ಹಿರಿಯರಾದ ಪಂಡಿತಾರಾಧ್ಯರಿಗೆ
ತಾವು ಪಂಡಿತಪುಟದಲ್ಲಿ ಪ್ರಕಟಿಸಿರುವ ಪತ್ರವನ್ನು ‘ಕಾಮನಬಿಲ್ಲು’ ಪುರವಣಿಗೆ ಕಳುಹಿಸಿಕೊಟ್ಟಿಲ್ಲ. ಆದ್ದರಿಂದ ದಯವಿಟ್ಟು ಇದನ್ನು ಪ್ರಜಾವಾಣಿ ಪ್ರಕಟಿಸಿಲ್ಲ ಎಂಬರ್ಥದ ಸಾಲನ್ನು ನಿಮ್ಮ ಬ್ಲಾಗ್ನಿಂದ ತೆಗೆದು ಹಾಕಬೇಕಾಗಿ ಕೋರುತ್ತೇನೆ. ಸಾಮಾನ್ಯವಾಗಿ ಪ್ರಜಾವಾಣಿ ಆಯಾ ಪುರವಣಿಗಳಲ್ಲಿ ಪ್ರಕಟವಾಗುವ ಪ್ರತಗಳಿಗೆ ಸಂಬಂಧಿಸಿದ ಉತ್ತರಗಳನ್ನೂ ಆಯಾ ಪುರವಣಿಗಳಲ್ಲೇ ಪ್ರಕಟಿಸುತ್ತದೆ. ತಾವು ಇಂಥದ್ದೊಂದು ಉತ್ತರವನ್ನು ‘kamanabillu (at) prajavani.co.in’ ಎಂಬ ‘ಕಾಮನಬಿಲ್ಲು’ ಪುರವಣಿಯ ಅಧಿಕೃತ ವಿಳಾಸಕ್ಕಂತೂ ಕಳುಹಿಸಿಲ್ಲ. ಈ ಹಿಂದೆ ‘ಕಾಮನಬಿಲ್ಲು’ ಪುರವಣಿಯಲ್ಲಿ ಪ್ರಕಟವಾದ ನಿಮ್ಮ ಪತ್ರ, ಅದಕ್ಕೆ ನಾನು ಬರೆದ ಉತ್ತರಗಳೆಲ್ಲವೂ ಇದೇ ಮೇಲ್ ವಿಳಾಸವನ್ನು ಬಳಸಿಕೊಂಡಿದ್ದವು ಎಂಬುದನ್ನಿಲ್ಲಿ ನೆನಪಿಸಲು ಬಯಸುತ್ತೇನೆ. ನೀವು ಕಳುಹಿಸದೇ ಇರುವ ಪತ್ರವೊಂದನ್ನು ಪತ್ರಿಕೆ ಪ್ರಕಟಿಸಿಲ್ಲ ಎಂದು ಅದು ಹೇಗೆ ಹೇಳುತ್ತೀರಿ ಎಂಬುದು ನನಗಂತೂ ಅರ್ಥವಾಗುತ್ತಿಲ್ಲ. ‘ಈ ಪತ್ರವನ್ನು ಪ್ರಜಾವಾಣಿ ಪತ್ರಿಕೆ ಪ್ರಕಟಿಸದಿದ್ದುದರಿಂದ ಇಲ್ಲಿ ಪ್ರಕಟಿಸಿದೆ’ ಎಂಬ ಮಾತುಗಳನ್ನು ಬರೆಯುವುದು ತಮ್ಮಂಥ ಹಿರಿಯರಿಗೆ ಶೋಭಿಸುವುದಿಲ್ಲ ಎಂದು ವಿಷಾದಪೂರ್ವಕವಾಗಿ ಇಲ್ಲಿ ದಾಖಲಿಸ ಬಯಸುತ್ತೇನೆ. ಇದನ್ನು ತಕ್ಷಣವೇ ಸರಿಪಡಿಸುತ್ತೇರೆಂದು ನಾನು ಭಾವಿಸಿದ್ದೇನೆ.
ಎನ್.ಎ.ಎಂ. ಇಸ್ಮಾಯಿಲ್
ಮುಖ್ಯ ಉಪಸಂಪಾದಕ
ಪ್ರಜಾವಾಣಿ
ಶ್ರೀ ಎನ್ ಎ ಎಂ ಇಸ್ಮಾಯಿಲ್ ಅವರಿಗೆ ನಮಸ್ಕಾರಗಳು.
ನಾನು ಪ್ರಜಾವಾಣಿಯ ಕಾಮನಬಿಲ್ಲು ಪುರವಣಿಯ ವಾಚಕರವಾಣಿ ವಿಭಾಗಕ್ಕೆಂದು ಬರೆದು ಎಂದಿನಂತೆ ಎಡಿಟ್ ಪೇಜ್ ಅಟ್ ಪ್ರಜಾವಾಣಿ.ಕೊ.ಇನ್ ವಿಳಾಸಕ್ಕೆ ಕಳುಹಿಸಿದ ಈ ಪತ್ರ ನಿಮಗೆ ತಲುಪಿಲ್ಲ ಎಂಬ ನಿಮ್ಮ ವಿವರಣೆಯನ್ನು ಒಪ್ಪಿ ನಿಮ್ಮ ಅಪೇಕ್ಷೆಯಂತೆ ಪಂಡಿತಪುಟದಲ್ಲಿ ಪ್ರಕಟಿಸಿದ ಪತ್ರವನ್ನು ತೆಗೆದಿರಿಸಿದ್ದೇನೆ. ಕಾಮನಬಿಲ್ಲನಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಗಣಕ ಸಾಧನಗಳಲ್ಲಿ ಕನ್ನಡ ಬಳಕೆಗೆ ಇರುವ ಅವಕಾಶಗಳು ಮತ್ತು ಅವುಗಳನ್ನು ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡುವುದು ಅಗತ್ಯ ಎಂದು ಬರೆದಿದ್ದ ನನ್ನ ಪತ್ರದ ಆಶಯವನ್ನು ಗೌಣಗೊಳಿಸಿ ನಾನು ಬಳಸಿರುವ ಕನ್ನಡ ಪಾರಿಭಾಷಿಕಗಳ ಬಗ್ಗೆ ನೀವು ಬರೆದ ಪತ್ರಗಳು ಮತ್ತು ನನ್ನ ಉತ್ತರಗಳ ಹಿನ್ನೆಲೆಯಲ್ಲಿ ಎರಡು ವಾರ ಕಳೆದರೂ ನನ್ನ ಪತ್ರ ಪ್ರಕಟವಾಗಿಲ್ಲ ಎಂದು ಅನಿಸಿತು. ಈಗಲೂ ನೀವು ನನ್ನ ಅಭಿಪ್ರಾಯ ಮಂಡನೆಗೆ ಅವಕಾಶಕೊಡಬಹುದು ಎಂಬ ಭಾವನೆಯಿಂದ ಪಂಡಿತ ಪುಟದ ಪತ್ರವನ್ನು ತೆಗೆದಿರಿಸಿದ್ದೇನೆ. ಈ ಬಗ್ಗೆ ಮುಕ್ತ ವಿಚಾರ ವಿನಿಮಯಕ್ಕೆ ನಿಮ್ಮಲ್ಲಿ ಅವಕಾಶವಿದೆ ಎಂದು ಭಾವಿಸಿದ್ದೇನೆ.
ಪ್ರೀತಿಯಿಂದ
ಪಂಡಿತಾರಾಧ್ಯ