೇ ‘ಬಿಸಿಬಿಸಿ ಐಸ್ ಕ್ರೀಮ್’ ಎಂಬಂಥ ವಿರೋಧಾಭಾಸ. ಪರಂಪರೆ, ಆಚರಣೆಗಳು ಖಾಸಗೀ ನಂಬಿಕೆಗಳು. ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಮಾತ್ರ ಪರಮೋಚ್ಚ. ಶ್ರೀ ವಿಶ್ವೇಶತೀರ್ಥರ ಶಿಷ್ಯರಾಗಲು ಶ್ರೀ ವೀರಭದ್ರ ಚನ್ನಮಲ್ಲರು ಹಾತೊರೆಯುವ ಬದಲು ರಾಷ್ಟ್ರಕವಿ ಕುವೆಂಪು ಅವರ ಕರೆಗೆ ಓಗೊಟ್ಟು, ‘ಗುಡಿ ಚರ್ಚು ಮಸಜೀದುಗಳನ್ನು ಬಿಟ್ಟು ಹೊರಬಂದು, ಮೌಢ್ಯತೆಯ ಮಾರಿಯನ್ನು ಹೊರದೂಡ’ಲಿ; ‘ಕೇವಲ ಮನುಷ್ಯ’ರಾಗಿ ಎಲ್ಲರ ಜೊತೆ ಸಮಾನ ಗೌರವದ ನೆಲೆಯಲ್ಲಿ ಅನುಸಂಧಾನ ಮಾಡಲಿ.
ಸಂವಿಧಾನ ಪರಮೋಚ್ಚ ಎಂದು ಒಪ್ಪದ ಸ್ವಾಮಿಗಳಿಗೆ ಪ್ರಗತಿಪರತೆಯ ಮುಖವಾಡದ ಅಗತ್ಯ ಇದೆ;
ಅಂಥವರ ಆಶ್ರಯದಲ್ಲಿ ವಿಚಾರವಾದವನ್ನು ಬೆಳೆಸುವ(?) ಅನಿವಾರ್ಯತೆ ವಿಚಾರವಾದಿಗಳಿಗೆ ಇಲ್ಲ.

ಡಾ ಪಂಡಿತಾರಾಧ್ಯ
ಜಿ.ಪಿ. ಬಸವರಾಜು